ವೈದ್ಯರ ನಿರ್ಲಕ್ಷ್ಯಕ್ಕೆ 10 ತಿಂಗಳ ಹಸುಗೂಸು ಸಾವು; ಪೋಷಕರ ಆರೋಪ: ಆರೋಪ ನಿರಾಕರಿಸಿದ ವೈದ್ಯ ಬಸವರಾಜ್ ನಾಯ್ಕ್

ವೈದ್ಯರ ನಿರ್ಲಕ್ಷ್ಯಕ್ಕೆ 10 ತಿಂಗಳ ಹಸುಗೂಸು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಖಾಸಗಿ ನರ್ಸಿಂಗ್ ಹೋಂ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.

ಯಲಹಂಕದ ಕೋಗಿಲು ನಿವಾಸಿಗಳಾದ ವಿನೋದ್ ಮತ್ತು ಪ್ರಿಯಾಂಕ ದಂಪತಿಗಳು
ಕಳೆದ ಮೂರು ದಿನಗಳ ಹಿಂದೆ ಪ್ರಿಯಾಂಕಾ ಅವರ
ತವರುಮನೆಯಾದ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಹಳ್ಳಿಗೆ ಬಂದಿದ್ದರು.

ತಮ್ಮ 10 ತಿಂಗಳ ಗಂಡು ಮಗುವಿಗೆ ಬೇದಿಯಾದ ಕಾರಣ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ನಗರದ ಜನತಾ ನರ್ಸಿಂಗ್ ಹೋಮ್‌ಗೆ ದಾಖಲು ಮಾಡಿದ್ದರು, ಮೂರು ದಿನಗಳ ನಂತರ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಮಗುವಿನ ಪೋಷಕರು ಮೃತದೇಹವನ್ನು ಜನತಾ ನರ್ಸಿಂಗ್‌ ಹೋಮ್ ಬಳಿ ತಂದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಮಗುವಿನ ತಂದೆ ವಿನೋದ್ ಮಾತನಾಡಿ, ಮಗುವನ್ನು ದಾಖಲು ಮಾಡಿಕೊಂಡಾಗಿನಿಂದಲೂ ಮಗುವಿಗೆ ನರ್ಸಿಂಗ್ ಹೋಮ್ ಸಿಬ್ಬಂದಿ ಒಟ್ಟು 11 ಗ್ಲುಕೋಸ್ ಡ್ರಿಪ್ಸ್ ಹಾಕಿದ್ದಾರೆ, ಮಂಗಳವಾರ ರಾತ್ರಿ ಮಗುವಿನ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಯಿತು. ಆದರೆ, ಕನ್ನಡ ಬಾರದ ಉತ್ತರ ಭಾರತೀಯ ವೈದ್ಯರೊಬ್ಬರು ಕುಡಿದು ಮಲಗಿದ್ದರು, ಅವರನ್ನು ಎಬ್ಬಿಸಲು ಪ್ರಯತ್ನ ಪಟ್ಟೆವು, ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದರು.

ಇಂದು ಬೆಳಿಗ್ಗೆ 5.30 ರ ಸುಮಾರಿಗೆ ನರ್ಸಿಂಗ್ ಹೋಮ್ ಸಿಬ್ಬಂದಿ ಮಗುವನ್ನು ಡಿ- ಕ್ರಾಸ್ ಸಮೀಪದ ಮತ್ತೊಂದು ಖಾಸಗಿ ಅಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರು, ಅಲ್ಲಿ ಮಗು ನಿತ್ರಾಣಗೊಂಡಿದ್ದು ಇಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಫತ್ರೆಗೆ ಕರೆದುಕೊಂಡು ಹೋಗಿ ಎಂದರು, ಅಲ್ಲಿಂದ ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು, ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗುವಿನ ಪ್ರಾಣ ಹೋಯಿತು ಎಂದು ತಮ್ಮ ಅಳಲು ತೋಡಿಕೊಂಡರು.

ವಿಜಯ ಕರ್ನಾಟಕ ವೇದಿಕೆಯ ಮುಖಂಡ ಸತೀಶ್ ಮಾತನಾಡಿ, ಕಳೆದ ಮೂರು ದಿನಗಳಿಂದ ನರ್ಸಿಂಗ್ ಹೋಮ್‌ನಲ್ಕಿ ಮಗುವಿಗೆ ಚಿಕಿತ್ಸೆ ನಡೆಯುತ್ತಿತ್ತು. ರಾತ್ರಿ ಮಗುವಿನ ಆರೋಗ್ಯ ತೀರ ಹದಗೆಟ್ಟದೆ, ಇದನ್ನು ಡಾಕ್ಟರ್ ಗಮನಕ್ಕೆ ತರಲು ಹೋದಾಗ ಡಾಕ್ಟರ್ ಬಾಗಿಲು ಹಾಕಿಕೊಂಡು ಕುಡಿದು‌ ಮಲಗಿದ್ದ ಕಾರಣ ಅವರು ಬಾಗಿಲು ತೆಗೆದಿಲ್ಲ ಎಂದರು.

ಸಿಬ್ಬಂದಿ ಬಳಿ ಕೇಳಿದಾಗ ಅವರು ಮಗುವಿನ ಪರಿಸ್ಥಿತಿ ಕ್ರಿಟಿಕಲ್ ಆಗಿದೆ ತಕ್ಷಣ ಮಾನಸ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ, ಅವರೂ ಸಹ ಬೇರೆ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ.

ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಅಸುನೀಗಿದೆ, ಈ ಮೊದಲು ಎಲ್ಲಿ ಚಿಕಿತ್ಸೆ ಕೊಡಿಸಿದ್ದೀರಿ..? ಅಲ್ಲಿಗೆ ಹೋಗಿ ಮಗು ಮೃತಪಟ್ಟಿದೆ ಎಂದು‌ ತಿಳಿಸಿದರು. ಈ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿ ಇರೋದಿಲ್ಲ, ತುಂಬಾ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಾರೆ. ಈ ನರ್ಸಿಂಗ್ ಹೋಮ್‌ನಲ್ಲಿ ಈ ಹಿಂದೆಯೂ ಹಲವು ಘಟನೆಗಳು ನಡೆದಿದ್ದವು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು.

ನಿರ್ಜಲೀಕರಣದಿಂದ ಸಾವು:

ಆಸ್ಪತ್ರೆಯ ವೈದ್ಯ ಬಸವರಾಜ್ ನಾಯ್ಕ್ ಪ್ರತಿಕ್ರಿಯಿಸಿ, ನಮಗೆ ಪೋಷಕರು ಹಳೆಯ ಪರಿಚಯ ಆಗಾಗ ಬರುತ್ತಿದ್ದರು, ಎಂದಿನಂತೆ ಆಗಸ್ಟ್ 13 ಬೇದಿಯಾಗುತ್ತಿದೆ ಎಂದು ಮಗುವನ್ನು ಕರೆತಂದರು, ಮಗುವಿಗೆ ಆಹಾರ ಸೇರುತ್ತಿರಲಿಲ್ಲ, ಅತಿಯಾದ ಬೇದಿಯಿಂದಾಗಿ ಮಗು ನಿತ್ರಾಣಗೊಂಡಿತ್ತು, ನಿರ್ಜಲೀಕರಣದಿಂದ ಬಳಲಿತ್ತು, ಡ್ರಿಪ್ಸ್ ಹಾಕಲು ನರ ಸಿಗಲಿಲ್ಲ ನಮ್ಮ ಸಿಬ್ಬಂದಿ ಕಷ್ಟಪಟ್ಟು ಡ್ರಿಪ್ಸ್ ಹಾಕಿದ್ದಾರೆ ಮಗುವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಲಭ್ಯವಿಲ್ಲ ಹಾಗಾಗಿ ಬೇರಡೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ.

ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆ ಈ ಹಿಂದೆ ನೀವೆ ಚಿಕಿತ್ಸೆ ನೀಡಿದ್ದೀರಿ ಈಗಲೂ ನೀವೆ ಚಿಕಿತ್ಸೆ ನೀಡಿ ಎಂದರು. ಮಗುವಿನ ಸಾವಿಗೆ ನಿರ್ಜಲೀಕರಣವೆ ಕಾರಣ ಹೊರತು ನಮ್ಮ ನಿರ್ಲಕ್ಷ್ಯವಲ್ಲ ಎಂದಿದ್ದಾರೆ.

Ramesh Babu

Journalist

Recent Posts

ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ…

11 hours ago

ಅಪರೂಪದ ದುಬಾರಿ ಖಾಯಿಲೆಗಳು…….

ಇದಕ್ಕೊಂದು ಪರಿಹಾರ ರೂಪಿಸಬಹುದೇ...... ಅಪರೂಪದ ದುಬಾರಿ ಖಾಯಿಲೆಗಳು.......... ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ…

1 day ago

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

2 days ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

3 days ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

3 days ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

4 days ago