ವೈದ್ಯರ ನಿರ್ಲಕ್ಷ್ಯಕ್ಕೆ 10 ತಿಂಗಳ ಹಸುಗೂಸು ಸಾವು; ಪೋಷಕರ ಆರೋಪ: ಆರೋಪ ನಿರಾಕರಿಸಿದ ವೈದ್ಯ ಬಸವರಾಜ್ ನಾಯ್ಕ್

ವೈದ್ಯರ ನಿರ್ಲಕ್ಷ್ಯಕ್ಕೆ 10 ತಿಂಗಳ ಹಸುಗೂಸು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಖಾಸಗಿ ನರ್ಸಿಂಗ್ ಹೋಂ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.

ಯಲಹಂಕದ ಕೋಗಿಲು ನಿವಾಸಿಗಳಾದ ವಿನೋದ್ ಮತ್ತು ಪ್ರಿಯಾಂಕ ದಂಪತಿಗಳು
ಕಳೆದ ಮೂರು ದಿನಗಳ ಹಿಂದೆ ಪ್ರಿಯಾಂಕಾ ಅವರ
ತವರುಮನೆಯಾದ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಹಳ್ಳಿಗೆ ಬಂದಿದ್ದರು.

ತಮ್ಮ 10 ತಿಂಗಳ ಗಂಡು ಮಗುವಿಗೆ ಬೇದಿಯಾದ ಕಾರಣ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ನಗರದ ಜನತಾ ನರ್ಸಿಂಗ್ ಹೋಮ್‌ಗೆ ದಾಖಲು ಮಾಡಿದ್ದರು, ಮೂರು ದಿನಗಳ ನಂತರ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಮಗುವಿನ ಪೋಷಕರು ಮೃತದೇಹವನ್ನು ಜನತಾ ನರ್ಸಿಂಗ್‌ ಹೋಮ್ ಬಳಿ ತಂದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಮಗುವಿನ ತಂದೆ ವಿನೋದ್ ಮಾತನಾಡಿ, ಮಗುವನ್ನು ದಾಖಲು ಮಾಡಿಕೊಂಡಾಗಿನಿಂದಲೂ ಮಗುವಿಗೆ ನರ್ಸಿಂಗ್ ಹೋಮ್ ಸಿಬ್ಬಂದಿ ಒಟ್ಟು 11 ಗ್ಲುಕೋಸ್ ಡ್ರಿಪ್ಸ್ ಹಾಕಿದ್ದಾರೆ, ಮಂಗಳವಾರ ರಾತ್ರಿ ಮಗುವಿನ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಯಿತು. ಆದರೆ, ಕನ್ನಡ ಬಾರದ ಉತ್ತರ ಭಾರತೀಯ ವೈದ್ಯರೊಬ್ಬರು ಕುಡಿದು ಮಲಗಿದ್ದರು, ಅವರನ್ನು ಎಬ್ಬಿಸಲು ಪ್ರಯತ್ನ ಪಟ್ಟೆವು, ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದರು.

ಇಂದು ಬೆಳಿಗ್ಗೆ 5.30 ರ ಸುಮಾರಿಗೆ ನರ್ಸಿಂಗ್ ಹೋಮ್ ಸಿಬ್ಬಂದಿ ಮಗುವನ್ನು ಡಿ- ಕ್ರಾಸ್ ಸಮೀಪದ ಮತ್ತೊಂದು ಖಾಸಗಿ ಅಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರು, ಅಲ್ಲಿ ಮಗು ನಿತ್ರಾಣಗೊಂಡಿದ್ದು ಇಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಫತ್ರೆಗೆ ಕರೆದುಕೊಂಡು ಹೋಗಿ ಎಂದರು, ಅಲ್ಲಿಂದ ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು, ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗುವಿನ ಪ್ರಾಣ ಹೋಯಿತು ಎಂದು ತಮ್ಮ ಅಳಲು ತೋಡಿಕೊಂಡರು.

ವಿಜಯ ಕರ್ನಾಟಕ ವೇದಿಕೆಯ ಮುಖಂಡ ಸತೀಶ್ ಮಾತನಾಡಿ, ಕಳೆದ ಮೂರು ದಿನಗಳಿಂದ ನರ್ಸಿಂಗ್ ಹೋಮ್‌ನಲ್ಕಿ ಮಗುವಿಗೆ ಚಿಕಿತ್ಸೆ ನಡೆಯುತ್ತಿತ್ತು. ರಾತ್ರಿ ಮಗುವಿನ ಆರೋಗ್ಯ ತೀರ ಹದಗೆಟ್ಟದೆ, ಇದನ್ನು ಡಾಕ್ಟರ್ ಗಮನಕ್ಕೆ ತರಲು ಹೋದಾಗ ಡಾಕ್ಟರ್ ಬಾಗಿಲು ಹಾಕಿಕೊಂಡು ಕುಡಿದು‌ ಮಲಗಿದ್ದ ಕಾರಣ ಅವರು ಬಾಗಿಲು ತೆಗೆದಿಲ್ಲ ಎಂದರು.

ಸಿಬ್ಬಂದಿ ಬಳಿ ಕೇಳಿದಾಗ ಅವರು ಮಗುವಿನ ಪರಿಸ್ಥಿತಿ ಕ್ರಿಟಿಕಲ್ ಆಗಿದೆ ತಕ್ಷಣ ಮಾನಸ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ, ಅವರೂ ಸಹ ಬೇರೆ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ.

ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಅಸುನೀಗಿದೆ, ಈ ಮೊದಲು ಎಲ್ಲಿ ಚಿಕಿತ್ಸೆ ಕೊಡಿಸಿದ್ದೀರಿ..? ಅಲ್ಲಿಗೆ ಹೋಗಿ ಮಗು ಮೃತಪಟ್ಟಿದೆ ಎಂದು‌ ತಿಳಿಸಿದರು. ಈ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿ ಇರೋದಿಲ್ಲ, ತುಂಬಾ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಾರೆ. ಈ ನರ್ಸಿಂಗ್ ಹೋಮ್‌ನಲ್ಲಿ ಈ ಹಿಂದೆಯೂ ಹಲವು ಘಟನೆಗಳು ನಡೆದಿದ್ದವು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು.

ನಿರ್ಜಲೀಕರಣದಿಂದ ಸಾವು:

ಆಸ್ಪತ್ರೆಯ ವೈದ್ಯ ಬಸವರಾಜ್ ನಾಯ್ಕ್ ಪ್ರತಿಕ್ರಿಯಿಸಿ, ನಮಗೆ ಪೋಷಕರು ಹಳೆಯ ಪರಿಚಯ ಆಗಾಗ ಬರುತ್ತಿದ್ದರು, ಎಂದಿನಂತೆ ಆಗಸ್ಟ್ 13 ಬೇದಿಯಾಗುತ್ತಿದೆ ಎಂದು ಮಗುವನ್ನು ಕರೆತಂದರು, ಮಗುವಿಗೆ ಆಹಾರ ಸೇರುತ್ತಿರಲಿಲ್ಲ, ಅತಿಯಾದ ಬೇದಿಯಿಂದಾಗಿ ಮಗು ನಿತ್ರಾಣಗೊಂಡಿತ್ತು, ನಿರ್ಜಲೀಕರಣದಿಂದ ಬಳಲಿತ್ತು, ಡ್ರಿಪ್ಸ್ ಹಾಕಲು ನರ ಸಿಗಲಿಲ್ಲ ನಮ್ಮ ಸಿಬ್ಬಂದಿ ಕಷ್ಟಪಟ್ಟು ಡ್ರಿಪ್ಸ್ ಹಾಕಿದ್ದಾರೆ ಮಗುವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಲಭ್ಯವಿಲ್ಲ ಹಾಗಾಗಿ ಬೇರಡೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ.

ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆ ಈ ಹಿಂದೆ ನೀವೆ ಚಿಕಿತ್ಸೆ ನೀಡಿದ್ದೀರಿ ಈಗಲೂ ನೀವೆ ಚಿಕಿತ್ಸೆ ನೀಡಿ ಎಂದರು. ಮಗುವಿನ ಸಾವಿಗೆ ನಿರ್ಜಲೀಕರಣವೆ ಕಾರಣ ಹೊರತು ನಮ್ಮ ನಿರ್ಲಕ್ಷ್ಯವಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *