ಕೋಲಾರ: ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಗಾ ಅಟಾಚ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ನಷ್ಟ ಎಂದು ತೋರಿಸಿ ಅಕ್ರಮವಾಗಿ ಮುಚ್ಚಿರುವುದನ್ನು ವಿರೋಧಿಸಿ, ಕೈಗಾರಿಕೆಯನ್ನು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದಿಂದ ನಗರದ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ಸುಮಾರು 2006 ರಲ್ಲಿ ಒಂದು ಸಣ್ಣ ಶೆಡ್ನಲ್ಲಿ ಆರಂಭವಾದ ವೆರ್ಗಾ ಅಟಾಚ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕೈಗಾರಿಕೆಯು 2019 ರಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದೇಶಕ್ಕೆ ರಪ್ತು ಮಾಡಿದ ಲಾಭದಾಯಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಕೈಗಾರಿಕೆಯು ಬುಲ್ಡೋಜರ್ ಬಕೆಟ್ಗೆ ಬೇಕಾಗುವ ಎಕ್ಸ್ ಕವೇಟರ್ ಬಕೆಟ್ಸ್, ರಿಫ್, ಮತ್ತು ಕಪ್ಲರ್ಸ್ 200 ರಿಂದ 1800 ವಿವಿಧ ಸಾಮಗ್ರಿಗಳನ್ನು ತಯಾರಿ ಮಾಡಿ, ಸುಮಾರು 58 ದೇಶಗಳಿಗೆ ರಪ್ತು ಮಾಡುತ್ತಿದ್ದು, ಲಾಭದಾಯಕವಾಗಿ ನಡೆಯುತ್ತಿರುವ ಕೈಗಾರಿಕೆಯಾಗಿದೆ ಈ ಕೈಗಾರಿಕೆಯಿಂದ ಬಂದ ಲಾಭದಿಂದ 2018-19 ರಲ್ಲಿ ವೆರ್ಗಾ 2, ವೆರ್ಗಾ 3 ನೇ ಘಟಕಗಳನ್ನು ಮಾಲೂರು ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ಆರಂಭಿಸಿದ್ದರು. 2023 ರಲ್ಲಿ ವೆರ್ಗಾ 2 ಮತ್ತು ವೆರ್ಗಾ 3 ಘಟಕದ ಹೆಸರುಗಳನ್ನು ವೀರ್ಯ 1 ಮತ್ತು ವೀರ್ಯ 2 ಎಂದು ಹೆಸರು ಬದಲಾವಣೆ ಮಾಡಿದರು. ವೆರ್ಗಾ 1 ಘಟಕದಲ್ಲಿ 2019 ರಲ್ಲಿ ದುಡಿಯುತ್ತಿದ್ದ 182 ಕಾರ್ಮಿಕರಿಗೆ ಹಲವು ಆಸೆ ಆಮೀಷಗಳನ್ನು ನೀಡಿ ಹಂತ ಹಂತವಾಗಿ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು
ವೆರ್ಗಾ ಕಂಪನಿಯಲ್ಲಿ ಪ್ರಸ್ತುತ ದುಡಿಯುತ್ತಿರುವ 81 ಖಾಯಂ ಕಾರ್ಮಿಕರನ್ನು ಮನೆಗೆ ಕಳುಹಿಸಿ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ವೇತನವನ್ನು ನೀಡಿ ಕೆಲಸ ಮಾಡಿಸಿಕೊಳ್ಳುವ ದುರುದ್ದೇಶದಿಂದ ಲಾಭದಾಯಕವಾಗಿರುವ ಕೈಗಾರಿಕೆಯನ್ನು ನಷ್ಠ ಎಂದು ತೋರಿಸುತ್ತಿರುವುದು ಸ್ಪಷ್ಠವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ವಿಜಯಕೃಷ್ಣ ಮಾತನಾಡಿ ಆಡಳಿತ ಮಂಡಳಿಯು ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗದೇ ಇರುವುದು ಸರಿಯಲ್ಲ. ಕಳೆದ 10 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹವನ್ನು ಅಲ್ಲಿನ ಕಾರ್ಮಿಕರು ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಸದೇ ಇರುವುದು ಸರಿಯಲ್ಲ. ತಕ್ಷಣ ಮಧ್ಯ ಪ್ರವೇಶ ಮಾಡಿ, ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು,
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ತಾಲ್ಲೂಕು ಮುಖಂಡರಾದ, ಎಂ.ಭೀಮರಾಜ್, ಎನ್.ಎನ್.ಶ್ರೀರಾಮ್, ಎಸ್ ಆಶಾ, ವಿ.ನಾರಾಯಣರೆಡ್ಡಿ, ಗಂಗಟ್ಟ ಯಲ್ಲಪ್ಪ, ಕೆ.ವಿ.ಮಂಜುನಾಥ್, ಚಿನ್ನಮ್ಮ, ಡಿ.ಎಸ್.ವೆಂಕಟರವಣ ಮುಂತಾದವರು ಇದ್ದರು.