ಸುಮಾರು 80 ವರ್ಷ ಮೀರಿದ ವೃದ್ಧ ದಂಪತಿಯ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯಲ್ಲಿದ್ದ ಒಡವೆ, ನಗದು ಸೇರಿ ಸುಮಾರು ಹದಿನಾಲ್ಕುವರೆ ಲಕ್ಷ ಹಣವನ್ನು ಕಳ್ಳರು ದೋಚಿ ಪರಾರಿಯಾಗಿರುವಂತ ಘಟನೆ ತಾಲೂಕಿನ ಶ್ಯಾಕಲದೇವನಪುರ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ:
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಶ್ಯಾಕಲದೇವನಪುರ ಗ್ರಾಮದಲ್ಲಿ ವಾಸವಿರುವ ೮೧ ವರ್ಷದ ರೇಣುಕಯ್ಯ ವೃದ್ಧ ದಂಪತಿ ವಾಸವಾಗಿದ್ದಾರೆ. ವೃದ್ಧ ರೇಣುಕಯ್ಯ ನಿವೃತ್ತ ಶಿಕ್ಷಕರಾಗಿದ್ದು, ಬಂದ ಪೆನ್ಶೆನ್ ಹಣ ಮತ್ತು ಕೂಡಿಟ್ಟಿದ್ದ ಹಣದಲ್ಲಿ ಮನೆಯನ್ನು ಇತ್ತೀಚೆಗೆ ರಿಪೇರಿ ಮಾಡಿಸಿದ್ದರು. ಇದರಿಂದ ಮನೆಯಲ್ಲಿ ಚಳಿಯಿಂದಾಗಿ ತಂಡಿ ವಾತಾವರಣ ಹೆಚ್ಚಾಗಿತ್ತು.
ಹೃದಯ ಸಂಬಂಧಿತ ಕಾಯಿಲೆಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದ ವೃದ್ಧ ರೇಣುಕಯ್ಯಗೆ ಚಳಿಯಿಂದಾಗಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಡಿಸೆಂಬರ್ ಆರಂಭದಿಂದ ರಾತ್ರಿ ವೇಳೆ ಮಲಗಲು ಹಳೆ ಮನೆಗೆ ಹೋಗುತ್ತಿದ್ದರು. ಇದನ್ನೇ ಟಾರ್ಗೆಟ್ ಮಾಡಿದ ಕಳ್ಳರು ರಾತ್ರಿ ವೇಳೆ ಮನೆಯ ಗ್ರೀಲ್ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಸುಮಾರು ಹದಿನಾಲ್ಕುವರೆ ಲಕ್ಷ ರೂ. ಮೌಲ್ಯದ ಒಡವೆ, ನಗದು ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ.
ಕಣ್ಣೀರಲ್ಲಿ ದಿನ ಕಳೆಯುತ್ತಿರುವ ವೃದ್ಧರು:
ಅಜ್ಜ – ಅಜ್ಜಿ ಇಬ್ಬರೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಕೊನೆಗಾಲದಲ್ಲಿ ಮಕ್ಕಳ ಆಸರೆ ಇಲ್ಲದೆ ಸ್ವಾಭಿಮಾನದಿಂದ ಜೀವನ ಮಾಡುತ್ತಿದ್ದ ದಂಪತಿಗೆ ಜೀವನಾಧಾರಕ್ಕಿದ್ದ ಹಣವನ್ನು ಕಳ್ಳರು ಕಳ್ಳತನ ಮಾಡಿರುವುದು ವೃದ್ಧರಿಗೆ ಮತ್ತಷ್ಟು ಸಂಕಟ ತಂದೊಡ್ಡಿದೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಲ್ಲದ ಸರಣಿ ಕಳ್ಳತನ:
ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ, ಮಾಂಗಲ್ಯ ಸರ ಕಳ್ಳತನ ಹೀಗೆ ಸಾಲು ಸಾಲು ಕಳ್ಳತನಗಳು ನಡೆಯುತ್ತಿದ್ದರೂ ಪೊಲೀಸರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದೆ ಇರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.