ವಿವಿಧ ಸಾಲ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಪ್ರವರ್ಗ-1ರ 6(a) ಯಿಂದ 6(ak)ವರೆಗೆ ಬರುವ ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪ ಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕಾಗಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02.11.2023. ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. (ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ)

1. ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ವಾರ್ಷಿಕ ವರಮಾನ ರೂ.98,000/-ಗಳ ಮಿತಿಯಲ್ಲಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು. ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆ ಜಮೀನು ಹೊಂದಿರಬೇಕು. ಘಟಕ ವೆಚ್ಚ ರೂ.4.75ಲಕ್ಷಗಳು (ವಿದ್ಯುದ್ಧೀಕರಣ ಸೇರಿದಂತೆ) ಹಾಗೂ ಅವಶ್ಯವಿದ್ದಲ್ಲಿ ರೂ.50,000/- ಸಾಲವನ್ನು ಶೇ.4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ವೈಯಕ್ತಿಕ ನೀರಾವರಿ ಕೊಳವೆ ಬಾವಿ ಘಟಕಕ್ಕೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸಲು ಅವಕಾಶ ಇರುತ್ತದೆ.

2. ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆಯಡಿಯಲ್ಲಿ ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಮತ್ತು ನಗರ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು.

ಈ ಯೋಜನೆಯಲ್ಲಿ  ಘಟಕ ವೆಚ್ಚ ರೂ.1,00,000/-ಗಳಿಗೆ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80,000/-ಗಳ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ, ಘಟಕ ವೆಚ್ಚ ರೂ.1,00,000/- ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ಗರಿಷ್ಠ ರೂ.30,000/- ಗಳ ಸಹಾಯಧನ ಉಳಿಕೆ ಶೇ.85ರಷ್ಟು ರೂ.1,70,000/-ಗಳಿಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವುದು.

ಫಲಾನುಭವಿಯು ಒಂದು ಬಾರಿ ಸಾಲ ಪಡೆದು, ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಮರು ಪಾವತಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ಒಂದು ಬಾರಿಗೆ ಮಾತ್ರ ದುಪ್ಪಟ್ಟು ಸಾಲವನ್ನು ಗರಿಷ್ಠ ರೂ.2  ಲಕ್ಷಗಳವರೆಗೆ ಯಾವುದೇ ಸಹಾಯಧನವಿಲ್ಲದೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು.

3. ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು).ಕ ರ್ನಾಟಕ ರಾಜ್ಯದಲ್ಲಿ ವೃತ್ತಿಪರ, ತಾಂತ್ರಿಕ ಇತ್ಯಾದಿ ಉನ್ನತ ಕೋರ್ಸ್ಗಳ ವ್ಯಾಸಂಗಕ್ಕೆ ಪ್ರವೇಶ ಪರೀಕ್ಷಾ ಪ್ರಾಧಿಕಾರಿಂದ (ಸಿ.ಇ.ಟಿ/ಎನ್.ಇ.ಇ.ಟಿ) ಸೀಟು ಪಡೆದು ಕಾಲೇಜಿಗೆ ಸೇರ್ಪಡೆಯಾದವರಿಗೆ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲದ ಮೊತ್ತಕ್ಕೆ ವಾರ್ಷಿಕವಾಗಿ ಗರಿಷ್ಠ ರೂ.1.00 ಲಕ್ಷಗಳನ್ನು ಶೇ.2ರ ಬಡ್ಡಿದರದಲ್ಲಿ ಸಾಲ ನೀಡುವುದು.

ಅರ್ಹತೆಗಳು

ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂ.3.50 ಲಕ್ಷಗಳನ್ನು ಮೀರಿರಬಾರದು. ವಿದ್ಯಾರ್ಥಿಯ ವಯಸ್ಸು 35 ವರ್ಷ ಮೀರಿರಬಾರದು. ವಿದ್ಯಾರ್ಥಿಯು ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ, ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್ಗಳಲ್ಲಿ ಸಿ.ಇ.ಟಿ/ಎನ್.ಇ.ಇ.ಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಇತರೆ ಯಾವುದೇ ಬ್ಯಾಂಕ್/ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದಿರಬಾರದು.

4. ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ) ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳು ಈಗಾಗಲೇ ಹಿಂದಿನ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆದಿರುವ ವಿದ್ಯಾರ್ಥಿಗಳು 2020-21ನೇ ಸಾಲಿನ 04ನೇ ಕಂತು ಮತ್ತು 2022-23ನೇ ಸಾಲಿನ 02 ಕಂತುಗಳ ಸಾಲ ಪಡೆಯಲು ವ್ಯಾಸಂಗ ದೃಢೀಕರಣ ಮತ್ತು ಅಂಕಪಟ್ಟಿ ಸಲ್ಲಿಸುವುದು.

5. ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್ ಡಿ, ಪೋಸ್ಟ್ ಡಾಕ್ಟೋರಲ್ ಮತ್ತು ಮಾಸ್ಟರ್ ಡಿಗ್ರಿ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಇತ್ಯಾದಿ ಉನ್ನತ ಕೋರ್ಸ್ ಗಳ ವ್ಯಾಸಂಗಕ್ಕೆ (QS World Ranking 500) ಪ್ರವೇಶ ಪಡೆದವರಿಗೆ ಸಾಲದ ಮೊತ್ತ ವಾರ್ಷಿಕ ಗರಿಷ್ಠ ರೂ.5.00 ಲಕ್ಷಗಳಂತೆ 3 ವರ್ಷಗಳ ಅವಧಿಗೆ ಶೇ.4ರ ಬಡ್ಡಿದರದಲ್ಲಿ ರೂ.15.00 ಲಕ್ಷಗಳ ಸಾಲ-ಸೌಲಭ್ಯ ಒದಗಿಸಲಾಗುವುದು.

6. ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಮತ್ತು ನಗರ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರಬೇಕು.

ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಡಿ ಸ್ವಯಂ ಉದ್ಯೋಗ ಪ್ರಾರಂಭಿಸಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ.20ರಷ್ಟು ಅಥವಾ ಗರಿಷ್ಠ ರೂ.1.00 ಲಕ್ಷಗಳ ಸಹಾಯಧನವನ್ನು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ನೀಡುವುದು. ಬ್ಯಾಂಕ್‌ಗಳು ಮಂಜೂರು ಮಾಡುವ ಸಾಲಕ್ಕೆ ಬ್ಯಾಂಕ್‌ಗಳ ಚಾಲ್ತಿಯಲ್ಲಿರುವ ಬಡ್ಡಿ ವಿಧಿಸಲಾಗುತ್ತದೆ.

7. ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಮತ್ತು ನಗರ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಅರ್ಜಿದಾರರು ನಿರುದ್ಯೋಗಿ ಆಗಿರಬೇಕು.

ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯ ಸ್ವಯಂ ಟ್ಯಾಕ್ಷಿ ಚಾಲನೆ (Yellow board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು. ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್) ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್/ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಬ್ಯಾಂಕ್ ಪಾಲಿನ ಸಾಲಕ್ಕೆ ಬ್ಯಾಂಕ್ ನಿಗದಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರುಪಾವತಿಸಬೇಕು.

ಸಾಮಾನ್ಯ ಅರ್ಹತೆಗಳು ಮತ್ತು ನಿಬಂಧನೆಗಳು

ಅರ್ಜಿದಾರರು  ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು/ ಸೌಲಭ್ಯವನ್ನು ಜಾರಿಗೊಳಿಸಲಾಗುವುದು.

ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಙಆಗಿರಬೇಕು.

ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು.ವಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.

ಸರ್ಕಾರ/ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ ನಿಬಂಧನೆಗಳನ್ನು ಹೊಂದಿದವರಾಗಿರಬೇಕು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ, ಆ ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಗಳಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿ./ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ/ನಿಗಮದ ವೆಬ್‌ಸೈಟ್ https://ambigaradevolopment.Karnataka.gov.in ರಲ್ಲಿ ಪಡೆಯಬಹುದಾಗಿದೆ.

ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ 080-29605761ಗೆ ಕಛೇರಿ ಸಮಯದಲ್ಲಿ ಬೆಳಗ್ಗೆ 10:00 ರಿಂದ ಸಂಜೆ 5:30ರವರೆಗೆ ಸಂಪರ್ಕಿಸಬಹುದಾಗಿದೆ. ಸರ್ಕಾರ ಮತ್ತು ನಿರ್ದೇಶಕ ಮಂಡಳಿ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯ ಬಯಸುವವರು ಸಹ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಅಗತ್ಯವಾಗಿರುತ್ತದೆ.

ಅರ್ಜಿದಾರರು ಅರ್ಜಿಗಳನ್ನು ದಿನಾಂಕ 02.11.2023ರವರೆಗೆ ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *