ಎಸ್ಜೆ ಪಾರ್ಕ್ ಪೊಲೀಸ್ರು ರಾಜ್ಯದ ವಿವಿಧೆಡೆ ನಡೆದ ಅಕ್ರಮ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಯಶಸ್ವಿಯಾಗಿ ಬಂಧಿಸಿದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದರು.
ಬಂಧಿತರಿಂದ 25ಗ್ರಾಂ ಬಂಗಾರದ ಆಭರಣಗಳು, 124ಗ್ರಾಂ ಬೆಳ್ಳಿಯ ವಸ್ತುಗಳು, ₹6000 ನಗದು, 3 ಕಾರುಗಳು ಮತ್ತು 6 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮಾ ಮೌಲ್ಯ ₹34.27 ಲಕ್ಷ. ಈ ಬಂಧನೆಯೊಂದಿಗೆ ಬೆಂಗಳೂರು, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 11 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ನಿಮ್ಮ ವಾಹನಗಳು ಮತ್ತು ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಯಾವುದೇ ಶಂಕಾಸ್ಪದ ಚಟುವಟಿಕೆಯನ್ನು ನೋಡಿದರೆ ತಕ್ಷಣವೇ #Namma112 ಗೆ ಮಾಹಿತಿ ನೀಡಿ ಎಂದರು.
ತಲಘಟ್ಟಪುರ ಪೊಲೀಸರು ಜೆಎಚ್ಬಿಸಿಎಸ್ ಲೇಔಟ್ನಲ್ಲಿ ಹಗಲು ಮನೆ ಕಳ್ಳತನದಲ್ಲಿ ಭಾಗಿಯಾದ ಐವರು ವಿದೇಶಿ ನಾಗರಿಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹50 ಲಕ್ಷ ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 502 ಗ್ರಾಂ ಚಿನ್ನ ಮತ್ತು ವಜ್ರದ ಆಭರಣಗಳು, 4.5 ಕೆಜಿ ಬೆಳ್ಳಿಯ ವಸ್ತುಗಳು ಹಾಗೂ ಎರಡು ಮೊಬೈಲ್ ಫೋನ್ಗಳು ಸೇರಿವೆ. ಆರೋಪಿಗಳನ್ನು ಘಟನೆಯ 48 ಗಂಟೆಗಳ ಒಳಗೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಗುಂಟೆ ಪಾಳ್ಯ ಪೊಲೀಸರು ಮನೆಕಳ್ಳತನ ಪ್ರಕರಣದಲ್ಲಿ, ಮನೆ ಕೆಲಸದಾತನನ್ನು ಬಂಧಿಸಿದ್ದು, ಬಂಧಿತನಿಂದ ಮನೆಯಲ್ಲಿ ಕದ್ದಿದ್ದ ಒಟ್ಟು ಸುಮಾರು ₹10 ಲಕ್ಷ ಮೌಲ್ಯದ 128 ಗ್ರಾಂ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮನೆಕೆಲಸದವರನ್ನು ನೇಮಿಸಿಕೊಳ್ಳುವ ಮೊದಲು ಅವರ ಸರಿಯಾದ ಹಿನ್ನೆಲೆಯನ್ನು ಪರಿಶೀಲನೆ ಮಾಡಿ ಎಂದು ನಗರದ ನಾಗರಿಕರಿಗೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಸುಬ್ರಮಣ್ಯಪುರ ಠಾಣೆ ಪೊಲೀಸರು ಚಿನ್ನದ ಆಭರಣಗಳನ್ನು ಕದ್ದೊಯ್ದ ಪ್ರಮುಖ ಆರೋಪಿ ಮತ್ತು ಅವನ ಸಹಚರರನ್ನು ಬಂಧಿಸಿದ್ದು, 202.9 ಗ್ರಾಂ ತೂಕದ ₹16 ಲಕ್ಷ ಮೌಲ್ಯದ ಕಳವು ಮಾಡಿದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಕಾರ್ಯ ಮುಂದುವರೆದಿದೆ ಎಂದರು.
ಅದೇ ರೀತಿ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯವರು ₹2.46 ಕೋಟಿ ನಗದು ಮತ್ತು ರೆಂಟಲ್ ಆ್ಯಪ್ ಮೂಲಕ ಬುಕ್ ಮಾಡಿದ ಇನೋವಾ ಕಾರು ಕದ್ದಿದ್ದ ಇಬ್ಬರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ₹2,20,48,000 ನಗದು, ₹15 ಲಕ್ಷ ಮೌಲ್ಯದ ಇನೋವಾ ಕಾರು ಮತ್ತು ಕೃತ್ಯದಲ್ಲಿ ಬಳಸಿದ ಸ್ವಿಫ್ಟ್ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ—ಒಟ್ಟು ₹2.35 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.