2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪಡಿತರದಲ್ಲಿ 5 ಕೆ.ಜಿ ಅಕ್ಕಿ ಜೊತೆ ಇನ್ನೂ 5 ಕೆ.ಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ.
ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು
ಬಿಜೆಪಿ ಪ್ರಣಾಳಿಕೆಯ ಪ್ರಮುಖ 10 ಭರವಸೆಗಳು
1. ಬಿಪಿಎಲ್ ಕಾರ್ಡ್ದಾರರಿಗೆ ವರ್ಷಕ್ಕೆ ಉಚಿತ 3 ಗ್ಯಾಸ್ ಸಿಲಿಂಡರ್ ವಿತರಣೆ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ವೇಳೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಗ್ಯಾರಂಟಿ.
2. ಪೋಷಣ್ ಯೋಜನೆ ಮೂಲಕ ಬಿಪಿಎಲ್ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲನ್ನು ವಿತರಣೆ. ಇದರ ಜೊತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು ಶ್ರೀ ಅನ್ನ ಒಳಗೊಂಡ 5 ಕೆಜಿ ಸಿರಿಧಾನ್ಯದ ಪಡಿತರ ಕಿಟ್ ವಿತರಣೆ.
3. ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಭರವಸೆ. ಎನ್ಆರ್ಸಿ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ, ಎಲ್ಲ ಅಕ್ರಮ ವಲಸಿಗರ ಗಡಿಪಾರು ಮಾಡುತ್ತೇವೆ ಎಂಬ ಭರವಸೆ.
4. ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ – ಈ ಯೋಜನೆಯ ಮೂಲಕ ಎಸ್ಸಿ, ಎಸ್ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ 10 ಸಾವಿರ ರೂ.ವರೆಗೂ ಫಿಕ್ಸಡ್ ಠೇವಣಿ ಭರವಸೆ.
5. ಕಡಿಮೆ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರ ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ದ ಸ್ಥಾಪನೆಯ ಭರವಸೆ.
6. ಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ‘ರಾಜ್ಯ ರಾಜಧಾನಿ ಪ್ರದೇಶ’ ಎಂದು ಘೋಷಣೆ. ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುತ್ತೇವೆ ಎಂಬ ಭರವಸೆ.
7. ಕರ್ನಾಟಕವನ್ನು ಎಲೆಕ್ಟ್ರಾನಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾರ್ಜಿಂಗ್ ಸ್ಟೇಷನ್ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್ಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿರುವ ಬಿಜೆಪಿ, ಬೆಂಗಳೂರಿನ ಹೊರವಲಯದಲ್ಲಿ ‘ಇಬಿ ಸಿಟಿ’ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದೆ.
8. 30 ಸಾವಿರ ಕೋಟಿ ರೂ. ಮೊತ್ತದ ಕೆ-ಅಗ್ರಿ ಫಂಡ್: ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಈ ಫಂಡ್ನ ಸ್ಥಾಪನೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣದ ಭರವಸೆ. 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್ಗಳನ್ನು ಸ್ಥಾಪಿಸುವ ಭರವಸೆ.
9. ಟೂರಿಸಂ ಸರ್ಕ್ಯೂಟ್ಗಳ ಅಭಿವೃದ್ಧಿಗೆ 1,500 ಕೋಟಿ ರೂ. ವಿನಿಯೋಗ. ಇದರ ಅಡಿಯಲ್ಲಿ ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್, ಗಾಣಗಾಪುರ ಕಾರಿಡಾರ್ ಅಭಿವೃದ್ಧಿಯ ಭರವಸೆ.
10. ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರ್ಗೆ 5 ರೂ.ನಿಂದ 7 ರೂ.ಗೆ ಏರಿಕೆಯ ಭರವಸೆ ನೀಡಲಾಗಿದೆ.