ವಾರದ ಅಂತರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ವಿಧಿಯಾಟಕ್ಕೆ ಐವರು ದುರ್ಮರಣ

 

ಒಂದೇ ವಾರದ ಅಂತರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿ, ಐವರು ದುರ್ಮರಣ ಹೊಂದಿದ್ದಾರೆ. ಒಂದೊಂದು ಸಾವು ಕೂಡ ಇಡೀ ಕುಟುಂಬವನ್ನೇ ಬೀದಿಗೆ ತಂದಿದೆ. ಅಥಾರ್ತ್ ಕುಟುಂಬದ ಯಜಮಾನರನ್ನೇ ಅಪಘಾತಗಳು ಬಲಿ ತೆಗೆದುಕೊಂಡಿವೆ.

ಜೀವ ಹಿಂಡಿದ ತಂದೆ-ಮಗಳ ಸಾವು:

ಆಗಸ್ಟ್ 10 ರಂದು ಬೆಳಗ್ಗೆ ಎದ್ದ ಮಗಳು ಶಾಲೆಗೆ ಸಿದ್ಧವಾಗಿ ಮನೆಯಿಂದ ಹೊರಡುವಾಗ ದೇವರಿಗೆ ಕೈ ಮುಗಿದು, ಅಮ್ಮನಿಗೆ ಹೋಗಿ ಬರುತ್ತೇನೆ ಅಮ್ಮ ಎಂದು ಹೇಳಿ ತಂದೆಯೊಂದಿಗೆ ಬೈಕ್ ಏರಿ ಶಾಲೆಯತ್ತ ಹೊರಟ ಅಪ್ಪ- ಮಗಳನ್ನು ವಿಧಿಯಾಟ ಅತ್ಯಂತ ಹೀನಾಯವಾಗಿ ಬಲಿ ತೆದುಕೊಂಡಿತು. ದೊಡ್ಡಬಳ್ಳಾಪುರ-ದಾಬಸ್ಪೇಟೆ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿಯಾದ ರಭಸಕ್ಕೆ ಅಪ್ಪ ಮಗಳನ್ನು ಕಾಪಾಡಿಕೊಳ್ಳಲು ಆಗದೆ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಕೈ ತುಂಡಾಗಿ ಜೀವನ್ಮರಣ ಹೋರಾಟದ ಮಧ್ಯೆ ಉಸಿರಾಡುತ್ತಿದ್ದ ಬಾಲಕಿ ಯಶಸ್ವಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆರು ದಿನಗಳ ಕಾಲ ವಿಧಿಯಾಟದೊಂದಿಗೆ ಹೋರಾಟ ಮಾಡಿ ಕೊನೆಗೂ ಜೀವ ಕೈ ಚೆಲ್ಲಿದಳು. ಯಶಸ್ವಿನಿಯ ಚೇತರಿಕೆಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆರ್ಥಿಕ ಸಹಾಯದ ಜೊತೆಗೆ ರಕ್ತದಾನ ಮಾಡಿ
ಆಕೆಯ ಅಮ್ಮನಿಗೆ ಧೈರ್ಯ ತುಂಬಿದ್ದರು. ಯಶಸ್ವಿನಿ ಓದುತ್ತಿದ್ದ ಲಾವಣ್ಯ ವಿದ್ಯಾಸಂಸ್ಥೆ ಮಕ್ಕಳು ಸೇರಿದಂತೆ ಇಡೀ ತಾಲ್ಲೂಕು ಜನತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆದರೆ ವಿಧಿಯಾಟ ಕಂದಮ್ಮಳನ್ನು ಬಿಡಲಿಲ್ಲ. ಈ ಘಟನೆ ಎಂತಹ ಕಠಿಣ ಹೃದಯದವರನ್ನು ಒಮ್ಮೆ ಕಣ್ಣೀರು ಹಾಕಿಸಿತು.

ಮಾದರಿ ಜೀವನ ನಡೆಸುತ್ತಿದ್ದ ಯಲ್ಲಪ್ಪ ಸಾವು:

ಸಂದರ್ಭದ ಒತ್ತಡಕ್ಕೆ ಸಿಲುಕಿ ಸಾಧನೆಗೈಯುವ 24ರ ವಯಸ್ಸಿನಲ್ಲಿ ನಡೆದ ಆಚಾತುರ್ಯದಿಂದಾಗಿ ಜೈಲು ಪಾಲದ ಯಲ್ಲಪ್ಪ ಬಿಡುಗಡೆಯಾಗಿದ್ದು ಬರೋಬ್ಬರಿ 14 ವರ್ಷಗಳ ನಂತರ, ಜೈಲಿನಲ್ಲಿದ್ದರೂ ಸಾಧನೆ ಬಿಡದ ಯಲ್ಲಪ್ಪ ಮೂರು ಡಿಗ್ರಿಗಳನ್ನು ಪಡೆದು, ಬರಹಗಾರನಾಗಿ, ಸಂಶೋಧಕನಾಗಿ ರೂಪಗೊಂಡು ಮಾದರಿ ಪ್ರಜೆಯಾಗಿ ಹೊರ ಬಂದರು. ಹೊರಬರುವ ವೇಳೆಗೆ ‘ಜೈಲು ಜೀವಗಳು’ ಪುಸ್ತಕ ಬರೆದು ಖ್ಯಾತಿ ಪಡೆದಿದ್ದರು. ಪರಿಸರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಯಲ್ಲಪ್ಪ ನಾಗರಕೆರೆಯನ್ನು ಸ್ವಚ್ಚಗೊಳಿಸುವ, ಉಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ರೂಪಗೊಂಡಿದ್ದ ಯಲ್ಲಪ್ಪ ಕ್ರೀಡೆಯಲ್ಲಿಯೂ ಸಾಧಿಸುವ ಹಂಬಲವನ್ನು ಹೊಂದಿದ್ದರು. ಹಲವು ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟಗಳನ್ನು ಆಯೋಜಿಸಿ, ಕಬಡ್ಡಿ ತರಬೇತುದಾರರಾಗಿ ಹಲವು ಕ್ರೀಡಾಪಟುಗಳನ್ನು ಅಣಿಗೊಳಿಸಿದ್ದರು. ಇಂತಹ ಯಲ್ಲಪ್ಪ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ತಾಲ್ಲೂಕಿನ ಜನತೆಗೆ ಬಹಳಷ್ಟು ನೋವುಂಟು ಮಾಡಿದೆ.

ಹಿಟ್ ಅಂಡ್ ರನ್ ಗೆ ಓರ್ವ ಬಲಿ:

ಆ.15ರ(ಮಂಗಳವಾರ) ಸಂಜೆ ಸುಮಾರು 44 ವರ್ಷದ ದೇವರಾಜ್ ಕೆಲಸ ಮುಗಿಸಿ ತರಕಾರಿ ತಗೆದುಕೊಂಡು ಮನೆಗೆ ಬರುವ ಮಾರ್ಗದಲ್ಲಿ ಘಾಟಿ ಕಡೆಯಿಂದ ಬಂದ ಕಾರೋಂದು ದೇವರಾಜ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ದೇವರಾಜ್ ಮೃತಪಟ್ಟಿದ್ದಾರೆ. ಈ ಘಟನೆ ಮೃತ ದೇವರಾಜ್ ಊರಾದ ಹಾಡೋನಹಳ್ಳಿ ಬಳಿ ನಡೆದಿದೆ. ಮೃತ ದೇವರಾಜ್ ಮನೆ ಇನ್ನೇನು 200‌ಮೀ ದೂರದಲ್ಲಿತ್ತು ಅಷ್ಟರಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಅತಿವೇಗದ ಕಾರೊಂದು ಲಾರಿಗೆ ಡಿಕ್ಕಿ: ಹಲವರಿಗೆ ಗಾಯ

ಆ.9ರಂದು ನಗರದ ಪಾಲನಜೋಗಿಹಳ್ಳಿ ಬಳಿ ತರಕಾರಿ ತುಂಬಿದ ವಾಹನಕ್ಕೆ ಹಿಂದೆಯಿಂದ ಅತಿವೇಗವಾಗಿ, ಅಜಾಗರೂಕತೆಯಿಂದ ಬಂದಂತಹ ಕಾರೋಂದು ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಪಾಲಾದರು. ಅದೇರೀತಿ ಮಧ್ಯರಾತ್ರಿ ಗೌರಿಬಿದನೂರು ಬಂದ ಬೈಕ್ ಡಿವೈಡರ್ ಗೆ ಡಿಕ್ಕಿ‌ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು, ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದರಿಂದ ಆಸ್ಪತ್ರೆಗೆ ದಾಖಲು.

ಮನೆ ಯಜಮಾನರನ್ನು ಕಳೆದುಕೊಂಡವರ ಸ್ಥಿತಿ ಶೋಚನಿಯ:

ಕುಟುಂಬಗಳಿಗೆ ಆಧಾರಸ್ಥಂಬವಾಗಿದ್ದ ಯಜಮಾನರನ್ನು ವಿಧಿಯಾಟದಲ್ಲಿ ಕಳೆದುಕೊಂಡ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆಯುತ್ತಿರುವುದು ಶ್ಲಾಘನೀಯ

ಅಪಘಾತ, ವಾಹನ ದಟ್ಟಣೆ ನಿಯಂತ್ರಣಕ್ಕೆ ಹಲವರಿಂದ ಮನವಿ

ಪದೇ ಪದೇ ಅಪಘಾತ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಆನೇಕ ಸಾವು ನೋವು ಸಂಭವಿಸಿವೆ. ಇದಕ್ಕೆಲ್ಲಾ ಕಾರಣ ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡದೇ ಇರುವುದು, ಕುಡಿದ ನಶೆಯಲ್ಲಿ ವೇಗವಾಗಿ, ಅಡ್ಡಾದಿಡ್ಡಿಯಾಗಿ, ಅಜಾಗರೂಕವಾಗಿ ವಾಹನ ಚಲಾಯಿಸುವುದು, ಬೈಕ್ ಸವಾರರು ಹೆಲ್ಮೆಟ್ ಧರಿಸದೇ, ಕಾರು ಚಾಲಕರು ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸುತ್ತಿವೆ. ಅದೇರೀತಿ ಸಂಬಂಧಿಸಿದ ಇಲಾಖೆಗಳಿಂದ ನಡೆಸಲಾಗುವ ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಕಾಮಗಾರಿ, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ರಸ್ತೆ ಇಕ್ಕೆಲಗಳಲ್ಲಿ ತಲೆಎತ್ತಿರುವ ಅಂಗಡಿಗಳು ಸೇರಿದಂತೆ ಇರತೆ ಕಾರಣಗಳಿದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.

ನಗರದಲ್ಲಿ ಪ್ರತಿನಿತ್ಯ ಡಿಕ್ರಾಸ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಟಿ.ಬಿ.ಸರ್ಕಲ್), ಎಪಿಎಂಸಿ ಮಾರುಕಟ್ಟೆ ಮುಂಭಾಗ, ಖಾಸ್ ಬಾಗ್, ರೈಲ್ವೇ ಸ್ಟೇಷನ್, ಡೈರಿ ಸರ್ಕಲ್, ತಾಲೂಕು ಕಚೇರಿ ವೃತ್ತ, ಕೊಂಗಾಡಿಯಪ್ಪ ರಸ್ತೆ‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ, ಇಂತಹ ಸ್ಥಳಗಳಲ್ಲಿ ಸಂಚಾರಿ ನಿಯಮ ಅಳವಡಿಕೆ, ಸಿಬ್ಬಂದಿ ನಿಯೋಜನೆ‌ ಸೇರಿದಂತೆ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಅವರನ್ನು ಹತೋಟಿಗೆ ತರುವಂತೆ ಪೊಲೀಸ್ ಇಲಾಖೆಗೆ‌ ರಾಜಕೀಯ ಮುಖಂಡರು, ಹೋರಾಟಗಾರರು ಮನವಿ ಮಾಡಿದ್ದಾರೆ.

ಅಪಘಾತದಿಂದ ಸಾವು-ನೋವು ಆದ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿ ಸಾವು-ನೋವು ಆದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆಯಿಂದ ರಸ್ತೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಗಟ್ಟವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿ ವಾಹನಗಳ ವೇಗ ನಿಯಂತ್ರಿಸಲು ಜಿಗ್ ಜಾಗ್ ಮಾದರಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಅದೇರೀತಿ ನಗರದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ ಇದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳ ತೆರವು ಕಾರ್ಯ ಸಹ ನಡೆಸಲಾಗುತ್ತಿದೆ.

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

2 hours ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

23 hours ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

1 day ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago