ವಾಯುಭಾರ ಕುಸಿತ: ರಾಗಿ ಬೆಳೆ ಸಂರಕ್ಷಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ

ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ಭಾರತ ದೇಶದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 02 ರವರೆಗೆ 4 ದಿನಗಳ ಕಾಲ ಜಿಲ್ಲೆಯ ಕೆಲವು ಭಾಗಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ರಾಗಿ ಬೆಳೆಯು ವಿವಿಧ ಹಂತದಲ್ಲಿದ್ದು, ಮಳೆ ಗಾಳಿ ಸಂದರ್ಭದಲ್ಲಿ ನೆಲಕುರುಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈತರು ತಮ್ಮ ಜಮೀನಿನಲ್ಲಿ ಇರುವ ಬೆಳೆಯನ್ನು ಸಣ್ಣ ಸಣ್ಣ ಕಟ್ಟುಗಳಾಗಿ / ಕುಚ್ಚುಗಳಾಗಿ ಕಟ್ಟಿ ಗಾಳಿಗೆ ಬೀಳದಂತೆ ಜಾಗ್ರತೆ ವಹಿಸುವುದು. ಕಟಾವಿಗೆ ಬಂದಿರುವ ರಾಗಿಯನ್ನು 4 ರಿಂದ 5 ದಿನ ಮುಂದೂಡಿ ಕಟಾವು ಮಾಡುವುದು. ಈಗಾಗಲೇ ಕಟಾವು ಮಾಡಿದ ರಾಗಿ ಜಮೀನಿನಲ್ಲಿ ಇಟ್ಟಿದ್ದರೆ ತೇವಾಂಶವಿಲ್ಲದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಶೀಲೀಂದ್ರ ಬೆಳೆದು ಹಾಳಾಗದಂತೆ ಶೇಖರಿಸಿ ಸಂರಕ್ಷಿಸುವುದು. ಜಮೀನಿನಲ್ಲಿ ನೀರು ನಿಲ್ಲದಂತೆ ಸಣ್ಣ ಸಣ್ಣ ಕಾಲುವೆಗಳಾಗಿ ಮಾಡಿ ನೀರು ಬಸಿದು ಹೋಗುವಂತೆ ನೋಡಿಕೊಂಡು ಬೆಳೆ ನಷ್ಟವಾಗದಂತೆ ಕಾಪಾಡಿಕೊಳ್ಳುವಂತೆ ಕೃಷಿ ಇಲಾಖಾ ವತಿಯಿಂದ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!