ವಲಸೆ ಕಾರ್ಮಿಕರಿಗೆ ‘ಶ್ರಮಿಕ್ ನಿವಾಸ್’ ಯೋಜನೆ ಜಾರಿ, ಶ್ರಮಿಕರ ಗೌರವಯುತ ಬದುಕಿನತ್ತ ಮಹತ್ವದ ಹೆಜ್ಜೆ: ಸಚಿವ ಶಿವರಾಂ ಹೆಬ್ಬಾರ್

ಇತರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ವಸತಿ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ್’ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯಿಂದಾಗಿ ಶ್ರಮಿಕ ವರ್ಗವೂ ಸಹ ಗೌರವದ ಬದುಕು ಕಂಡುಕೊಳ್ಳಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.

ದೊಡ್ಡಬಳ್ಳಾಪುರದ ಓಬದೇನಹಳ್ಳಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮಹತ್ವಾಕಾಂಕ್ಷೆಯ “ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ಬೃಹತ್ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ದೇಶದಲ್ಲೇ ಮೊಟ್ಟ ಮೊದಲು ಎನ್ನಬಹುದಾದ ಶ್ರಮಿಕ್ ನಿವಾಸ್ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದ ಸಚಿವರು, ಈ ಯೋಜನೆ ಜಾರಿಯಿಂದ ರಾಜ್ಯ ಮತ್ತು ದೇಶದ ಘನತೆ ಹೆಚ್ಚಲಿದೆ ಅಂತೆಯೇ ವಲಸೆ ಕಾರ್ಮಿಕರಲ್ಲೂ ಭರವಸೆ ಮೂಡಲಿದ್ದು, ಇದರಿಂದ ಆ ವರ್ಗವೂ ಸಹ ಗೌರವದ ಬದುಕು ಕಾಣಲು ಸಾಧ್ಯವಾಗಲಿದೆ ಎಂದರು.

“ದೇಶವನ್ನು ರಕ್ಷಿಸುವ ಸೈನಿಕರು, ಹಸಿವು ನೀಗಿಸುವ ರೈತರು ಮತ್ತು ದೇಶ ಕಟ್ಟುವುದರಲ್ಲಿ ಮಹತ್ವದ ಪಾತ್ರವಹಿಸಿರುವ ಶ್ರಮಿಕ ವರ್ಗ ಸುಖಃ ನೆಮ್ಮದಿ ಶಾಂತಿಯಿಂದ ಇದ್ದರೆ ದೇಶದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಹೀಗಾಗಿ ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ” ಎಂದರು.

2006ರಲ್ಲಿ ಜಾರಿಗೆ ಬಂದಿರುವ ಕಾನೂನಿನಂತೆ ರಸ್ತೆ, ಮನೆ, ಬೃಹತ್ ವಸತಿ ಗೃಹ ಸೇರಿದಂತೆ ಯಾವುದೇ ನಿರ್ಮಾಣ ಆಗಬೇಕಿದ್ದರೆ ನಿರ್ಮಾಣಕ್ಕೂ ಮುನ್ನ ಶೇ.1ರಷ್ಟನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು. ತಪ್ಪಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇರುತ್ತದೆ ಎಂದ ಸಚಿವ ಹೆಬ್ಬಾರ್, ಈ ಹಣದಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡುತ್ತಿದೆ ಎಂದರು.

ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ‘ಶ್ರಮಿಕ್ ನಿವಾಸ್’ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, 138.71 ಕೋಟಿ ವೆಚ್ಚದಲ್ಲಿ ಶಿವಮೊಗ್ಗ, ಕಲ್ಬುರ್ಗಿ, ದಾವಣಗೆರೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೋಜನೆಯು ಪ್ರಗತಿಯ ಹಂತದಲ್ಲಿವೆ.

ಅದರಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಓಬದೇವನಹಳ್ಳಿಯಲ್ಲಿ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಸತಿ ಸಮುಚ್ಛಯ ಯೋಜನೆಯಲ್ಲಿ 10 ಕೋಟಿ ವೆಚ್ಛದಲ್ಲಿ ನಿರ್ಮಿಸಲಾದ ಮೊದಲ ಹಂತದ ಸಮುಚ್ಚಯ ಕಾಮಗಾರಿಯು ಪೂರ್ಣಗೊಂಡಿದ್ದು ಲೋಕಾರ್ಪಣೆಗೊಳಿಸಲಾಗಿದೆ ಮತ್ತು ಉಳಿಕೆ 30 ಕೋಟಿ ವೆಚ್ಛದ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸಚಿವ ಹೆಬ್ಬಾರ್ ಮಾಹಿತಿ ನೀಡಿದರು.

ಶ್ರಮಿಕ್ ನಿವಾಸ್ ಯೋಜನೆಯಡಿ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯಗಳು ನಿರ್ಮಾಣವಾಗುತ್ತಿದೆ. ಏಕ ವಸತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದ್ದು, ಏಕ ಹಾಸಿಗೆ ವ್ಯವಸ್ಥೆ ಮತ್ತು ದ್ವಿ-ಹಾಸಿಗೆ ವ್ಯವಸ್ಥೆ ಲಭಿಸಲಿದೆ. ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೆಂಕಟರಮರಯ್ಯ, ತಮ್ಮ ಕ್ಷೇತ್ರದ ಓಬದೇನಹಳ್ಳಿಯಲ್ಲಿ ಕಾರ್ಮಿಕ ಇಲಾಖೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಶ್ರಮಿಕ್ ನಿವಾಸ್ ಯೋಜನೆಯಡಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಗೊಳಿಸಿರುವುದು ತಮಗೆ ಸಂತಸ ತಂದಿದೆ ಎಂದರು.

ಈ ಪ್ರದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಮಹಾದಾಸೆ ತಮ್ಮದಾಗಿತ್ತು, ಆದರೀಗ ಶ್ರಮಿಕ್ ನಿವಾಸ್ ಇಲ್ಲಿ ನಿರ್ಮಾಣವಾಗಿರುವುದರಿಂದ ವಲಸೆ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಪ್ರಸಾದ್ ಎಂ.ಪಿ, ಮಂಡಳಿ ಜಂಟಿ ಕಾರ್ಯದರ್ಶಿ ಡಾ. ಶಿವಪುತ್ರ ಬಾಬುರಾವ್, ಕಲ್ಯಾಣ ಆಯುಕ್ತರಾದ ಟಿ. ಆಂಜನೇಯ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ತೇಜಸ್ ಕುಮಾರ್, ಮಂಡಳಿ ಸದಸ್ಯರಾದ ವೆಂಕಟೇಶ್, ಶಿವಾನಿ ಶಾಂತರಾಮ್ ಸೇರಿದಂತೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

Ramesh Babu

Journalist

Recent Posts

ದೇಶದ ಅಭಿವೃದ್ಧಿಗೆ ದೇವೇಗೌಡರ ಸೇವೆ ಅಗತ್ಯ: ದೇವೇಗೌಡರು ರಾಜ್ಯಸಭೆಯಲ್ಲಿ ಮುಂದುವರಿಯಲಿ- ಬಿ.ಮುನೇಗೌಡ ಒತ್ತಾಯ

ದೊಡ್ಡಬಳ್ಳಾಪುರ: ನಾಳೆ(ಮೇ.18) ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಜನ್ಮದಿನದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ…

4 minutes ago

ಕೇವಲ 200 ರೂ. ಬಾಕಿ ಹಣ ಕೇಳಿದ್ದಕ್ಕೆ ಕಾಫಿ-ಟೀ ಅಂಗಡಿ ಮಾಲೀಕನ ಕೊಲೆ

ದೊಡ್ಡಬಳ್ಳಾಪುರ: ಕೇವಲ 200 ರೂಪಾಯಿ ಬಾಕಿ ಹಣ ಕೇಳಿದ್ದಕ್ಕೆ ಕಾಫಿ-ಟೀ ಅಂಗಡಿ ಮಾಲೀಕನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ…

7 hours ago

2025–26 ಹಣಕಾಸು ವರ್ಷದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ದಾಖಲೆ ಬೆಳವಣಿಗೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2025–26ನೇ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆ ಎರಡೂ ವಿಭಾಗಗಳಲ್ಲಿ…

10 hours ago

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ- ಕಾನೂನು ಬಾಹಿರ ಚಟುವಟಿಕೆ ಸಂಪೂರ್ಣವಾಗಿ ತ್ಯಜಿಸಬೇಕು- ಪೊಲೀಸ್ ಮೇಷ್ಟ್ರಿಂದ ರೌಡಿಗಳಿಗೆ ಕಾನೂನು ಪಾಠ: ಮಿಟ್ಟೆ ಗ್ಯಾಂಗ್ ಗೆ ವಿಶೇಷ ವಾರ್ನಿಂಗ್

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ,…

22 hours ago

ಮದುವೆ ಸಂಭ್ರಮದ ನಡುವೆ ಬೈಕ್ ಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಚಿಕ್ಕಬಳ್ಳಾಪುರ: ಜಿಲ್ಲೆಯ ತಾಲೂಕಿನ ಅರಸನಹಳ್ಳಿಯಲ್ಲಿ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಮದುವೆ ಕಾರ್ಯಕ್ರಮವಿದ್ದ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು…

1 day ago

ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಹಿನ್ನೆಲೆ: ಮಧುರೆ ಶನೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತಸಾಗರ

ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಒಂದೇ ದಿನ ಬಂದಿರುವ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಶನೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತಸಾಗರ…

1 day ago