ವಕೀಲ ಪ್ರತಾಪ್ ಜಮೀನು ವ್ಯಾಜ್ಯಕ್ಕೆ ಬಿಗ್ ಟ್ವಿಸ್ಟ್: ‘ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿಪಡಿಸಲು ಹೇಳಿದ್ದೇ ಶಾಸಕ ಧೀರಜ್ ಮುನಿರಾಜ್’- ವಕೀಲ ಪ್ರತಾಪ್ ಗಂಭೀರ ಆರೋಪ

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ 23/2, 23/3, 23/4, 23/8 ರಲ್ಲಿ ಸುಮಾರು 20 ಎಕರೆ ಜಮೀನನ್ನು ಕಾನೂನಾತ್ಮಕವಾಗಿ ಕ್ರಯಕ್ಕೆ ಪಡೆದು ಖಾತೆ ಮಾಡಿಸಿಕೊಳ್ಳಲಾಗಿರುತ್ತದೆ.. ಈ ಹಿನ್ನೆಲೆ ಮಾ.29ರ ಭಾನುವಾರದಂದು ಜಮೀನಿಗೆ ಕಾಂಪೌಂಡ್ ನಿರ್ಮಿಸುವ ವೇಳೆ ದಡಘಟ್ಟಮಡಗು ಗ್ರಾಮದ ಒಂದು ಕುಟುಂಬದ 19 ಮಂದಿ, ಜೊತೆಗೆ ಅವರ ಹತ್ತಿರ ಸಂಬಂಧಿಗಳು ಸಹ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಗೆ ಪರೋಕ್ಷವಾಗಿ ಶಾಸಕ ಧೀರಜ್ ಮುನಿರಾಜ್ ಕಾರಣರಾಗಿರುತ್ತಾರೆ ಎಂದು ವಕೀಲ ಪ್ರತಾಪ್ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡಿದವರ ಹೆಸರಲ್ಲಿ ಯಾವ ದಾಖಲೆ ಇಲ್ಲ. ಆದರೂ ನಮ್ಮ ಮೇಲೆ ಗಲಾಟೆಗೆ ಬರುತ್ತಿದ್ದರು. ಆಗ ನಾವು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ವಿ, ಈ ಹಿನ್ನೆಲೆ ನಾರಾಯಣಗೌಡ ಮತ್ತು ಅವರ ಕುಟುಂಬದವರು ಶಾಸಕ ಧೀರಜ್ ಮುನಿರಾಜ್ ಬಳಿ ಹೋಗುತ್ತಾರೆ. ಆಗ ಅವರು ದಾಖಲೆಗಳನ್ನು ಪರಿಶೀಲನೆ ಮಾಡಿ ಕಾನೂನಾತ್ಮಕವಾಗಿ ಎಲ್ಲಾ ಪ್ರತಾಪ್ ಹೆಸರಲ್ಲಿ ಇದೆ. ಇದನ್ನು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳಿ ಎಂದು ಹೇಳಿ ಕಳಿಸಿದ್ದರಂತೆ. ಅಷ್ಟಕ್ಕೆ ಸುಮ್ಮನಾಗದ ನಾರಾಯಣಗೌಡ ಮತ್ತು ಅವರ ಕುಟುಂಬದವರು ನಮಗೆ ಮರ್ಯಾದೆ ಹೋಗುತ್ತದೆ ಏನಾದರೂ ಮಾಡಿ ರಾಜಿ ಸಂಧಾನ ಮಾಡಿಸಿ ಎಂದು ಹೇಳುತ್ತಾರಂತೆ. ಆಗ ಶಾಸಕ ಧೀರಜ್ ಮುನಿರಾಜ್ ಪ್ರತಿಕ್ರಿಯಿಸಿ, ಕಾಂಪೌಂಡ್ ಹಾಕೋದಕ್ಕೆ ಬಿಡಬೇಡಿ, ಕಾಂಪೌಂಡ್ ಹಾಕೋದಕ್ಕೆ ಅಡ್ಡಿಪಡಿಸಿ ಆಗ ರಾಜಿಗೆ ಬರುತ್ತಾರೆ ಎಂದು ಹೇಳಿ ಕಳುಹಿಸುತ್ತಾರೆ.. ಶಾಸಕ ಧೀರಜ್ ಮಾತಿನಂತೆ ಕಾಂಪೌಂಡ್ ನಿರ್ಮಾಣ ಮಾಡುವ ವೇಳೆ ನನ್ನ ಮೇಲೆ ನಾರಾಯಣಗೌಡ ಮತ್ತು ಅವರ ಕುಟುಂಬದವರು ಗಲಾಟೆಗೆ ಬಂದು ಹಲ್ಲೆ ಮಾಡಿ ನನ್ನನ್ನು ರಕ್ತ ಗಾಯಪಡಿಸುತ್ತಾರೆ.‌ ಈ ಗಲಾಟೆ ಆಗಲು ಪರೋಕ್ಷವಾಗಿ ಶಾಸಕ ಧೀರಜ್ ಮುನಿರಾಜ್ ಕಾರಣ ಎಂದು ಆರೋಪಿಸಿದರು.

ನನ್ನ ಮೇಲೆ ಹಲ್ಲೆ ಆದ ಕಾರಣ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ದೂರು ದಾಖಲು ಮಾಡುತ್ತೇನೆ. ಪ್ರಕರಣ ದಾಖಲಾದ ಮರುದಿನ ಶಾಸಕ ಧೀರಜ್ ಮುನಿರಾಜ್ ಅವರು ನನಗೆ ಫೋನ್ ಕಾಲ್ ಮಾಡಿ ನೀನು ಒಬ್ಬನೇ ಏನಕ್ಕೆ ಜಮೀನು ಬಳಿ ಹೋದೆ ಎಂದು‌ ಹೇಳುತ್ತಾರೆ. ಆದಾದ ನಂತರ ಕೆಲ ಮುಖಂಡರು ಫೋನ್ ಮಾಡಿ ರಾಜಿ ಮಾಡಿಕೊಳ್ಳಿ ಇಲ್ಲ ಅಂದರೆ ನಿನ್ನ ಮೇಲೂ ಕೇಸ್ ಮಾಡುತ್ತಾರೆ ಅವರು ಎಂದು ಹೇಳುತ್ತಾರೆ. ಸಂಜೆ ಶಾಸಕ ಧೀರಜ್ ಮುನಿರಾಜ್ ಅವರು ಸ್ಥಳೀಯ ಮುಖಂಡರೊಬ್ಬರಿಗೆ ಫೋನ್ ಮಾಡಿ ಪೊಲೀಸರ ಬಳಿ ಮಾತನಾಡುತ್ತಾ.. ಪ್ರತಾಪ್ ಮೇಲೆನೂ ಕೇಸ್ ದಾಖಲಿಸಿಕೊಳ್ಳಿ ಎಂದು ಹೇಳುತ್ತಾರೆ.. ಎಫ್ ಐಆರ್ ನಲ್ಲಿ‌ ಪ್ರತಾಪ್ ಅವರನ್ನು ಎ1 ಮಾಡಿ ಅಂತಲೂ ಹೇಳುತ್ತಾರಂತೆ. ಈ ವಿಚಾರವನ್ನು ನನಗೆ ಮೂರನೇ ವ್ಯಕ್ಯಿಗಳಿಂದ ತಿಳಿದುಬರುತ್ತದೆ‌. ಈ ವಿಚಾರವಾಗಿ ಶಾಸಕರ ಬಳಿ ಮಾತನಾಡಲು ವಾಟ್ಸಾಪ್ ಕಾಲ್ ಮಾಡುತ್ತೇನೆ. ಆಗ  ಅವರು ಎಫ್ ಐ ಆರ್ ಮಾಡಿಸಿದ್ದು ನಿಜ, ನಾರಾಯಣಗೌಡ ಮತ್ತು ಅವರ ಕುಟುಂಬದವರು ನನ್ನ ಬಳಿ ಬಂದು ವಿಚಾರ ತಿಳಿಸಿದಾಗ ಎಫ್ ಐ ಆರ್ ಮಾಡಿಸಿದ್ದು ನಿಜ, ಆಯ್ತು ರಾಜಿ ಸಂಧಾನ ಮಾಡಿಸೋಣ ಬಿಡಿ ಎಂದು ಹೇಳುತ್ತಾರೆ. ನನ್ನ ಮೇಲೆ ಶಾಸಕರಿಗೆ ಏನು ದ್ವೇಷ ಇದಿಯೋ ಗೊತ್ತಿಲ್ಲ. ಶಾಸಕರಿಗೆ ನಾನು ಯಾವುತ್ತೂ ಏನೂ ಕೇಡು ಬಯಸಿಲ್ಲ. ಆದರೆ, ನನಗೆ ಈ ರೀತಿ ಆಗುವುದಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂದು ಕಿಡಿಕಾರಿದರು.

ಶಾಸಕರಾದವರು ಕಾರ್ಯಕರ್ತರ ಬಳಿ ಒಳ್ಳೆ ರೀತಿಯಲ್ಲಿ ನಡೆದುಕೊಳ್ಳಬೇಕು. ಕಾರ್ಯಕರ್ತರ ಜೀವನದ ಜೊತೆ ಚೆಲ್ಲಾಟವಾಡಬಾರದು. ನಾನೇನು ಬೇರೆ ಪಕ್ಷದವನಲ್ಲ. ರಾಜಕೀಯವಾಗಿ ನಾನು ಈಗಷ್ಟೇ ಕಣ್ಣುಬಿಡುತ್ತಿದ್ದೇನೆ. ಒಂದು ಹೋಬಳಿಯಲ್ಲಿ ಪರ್ಯಾಯ ಮುಖಂಡ ಹುಟ್ಟುಕೊಳ್ಳಬಾರದು ಎಂದು ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಅವರು ನಡೆಸಿರಬಹುದು ಎಂದು ದೂರಿದರು.

ಶಾಸಕರಿಗೆ ತಳಮಟ್ಟದ ರಾಜಕೀಯ ಅನುಭವ ಕೊರತೆಯಿಂದಲೋ ಅಥವಾ ಪರಿಪಕ್ವ ಜ್ಞಾನದ ಕೊರತೆಯಿಂದಲೋ ಈ ವಿಚಾರದಲ್ಲಿ ಮೂಗು ತೂರಿಸಿ ಯಾವುದೋ ಒಂದು ವರ್ಗಕ್ಕೆ ಸಹಾಯ ಮಾಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದರು.

ಸತ್ಯಾಸತ್ಯತೆಯನ್ನು ಅರಿತುಕೊಂಡು ನ್ಯಾಯದ ಪರ ಶಾಸಕರು ಕೆಲಸ ಮಾಡಬೇಕಾಗಿತ್ತು. ಆದರೇ ಅವರು ಅನ್ಯಾಯದ ಪರ ನಿಂತು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬಡ ಜನರು,‌ ಕಾರ್ಯಕರ್ತರ ಜೀವನ‌ ಜೊತೆ ಹುಡುಗಾಟವಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವ್ಯಯಕ್ತಿವಾಗಿ ನಮ್ಮನ್ನು ಕುಗ್ಗಿಸಿದರೆ ರಾಜಕೀಯದಿಂದ ಹಿಂದೆ ಸರಿಯಬಹುದು ಎಂದು ಅವರು ತಿಳಿದುಕೊಂಡಿರಬಹುದು. ಜನರಿಗೆ ನಮ್ಮ ಬಗ್ಗೆ ಕೆಟ್ಟದಾಗಿ ಬಿಂಬಿಸಿದರೆ ರಾಜಕೀಯವಾಗಿ ಹೇಗೆ ಬೆಳೆಯೋದಕ್ಕೆ ಸಾಧ್ಯ. ಶಾಸಕರು ಸಾಮಾಜಿಕ ನ್ಯಾಯವನ್ನು ಒದಗಿಸಬೇಕು.‌ ದುಡ್ಡು ಹಂಚಿದರೆ ಜನ ಮತ ನೀಡುತ್ತಾರೆ ಎಂದು ಅವರು ಭಾವಿಸಿರಬಹುದು. ಯಾವತ್ತೂ ಯಾವುದೂ ಶಾಶ್ವತವಲ್ಲ. ಶಾಸಕ ಧೀರಜ್ ಮುನಿರಾಜ್ ತಮ್ಮ ಆತ್ಮಾವಲೋಕನ ಮಾಡಿಕೊಂಡು ನಾನು ಪ್ರತಾಪ್ ವಿಚಾರದಲ್ಲಿ ತೊಂದರೆ ಮಾಡಿದ್ದೀನೋ ಇಲ್ಲವೋ ಎಂದು ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮಂತ ಕಾರ್ಯಕರ್ತರಿಗೆ ನೋವು ಕೊಟ್ಟು, ನಮ್ಮ ಕುಟುಂಬ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ದಯವಿಟ್ಟು ಶಾಸಕರು ಇಂತಹ ಕೆಲಸಗಳನ್ನು ಇನ್ನು ಮುಂದೆ ಯಾರಿಗೂ ಮಾಡಬಾರದು. ಶಾಸಕರಾಗಿ ದೊಡ್ಡಬಳ್ಳಾಪುರ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು..

ನಾನು ಯಾವ ಮಹಿಳೆ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನಾನು ಮಾತನಾಡಿರುವುದು ಸಾಬೀತು ಮಾಡಿದರೆ ಶಿಕ್ಷೆ ಅನುಭವಿಸುತ್ತೇನೆ ಎಂದರು.

ಬಿಜೆಪಿ ನನಗೆ ತಂದೆ ತಾಯಿ ಇದ್ದಂತೆ. ಶಾಸಕ ಎಸ್.ಆರ್ ವಿಶ್ವನಾಥ್, ಸಂಸದ ಡಾ.ಕೆ ಸುಧಾಕರ್ ಅವರು ಪಕ್ಷಕ್ಕೆ ಎರಡು ಕಣ್ಣುಗಳು ಇದ್ದಂತೆ. ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ಸಿದ್ಧಾಂತದ ವಿರುದ್ಧ ಯಾವತ್ತೂ ನಡೆದುಕೊಳ್ಳುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಇದು ನನ್ನ ವ್ಯಯಕ್ತಿಕ ವಿಚಾರ. ನನ್ನ ವ್ಯಯಕ್ತಿಕ ವಿಚಾರದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರು ಮೂಗು ತೂರಿಸಿದ್ದರಿಂದ ನನಗೆ ಬೇಸರ ತಂದಿದೆ..

ಶಾಸಕ ಧೀರಜ್ ಮುನಿರಾಜ್ ಮನಸ್ಸಿನಲ್ಲಿ ಇರೋದು ಏನಪ್ಪ ಅಂದ್ರೆ, ಯಾರ್ ಇರ್ಲಿ ಬಿಡ್ಲಿ ನಮ್ಮತ್ರ ದುಡ್ಡಿದೆ ನಾವು ಖರ್ಚು ಮಾಡಿ ಗೆಲ್ತೀವಿ ಎಂಬ ಮನೋಭಾವ ಹೊಂದಿರಬಹುದು ಮೊದಲು ಅದನ್ನ ಬಿಡಬೇಕು. ಗ್ರೌಂಡ್ ಲೆವೆಲ್ ನಲ್ಲಿ ರಾಜಕೀಯ ಅರ್ಥ ಮಾಡಿಕೊಳ್ಳದೇ, ಕಾರ್ಯಕರ್ತರನ್ನು ತೆಕ್ಕೆಗೆ ತೆಗೆದುಕೊಳ್ಳದೇ ರಾಜಕೀಯ ಮಾಡಬಾರದು. ಸುಮ್ನೆ ಅವರ ತಂದೆಯವರು ಫೌನಾನ್ಶಿಯಲ್ ಸಪೋರ್ಟ್ ಮಾಡ್ತಾರೆ ಅಂತ ಹೇಳಿ ಏಕಾಏಕಿ ಶಾಸಕರಾದರೆ ಇಗೋ ಹೀಗೆ ಆಗೋದು. ಯಾರಿಗೆ ಅನ್ಯಾಯ ಆಗಿದೆ. ಅನ್ಯಾಯ ಆಗಿರುವವರಿಗೆ ಯಾವ ರೀತಿ ನ್ಯಾಯ ಒದಗಿಸಿಕೊಡಬೇಕು ಎಂಬ ತಿಳುವಳಿಕೆ ಇರಬೇಕು. ಅವರಿಗೆ ಯಾರು ಜೈ ಅಂತಾರೋ ಅವರಿಗೆ ನ್ಯಾಯ ಕೊಡಿಸುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಯಾವತ್ತೂ ಯಾರಿಗೂ ಅನ್ಯಾಯ ಮಾಡಬಾರದು.‌ ನ್ಯಾಯದ ಪರ‌ ನಿಂತು ನ್ಯಾಯಕ್ಕಾಗಿ ಸಹಕಾರ ನೀಡಬೇಕು ಎಂದರು..

ಒಟ್ಟಿನಲ್ಲಿ ನನ್ನ ಮೇಲೆ ನಡೆದಿರೋ ಹಲ್ಲೆ ದುರುದ್ದೇಶದ್ದಾಗಿರುತ್ತದೆ. ನಾನು ಯಾರ ಜಮೀನನ್ನು ಕಬಳಿಕೆ ಮಾಡಿಲ್ಲ. ನಾನು ಕಾಂಪೌಂಡ್ ಹಾಕುತ್ತಿರುವ ಜಮೀನಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ನಮ್ಮ ಮೇಲೆ ದೌರ್ಜನ್ಯವೆಸಗಿ ಹಲ್ಲೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಾನು ಮೋಸ, ವಂಚನೆ, ಕಾನೂನು ಉಲ್ಲಂಘನೆ ಮಾಡಿ ಯಾವ ಭೂಮಿಯನ್ನು ಖರೀದಿ ಮಾಡಿಲ್ಲ.‌ ಅದೇರೀತಿ ನೇರವಾಗಿ ನಾನು ಯಾವತ್ತೂ, ಯಾವ ರೈತನಿಂದಲೂ ಜಮೀನು ಖರೀದಿ‌ ಮಾಡಿಲ್ಲ. ರೈತರು ಬೇರೆಯವರಿಗೆ ಮಾರಾಟ ಮಾಡಿರುವ ವ್ಯಕ್ತಿಗಳಿಂದ ಕೊಳ್ಳುತ್ತೇನೆ ಎಂದರು..

ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ರಾಜಕೀಯವಾಗಿ ಸಕ್ರಿಯನಾಗಿದ್ದೇನೆ‌. ಈ ನನ್ನ ಏಳಿಗೆ ಸಹಿಸದೇ ದುರುದ್ದೇಶದಿಂದ ನನ್ನ ಹೆಸರಿಗೆ ಕಪ್ಪುಚುಕ್ಕೆ ತರಲು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದರು…

ಅವರು ಜಮೀನು ವಿವಾದದಲ್ಲಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದರು. ಎಲ್ಲಾ ಕೇಸ್ ಡಿಸ್ ಮಿಸ್ ಆಗಿದೆ. ಯಾವುದೇ ಸ್ಟೇ ಇಲ್ಲ, ಯಾವುದೇ ಕೇಸ್ ಇಲ್ಲದೇ ಇದ್ದರೂ, ಇದು ನನ್ನ ಜಮೀನು ಎಂದು ಸುಖಾಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ.. ನಾನು ಯಾವತ್ತೂ ಸರ್ಕಾರಿ, ಬಡವರ ಜಮೀನಿಗೆ ಹೋಗಿಲ್ಲ. ನಾನು ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಬಾರದು ಎಂಬ ದುರುದ್ದೇಶದಿಂದ ಹುನ್ನಾರ ಮಾಡಿಕೊಂಡು ಗಲಾಟೆ ಮಾಡಿದ್ದಾರೆ. ನನಗೆ ಹಲ್ಲೆ ಮಾಡಿರುವುದನ್ನು ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ…ಎಂದರು.

ಅವರು ಪೊಜಿಷನಲ್ಲೇ ಇಲ್ಲ. ನೂರು ವರ್ಷದಿಂದ ಅವರ ಬಳಿ ಸೂಕ್ತ ದಾಖಲೆ ಇಲ್ಲ.‌ ನಾನು ಕಾನೂನುಬದ್ಧವಾಗಿ ಜಮೀನು ಕೊಂಡುಕೊಂಡಿದ್ದೇನೆ. ಯಾರದೋ ಜಮೀನಿಗೆ ನಾನ್ಯೇಕೆ ಹೋಗಲಿ. ಹಲ್ಲೆ ನಡೆದ ನಂತರ ರಾಜೀ ಮಾಡಿಕೊಳ್ಳಿ ಅಂತಾ ಫೋನ್ ಬಂದಿತ್ತು, ರಾಜಿಗೆ ಒಪ್ಪದಿದ್ದಾಗ ಕೌಂಟರ್ ಎಫ್ಐ ಆರ್ ಆಗಿದೆ ಎಂದರು.

ನಾನು ಕಾನೂನು ಹೋರಾಟ ನಡೆಸಿ ನನ್ನ ತಪ್ಪು ಏನೂ ಇಲ್ಲ ಎಂದು ಸಾಬೀತುಪಡಿಸುತ್ತೇನೆ. ನನ್ನ ಸಮಾಜ ಸೇವೆ ಮುಂದುವರಿಸುತ್ತೇನೆ. ನನ್ನನ್ನು ನಂಬಿ ಬಂದವರಿಗೆ ನ್ಯಾಯ ಕೊಡಿಸುತ್ತೇನೆ. ರಾಜಕೀಯವಾಗಿ ಸಕ್ರಿಯನಾಗಿರುತ್ತೇನೆ ಎಂದರು.

Ramesh Babu

Journalist

Recent Posts

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

2 hours ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

9 hours ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

19 hours ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

23 hours ago

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ…

1 day ago

ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ…

2 days ago