ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆಂದು ಜೆಡಿಎಸ್, ಬಿಜೆಪಿಯವರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಆದರೆ, ನಾವು 29 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ. ನನಗೆ ನಂಬಿಕೆ ಇದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಭವಿಷ್ಯ ನುಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ನಾನು ಇಷ್ಟು ಮತಗಳ ಅಂತರದಿಂದ ಗೆಲ್ಲುವುದಾಗಿ ಲೆಕ್ಕಾಚಾರ ಮಾಡಿಕೊಂಡಿದ್ದೆ. ಯಾರೂ ನಂಬಲಿಲ್ಲ. ಇವರು ಮೂರನೇ ಸ್ಥಾನಕ್ಕೆ ಹೋಗಿದ್ದಾರೆಂದು ಗೇಲಿ ಮಾಡುತ್ತಿದ್ದರು. ಆದರೆ, ನನ್ನ ಲೆಕ್ಕಾಚಾರಕ್ಕಿಂತ 500 ಮತಗಳಷ್ಟೇ ವ್ಯತ್ಯಾಸವಾಗಿತ್ತು. ನಾನು ಗೆಲುವು ಸಾಧಿಸಿದ್ದೇನೆ. ಈಗಲೂ ಅಷ್ಟೇ 29 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ. 500 ಮತಗಳು ವ್ಯತ್ಯಾಸವಾಗಬಹುದು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಕೇರಳದಲ್ಲಿ ನಡೆಸಿರುವ ಮಾಟ ಮಂತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶತ್ರು ಸಂಹಾರಕ್ಕಾಗಿ ಮಾಟ ಮಂತ್ರ ಮಾಡಲಾಗಿದೆ. ನಾವು ಶತ್ರು ಉದ್ಧಾರಕ್ಕಾಗಿ ಬೇರೆ ಕಡೆ ಮಾಟ ಮಂತ್ರ ಮಾಡಿಸಿದ್ದೇವೆ ಎಂದು ಹಾಸ್ಯವಾಗಿ ನುಡಿದರು.
ಮಾಲೂರಿನ ಶಿವಾರಪಟ್ಟಣದಲ್ಲಿ ಶಿಲ್ಪಿಗಳು ಕಲ್ಲನ್ನು ಶಿಲೆ ಮಾಡುತ್ತಾರೆ. ಆದರೆ, ಶಿಕ್ಷಕರು ಎಲ್ಲರನ್ನು ಶಿಲೆಗಳನ್ನಾಗಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ನಮ್ಮ ಅಭ್ಯರ್ಥಿ ಆಯ್ಕೆ ಮಾಡಿದರೆ ಅನುಕೂಲವಾಗಲಿದ್ದು, ಬುದ್ಧಿವಂತರಾಗಿರುವ ಶಿಕ್ಷಕರು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು.
ಎಂಎಲ್ಸಿಗಳಾದ ಅನಿಲ್ ಕುಮಾರ್, ನಜೀರ್ ಅಹಮದ್ ಸೇರಿದಂತೆ ಅನೇಕ ನಾಯಕರಿರುವ ನಮ್ಮ ತಂಡಕ್ಕೆ ಡಿ.ಟಿ.ಶ್ರೀನಿವಾಸ್ ಆಯ್ಕೆಯಾಗಿ ಬಂದರೆ ಇನ್ನಷ್ಟು ಕೆಲಸ ಮಾಡಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಮೈತ್ರಿ ಏನೇ ಇರಲಿ. ನಾವು ಗೆಲ್ಲುತ್ತೇವೆ. ಖಾಸಗಿ ಶಾಲೆ ಶಿಕ್ಷಕರಿಗೆ ವಿಮೆ ಮಾಡಿಸಿಕೊಡಲಾಗುವುದು ಅನಂತರ ನಾನಾ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, 136 ಶಾಸಕರು ಇರುವ ಸರಕಾರವನ್ನು ಕೆಡವಲು ಹೇಗೆ ಸಾಧ್ಯ. 92 ಮಂದಿ ಶಾಸಕರು ಪಕ್ಷದಿಂದ ಹೊರಗೆ ಬರಬೇಕು, ಇಲ್ಲವೇ 50 ಮಂದಿ ಶಾಸಕರು ರಾಜೀನಾಮೆ ನೀಡಬೇಕು. ಇದೆಲ್ಲವು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಗು ಹುಟ್ಟಿದ ಬಳಿಕ ಹೆಸರು ಇಡಬೇಕು. ಹಿರಿಯರನ್ನು ಎಂಎಲ್ಸಿ ಮಾಡಿದರೆ ಮತ್ತಷ್ಟು ಶಕ್ತಿ ಬರುತ್ತದೆ ಎನ್ನುವ ನಿಟ್ಟಿನಲ್ಲಿ ಕೆ.ಆರ್.ರಮೇಶ್ಕುಮಾರ್ ಅವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಜಿಲ್ಲೆಯಲ್ಲಿ ಎರಡು, ಮೂರು ಬಾರಿ ಶಾಸಕರಾಗಿರುವವರು ಇದ್ದಾರೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಎಂಎಲ್ಸಿ ಸ್ಥಾನ ಕೊಟ್ಟರೂ ಸ್ವಾಗತಿಸುತ್ತೇವೆ ಎಂದರು.
ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ನಾವು ಮಾತನಾಡಲ್ಲ. ನಾನು ಸಿಎಂ ಅಲ್ಲ ಸಾಮಾನ್ಯ ಎಂಎಲ್ಸಿ. ಹೀಗಾಗಿ ಅದೇನಿದ್ದರೂ ಸಿಎಂ, ಡಿಸಿಎಂ ವಿವೇಚನೆಗೆ ಬಿಟ್ಟಿದ್ದು. ಭ್ರಷ್ಟಾಚಾರ ಎನ್ನುವುದು ಮೊದಲು ಇತ್ತು, ಈಗಲೂ ಇದೆ. ವ್ಯವಸ್ಥೆ ಸರಿಪಡಿಸಲು ಎಲ್ಲರೂ ಪಣತೊಡಬೇಕಿದೆ ಎಂದ ಅವರು, ೧೮೭ ಕೋಟಿರೂ ಅನುದಾನ ವಿಚಾರವಾಗಿ ಮೌಖಿಕ ಆದೇಶ ಕೊಟ್ಟರೆ ಆಗುತ್ತದೆಯಾ ಇದು ತಮಾಷೆಯ ವಿಚಾರವಾ ಎಂದರು.
ವಿಧಾನಾಭೆಯಂತೆಯೇ ಪರಿಷತ್ ನಲ್ಲಿಯೂ ಹೆಚ್ಚಿನ ಸಂಖ್ಯೆಯ ಶಾಸಕರಿದ್ದರೆ ಪರಿಪೂರ್ಣ ಸರಕಾರವಾಗಲು ಸಾಧ್ಯ. ಅತ್ಯಗತ್ಯವಾಗಿ ಬಹುಮತ ಬೇಕಿದ್ದು ಸರಕಾರ ಗಂಭೀರವಾಗಿ ಪರಿಗಣಿಸಿ ಚುನಾವಣೆ ಎದುರಿಸುತ್ತಿದೆ.
7ನೇ ವೇತನ ಆಯೋಗ ಜಾರಿ, ಎನ್ ಇಪಿ ಕೈಬಿಟ್ಟು ಎಸ್ ಇಪಿ ಜಾರಿ ಭರವಸೆ ನೀಡಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಡಿ.ಟಿ.ಶ್ರೀನಿವಾಸ್ ಅವರಿಗೆ ಸಮಸ್ಯೆಗಳ ಬಗ್ಗೆ ಅರಿವಿದ್ದು, ಖಾಸಗಿ, ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ನಮಗೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ಮಹಿಳಾ ಕಾಲೇಜು, ಬಾಲಕರ ಕಾಲೇಜಿಗೆ 30 ಕೋಟಿರೂ ಅನುದಾನ ತಂದಿದ್ದು, ನೀತಿ ಸಂಹಿತೆ ಮುಗಿದ ಕೂಡಲೇ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ. ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ಥಿಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಸರಕಾರದ ಅನುದಾನ, ಸಿಎಸ್ ಆರ್ ಅನುದಾನ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ನಿರ್ದೇಶಕ ಯೂಸುಫ್ ಷರೀಫ್, ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಮುಖಂಡರಾದ ವೈಭೋಗ್ ಶಿವು, ಖಾದ್ರಿಪುರ ಬಾಬು, ಸೋಮಶೇಖರ್ ನಗರಸಭೆ ಸದಸ್ಯ ರಫೀಕ್ ಮುಂತಾದವರಿದ್ದರು.