ತಾಲೂಕಿನ ಲಿಂಗದವೀರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹೆಚ್ಚು ಬಹುಮತ ಪಡೆಯುವುದರ ಮೂಲಕ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ವೀರದಿಪ್ಪಯ್ಯ.
ಚುನಾವಣಾಧಿಕಾರಿ ಮಾಧವರೆಡ್ಡಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 11 ಸದಸ್ಯರ ಪೈಕಿ 9 ಮಂದಿ ಸದಸ್ಯರು ವೀರದಿಪ್ಪಯ್ಯ ಅವರಿಗೆ ಮತ ಹಾಕುವುದರ ಮೂಲಕ ಗೆಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವೀರದಿಪ್ಪಯ್ಯ ಹಾಗೂ ರಾಮಕೃಷ್ಣಪ್ಪ ಅವರು ಉಮೇದುವಾರಿಕೆ ಸಲ್ಲಿಸಿದ್ದರು ಇವರಲ್ಲಿ ವೀರದಿಪ್ಪಯ್ಯ ಹೆಚ್ಚು ಬಹುಮತ ಪಡೆದು ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದು, ರಾಮಕೃಷ್ಣಪ್ಪನವರಿಗೆ ಕೇವಲ 2 ಮತ ಪಡೆದು ಸೋಲನ್ನು ಅನುಭವಿಸಿದ್ದಾರೆ.
ಭರ್ಜರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದ ವೀರದಿಪ್ಪಯ್ಯ ಅವರಿಗೆ ಸಂಘದ ಸದಸ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಅಭಿನಂದನೆ ಸಲ್ಲಿಸಿದರು.
ನಂತರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ನೂತನ ಅಧ್ಯಕ್ಷ ವೀರದಿಪ್ಪಯ್ಯ ಮಾತನಾಡಿ, ನನಗೆ ಮತ ನೀಡಿ ಗೆಲ್ಲಿಸಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಸಂಘದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶ್ರಮವಹಿಸುತ್ತೇನೆ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡವಿಲ್ಲ ಆದ್ದರಿಂದ ಕೂಡಲೇ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸುವೆ ಎಂದರು.