ಕೋಲಾರ: ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆ, ಕೆಸಿವ್ಯಾಲಿ ೩ನೇ ಹಂತದ ಶುದ್ಧೀಕರಣ, ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ಹಾಗೂ ಗುಣಮಟ್ಟದ ೧೦ ತಾಸು ವಿದ್ಯುತ್ಗಾಗಿ ಒತ್ತಾಯಿಸಿ ಮಾರ್ಚ್ 24ರ ಸೋಮವಾರ ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಕೊಂಡರಾಜನಹಳ್ಳಿ ಗೇಟ್ ಬಂದ್ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರ ಹೊರವಲಯದ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಬಜೆಟ್ನಲ್ಲಿ ಎಪಿಎಂಸಿ ಜಾಗದ ಸಮಸ್ಯೆ, ಕೆಸಿವ್ಯಾಲಿ ೩ನೇ ಹಂತದ ಶುದ್ಧೀಕರಣ, ನಕಲಿ ಬಿತ್ತನೆ ಬೀಜ ಮತ್ತಿತರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಮುಖ್ಯಮಂತ್ರಿಗಳು ಕೋಲಾರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿರುವುದನ್ನು ಖಂಡಿಸಿ ಸಾರ್ವಜನಿಕ ಉತ್ತರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹತ್ತಾರು ವರ್ಷಗಳಿಂದ ಜಿಲ್ಲೆಯ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ಜನಪ್ರತಿನಿಧಿಗಳು ವಿಫಲವಾಗಿರುವ ಜೊತೆಗೆ ೫ ವರ್ಷಗಳಿಂದ ಟೊಮೇಟೊ ಮತ್ತಿತರ ಬೆಳೆಗಳಿಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ನೀಡುವಲ್ಲಿ ವಿಫಲವಾಗಿದ್ದಾರೆಂದು ಆರೋಪಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಎರಡು ಕಣ್ಣುಗಳಂತಿರುವ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟದಲ್ಲಿ ನಡೆದಿರುವ ನೂರಾರು ಕೋಟಿ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಿ ಎರಡೂ ಸಂಸ್ಥೆಗಳಲ್ಲಿನ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿವರ್ಷ ರೈತರನ್ನು ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ ಕೀಟ ನಾಶಕ ಕಂಪನಿಗಳ ನಿಯಂತ್ರಣ ಸ್ಥಳೀಯ ತೋಟಗಾರಿಕೆ, ಕೃಷಿ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದ ಬೆಳೆ ನಷ್ಟವಾದರೂ ನಕಲಿ ಬೀಜಗಳಿಗೆ ನಿಯಂತ್ರಣವಿಲ್ಲದೆ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಟಿಗೆ ರೈತರನ್ನು ಸಿಲುಕಿದಿ ತಮಾಷೆ ನೋಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಬಜೆಟ್ನಲ್ಲಿ ಜಿಲ್ಲೆಗೆ ತಿರುಪತಿ ನಾಮ ಹಾಕಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಕೋಲಾರಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ತಂದಿದ್ದೇವೆಂದು ಕುಣಿದು ಕುಪ್ಪಳಿಸುತ್ತಿರುವ ಮೂರ್ಖರೇ, ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪುಣ್ಯ ಕಟ್ಟಿಕೊಳ್ಳಿ. ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರು ಜಾನುವಾರುಗಳ ರಕ್ಷಣೆ ಹಾಗೂ ರೈತರು ಬೆಳೆದ ಬೆಳೆಗಳಿಗೆ ಗುಣಮಟ್ಟದ 10 ತಾಸು ವಿದ್ಯುತ್ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.
ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆ, ಕೆಸಿವ್ಯಾಲಿ ೩ನೇ ಹಂತದ ಶುದ್ಧೀಕರಣ, ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ಗುಣಮಟ್ಟದ 10 ತಾಸು ವಿದ್ಯುತ್, ಗಡಿಭಾಗಗಳಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಹಾಗೂ ಕಳೆದು ಹೋಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಇಲ್ಲವೇ ಬದಲಾವಣೆ ಮಾಡಿ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸಿ ಮಾ.೨೪ರ ಸೋಮವಾರ ಟೊಮೇಟೊ ಮಾರುಕಟ್ಟೆ ಗೇಟ್ನಿಂದ ಜಾನುವಾರುಗಳು, ನಷ್ಟ ಬೆಳೆ ಹಾಗೂ ಕೆಸಿವ್ಯಾಲಿ ನೀರಿನ ಸಮೇತ ರಾಷ್ಟ್ರೀಯ ಹೆದ್ದಾರಿ ಕೊಂಡರಾಜನಹಳ್ಳಿ ಗೇಟ್ವರೆಗೂ ಬಂದ್ ಮಾಡುವ ಮೂಲಕ ಕುಂಭದ್ರೋಣ ನಿದ್ರೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸಿ ಭೂಪಟದಲ್ಲಿರುವ ಕೋಲಾರ ಜಿಲ್ಲೆಯನ್ನು ಗುರುತಿಸಿ ಅಭಿವೃದ್ಧಿಪಡಿಸಿ ಎಂದು ಎಚ್ಚರಿಸುವ ಹೋರಾಟ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದರು.
ಸಭೆಯಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜ ಗೌಡ, ತರ್ನಹಳ್ಳಿ ಆಂಜಿನಪ್ಪ, ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಮುನಿರಾಜು, ಕದಿರಿನತ್ತ ಅಪ್ಪೋಜಿರಾವ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಯಲುವಳ್ಳಿ ಪ್ರಭಾಕರ್, ಮಂಗಸಂದ್ರ ತಿಮ್ಮಣ್ಣ, ಹೆಬ್ಬಣಿ ಅನಂದರಡ್ದಿ. ಸುಪ್ರೀಂಚಲ ಚಂದ್ರಪ್ಪ ಮುಂತಾದವರಿದ್ದರು.