“ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪ್ರತೀಕಾರಾತ್ಮಕ ಅಶ್ಲೀಲತೆ , ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಇಲಾಖೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಅನುಮತಿಯಿಲ್ಲದೆ ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಕಠಿಣ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ ಎಂದರು.

ಈ ಆದೇಶದಲ್ಲಿ, ಯಾವುದೇ ಫೋಟೋ ಅಥವಾ ವಿಡಿಯೋವನ್ನು ಸೆರೆಹಿಡಿಯಲು ಅಥವಾ ದಾಖಲಿಸಲು ನೀಡಿದ ಒಪ್ಪಿಗೆಯು ಅದನ್ನು ಇತರರಿಗೆ ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ನೀಡಿದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂತಹ ವಿಷಯವನ್ನು ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ಹಂಚುವುದು, ಪ್ರಕಟಿಸುವುದು, ಫಾರ್ವರ್ಡ್ ಮಾಡುವುದು ಅಥವಾ ಪ್ರಸಾರ ಮಾಡುವುದು ಸಂಜ್ಞೇಯ (Cognizable) ಅಪರಾಧವಾಗಿದ್ದು, ಮೂಲತಃ ಅದು ಒಪ್ಪಿಗೆಯೊಂದಿಗೆ ದಾಖಲಾಗಿದ್ದರೂ ಸಹ ಅಪರಾಧವೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಅನುಮತಿಯಿಲ್ಲದೆ ಖಾಸಗಿ ವಿಷಯಗಳನ್ನು ಹಂಚುವ ಪ್ರಕರಣಗಳು, ಸಾಮಾನ್ಯವಾಗಿ ‘ರಿವೆಂಜ್ ಪೋರ್ನೋಗ್ರಫಿ’, ‘ಸೆಕ್ಸ್‌ಟಾರ್ಷನ್’ ಹಾಗೂ ‘ಬ್ಲ್ಯಾಕ್‌ಮೇಲ್ ವಿಡಿಯೋ’ ಎಂದು ಕರೆಯಲ್ಪಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಭಾರತೀಯ ನ್ಯಾಯ ಸಂಹಿತೆ (BNS), 2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000ರ ಸಂಬಂಧಿತ ವಿಧಿಗಳಡಿ, ಅಗತ್ಯವಿದ್ದಲ್ಲಿ BNSನ ಸೆಕ್ಷನ್ 77 ಹಾಗೂ IT Actನ ಸೆಕ್ಷನ್ 66E, 67 ಮತ್ತು 67A ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ಈ ಸ್ಥಾಯಿ ಆದೇಶವು, ವಿಡಿಯೋ ಅಥವಾ ಫೋಟೋ ದಾಖಲಿಸಲು ಹಿಂದೆ ಒಪ್ಪಿಗೆ ನೀಡಲಾಗಿತ್ತು ಎಂಬ ಕಾರಣವನ್ನು ಉಲ್ಲೇಖಿಸಿ ದೂರು ದಾಖಲಿಸಲು ನಿರಾಕರಿಸುವುದು ಅಥವಾ ವಿಳಂಬ ಮಾಡುವುದು ಸಂಪೂರ್ಣವಾಗಿ ಅಸಂಗತ ಎಂದು ತಿಳಿಸಿದೆ. ಬೆದರಿಕೆ, ಸುಲಿಗೆ, ಲೈಂಗಿಕ ಅನುಕೂಲತೆಗಳ ಬೇಡಿಕೆ ಅಥವಾ ಇತರೆ ಒತ್ತಡದ ಸಂದರ್ಭಗಳಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಿಧಿಗಳನ್ನೂ ಅನ್ವಯಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಘಟನೆ ನಡೆದ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಸಂಬಂಧಿತ ಪೊಲೀಸ್ ಠಾಣೆಗಳು ಮೊದಲು ‘ಜೀರೋ-ಎಫ್‌ಐಆರ್’ ದಾಖಲಿಸಿ, ನಂತರ ವಿಳಂಬವಿಲ್ಲದೆ ಸೂಕ್ತ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.

ಅಧಿಕಾರಿಗಳಿಗೆ ಆಕ್ಷೇಪಾರ್ಹ ವಿಷಯವನ್ನು ತಕ್ಷಣ ತೆಗೆದುಹಾಕಲು ಅಥವಾ ನಿರ್ಬಂಧಿಸಲು ಕ್ರಮ ಕೈಗೊಳ್ಳುವುದು, ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸುವುದು ಹಾಗೂ ತಾಂತ್ರಿಕ ತನಿಖೆಗಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಮತ್ತು ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ ಎಂದರು.

ಈ ಆದೇಶವು ಸಂತ್ರಸ್ತರನ್ನು ಗೌರವ ಮತ್ತು ಸಂವೇದನಾಶೀಲತೆಯಿಂದ ನಡೆಸಿಕೊಳ್ಳಬೇಕೆಂದು ಒತ್ತಿ ಹೇಳುತ್ತದೆ. ಅವರ ಗುರುತನ್ನು ಗೌಪ್ಯವಾಗಿಡಬೇಕು, ಸಂತ್ರಸ್ತರನ್ನೇ ದೂಷಿಸುವ ವರ್ತನೆ ತಪ್ಪಿಸಬೇಕು ಮತ್ತು ಸಾಧ್ಯವಾದಲ್ಲಿ ಮಹಿಳಾ ಸಂತ್ರಸ್ತರ ದೂರುಗಳನ್ನು ಮಹಿಳಾ ಅಧಿಕಾರಿಗಳೇ ದಾಖಲಿಸಬೇಕು ಎಂದು ತಿಳಿಸಿದೆ ಎಂದು ಹೇಳಿದ್ದಾರೆ.

‘ಹಿಂದೆ ಒಪ್ಪಿಗೆ ನೀಡಲಾಗಿತ್ತು’ ಎಂಬ ತಪ್ಪು ಕಾರಣವನ್ನು ನೀಡಿ ಎಫ್‌ಐಆರ್ ದಾಖಲಿಸಲು ವಿಫಲವಾದರೆ ಅಥವಾ ವಿಳಂಬ ಮಾಡಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಲಾಗಿದೆ ಎಂದರು‌.

ಈ ನಿರ್ದೇಶನವು ಸಂವಿಧಾನಬದ್ಧ ಖಾಸಗಿತನದ ಹಕ್ಕನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರ ಪರ, ಕಾನೂನುಬದ್ಧ ಹಾಗೂ ಏಕರೂಪದ ಕ್ರಮವನ್ನು ಖಚಿತಪಡಿಸುತ್ತದೆ ಎಂದರು‌.

Ramesh Babu

Journalist

Recent Posts

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ನೋಂದಣಿಗೆ ಕರೆ

ಕೃಷಿ ಇಲಾಖೆ ವತಿಯಿಂದ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ…

20 hours ago

ತಮ್ಮನ ಮೇಲೆ ಅಣ್ಣನಿಂದ ಗುಂಡಿನ ದಾಳಿ..?

ದೇವನಹಳ್ಳಿ: ತೋಟಕ್ಕೆ ನೀರು ಬಿಡುವ ವಿಚಾರವಾಗಿ ಉಂಟಾದ ಕುಟುಂಬ ಕಲಹ ಗುಂಡಿನ ದಾಳಿಗೆ ತಿರುಗಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

21 hours ago

ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಮ್ಯಾರಥಾನ್: ಎಸ್‌ಪಿ ಚಂದ್ರಕಾಂತ್ ಎಂ.ವಿ

ದೊಡ್ಡಬಳ್ಳಾಪುರ: ಮಕ್ಕಳು ಹಾಗೂ ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು…

22 hours ago

ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆ

ಬೆಂಗಳೂರು: ಕರ್ನಾಟಕ ಸರ್ಕಾರವು ಉಪಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಹೊಸ ಅಧಿಸೂಚನೆ ಹೊರಡಿಸಿದೆ. ರಾಜ್ಯಪಾಲರ ಅನುಮೋದನೆಯೊಂದಿಗೆ…

1 day ago

ಬೈಕ್ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು; ಲಕ್ಷಾಂತರ ಮೌಲ್ಯದ 42 ದ್ವಿಚಕ್ರ ವಾಹನ ವಶ

ವಿಜಯಪುರ (ದೇವನಹಳ್ಳಿ): ಮನೆಗಳ ಮುಂಭಾಗ ಹಾಗೂ ಸಾರ್ವಜನಿಕ ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ವಿಜಯಪುರ…

1 day ago

ಪರೀಕ್ಷಾ ಅಕ್ರಮಗಳು……

ನೀಟ್ ಪ್ರವೇಶ ಪರೀಕ್ಷೆ.... ಆಡಳಿತಗಾರ ರಾಜಕಾರಣಿಗಳ ಸಂಪೂರ್ಣ ವೈಫಲ್ಯ, ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ, ಪೋಷಕರ ಅತಿಯಾದ ದುರಾಸೆ, ವಿದ್ಯಾರ್ಥಿಗಳ ನಿರ್ಲಜ್ಜತೆ…

1 day ago