ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ರೈಲ್ವೆ ಅಂಡರ್ ಪಾಸ್ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಮಳೆ ಬಂದರೆ ಅಂಡರ್ ಪಾಸ್ ತುಂಬಾ ನೀರು ನಿಂತು ಕೆಸರು ಗದ್ದೆ, ಕೆರೆಯಂತಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ…. ಈ ಹಿನ್ನೆಲೆ ಇಂದು ಶಾಸಕ ಧೀರಜ್ ಮುನಿರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ರೈಲ್ವೆ ಅಂಡರ್ ಪಾಸ್, ಹಿಂದೂಪುರ-ಯಲಹಂಕ ಹೆದ್ದಾರಿ, ನಗರಸಭೆ ಒಳಚರಂಡಿ ಕಾಮಗಾರಿ ಸೇರಿ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆದಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕೆಲಸಗಳಿಂದ ಜನರಿಗೆ ಸಾವು- ನೋವು ಉಂಟಾದರೆ ಅಧಿಕಾರಿಗಳೇ ನೇರ ಹೊಣೆ. ನಿಮ್ಮ ಮೇಲೆ ಎಫ್ ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿಯು ದೊಡ್ಡಬಳ್ಳಾಪುರ ಮೂಲಕ ಹಾದು ಹೋಗುತ್ತದೆ. ಇದು ಟೋಲ್ ರಸ್ತೆ ಆಗಿರುವುದರಿಂದ ಟೋಲ್ ವಸೂಲಾತಿ ದಿನೇ ದಿನೇ ಹೆಚ್ಚಾಗುತ್ತಿದೆ… ಟೋಲ್ ವಸೂಲಿ ಮಾಡುತ್ತಿರುವವರು ರಸ್ತೆ ಅಭಿವೃದ್ಧಿ, ರಸ್ತೆ ದುರಸ್ತಿ, ಎಲ್ಲಾ ಜಂಕ್ಷನ್ ಗಳಲ್ಲಿ ಹೈ-ಮಾಸ್ಟ್ ಲೈಟ್, ಸೂಚನಾ ಫಲಕಗಳು ಸೇರಿದಂತೆ ಇನ್ನಿತರೆ ಸುಗಮ ಸಂಚಾರಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸಬೇಕು. ಆದರೆ, ಇದನ್ನು ಯಾವುದೂ ಮಾಡದೇ ಹಣ ವಸೂಲಿ ಮಾಡಿಕೊಂಡು ತೆಪ್ಪಗಿದ್ದಾರೆ. ಟೋಲ್ ವಸೂಲಿ ಮಾಡುವವರಿಗೆ ಹತ್ತು ವಾರ ಗಡುವು ನೀಡುತ್ತೇನೆ, ಸೂಕ್ತ ರೀತಿಯಲ್ಲಿ ಕೆಲಸ ಮಾಡದಿದ್ದರೆ, ಜುಲೈ ಅಧಿವೇಶನ ನಂತರ ನನ್ನ ಮೇಲೆ ಕೇಸ್ ಆದರೂ ಚಿಂತೆ ಇಲ್ಲ ಟೋಲ್ ವಸೂಲಿಯನ್ನು ನಿಲ್ಲಿಸುತ್ತೇನೆ ಎಂದು ಎಚ್ಚರಿಸಿದರು….
ರೈಲ್ವೆ ನಿಲ್ದಾಣ ಜಂಕ್ಷನ್ ಬಳಿ ಪಿಡಬ್ಲ್ಯೂಡಿ ರಸ್ತೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(KRDCL) ರಸ್ತೆ, ರೈಲ್ವೆ ರಸ್ತೆ, ನಗರಸಭೆ ರಸ್ತೆ ಹಾದು ಹೋಗುತ್ತವೆ. ಈ ನಾಲ್ಕು ರಸ್ತೆಗಳಿಂದ ಬರುವ ನೀರು ರೈಲ್ವೆ ಅಂಡರ್ ಪಾಸ್ ಬಳಿ ನಿಲ್ಲುತ್ತವೆ. ಇವರಿಗೆ ಅನುಕೂಲಕ್ಕೆ ತಕ್ಕಂತೆ ರಸ್ತೆ ಕಾಮಗಾರಿ ಮಾಡಿಕೊಂಡಿದ್ದಾರೆ. ಇವರು ಮಾಡಿರುವ ರಸ್ತೆಗಳು ವಾಹನ ಸವಾರರು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದಕ್ಕೆ ಶಾಸಕನಾದ ನನಗೆ ಸಾರ್ವಜನಿಕರು ಪ್ರಶ್ನೆ ಕೇಳುತ್ತಿದ್ದಾರೆ. ನಾನು ಯಾರಿಗೆ ಉತ್ತರ ಕೊಡಬೇಕು ಎಂದು ಹೇಳಿದರು.
ಇಲ್ಲಿ ರಸ್ತೆ, ಚರಂಡಿ, ಕಸದ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ತಾಂಡವಾಡುತ್ತಿವೆ. ಸಂಬಂಧಪಟ್ಟ ಇಲಾಖಾಧಿಕಾರಿಗಳ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ತ್ವರಿತವಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.
ರೈಲ್ವೆ ಅಂಡರ್ ಪಾಸ್ ಅವೈಜ್ಞಾನಿಕತೆಯಿಂದ ಕೂಡಿದೆ. ಇದರ ಕಾಮಗಾರಿ 2017ರಲ್ಲಿ ಪ್ರಾರಂಭವಾಗಿ 2025ರಲ್ಲಿ ಮುಕ್ತಾಯ ಮಾಡಲಾಗುತ್ತದೆ. ಆದರೆ, ಕಾಮಗಾರಿ ಪರಿಪೂರ್ಣತೆ ಕಂಡಿಲ್ಲ. ಪಾದಚಾರಿಗಳು ಓಡಾಡಲು ಜಾಗವಿಲ್ಲ. ಸ್ಕೈವಾಕ್ ಇಲ್ಲ. ಇಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಬಳಿ ಮಾತನಾಡಿದ್ದೇನೆ. ಎಳ್ಳುಪುರ, ವೀರಾಪುರ ಬಳಿ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೂ ಕೇಳಿದ್ದೇವೆ ಎಂದು ಹೇಳಿದರು.
22ಕೋಟಿ ವೆಚ್ಚದಲ್ಲಿ ಗತಿಶಕ್ತಿ ಯೋಜನೆಯಡಿ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾರ್ಗೋ ಟರ್ಮಿನಲ್ ನಿರ್ಮಾಣ ಸಹ ಆಗುತ್ತಿದೆ. ಗೌರಿಬಿದನೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೊಸ ರೈಲು ಬೇಕು ಎಂದು ರೈಲ್ವೆ ಸಚಿವ ವಿ.ಸೋಮಣ್ಣ ಅವರ ಬಳಿ ಕೇಳಿದ್ದೇವೆ ಎಂದರು…
ಈ ವೇಳೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ನಗರಸಭೆ ಸದಸ್ಯ ಪದ್ಮನಾಭ್, ನಗರಸಭೆ ಪೌರಾಯುಕ್ತಾ ಕಾರ್ತೀಕೇಶ್ವರ್, ಟೋಲ್ ಅಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು, ಎನ್ ಎಚ್ ಎ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು…