ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ವಿಚಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಆರ್.ಶ್ರೀರಾಮುಲು, ಪಕ್ಷದಲ್ಲಿ ನಾನು ಅಧ್ಯಕ್ಷನಾಗಬೇಕು ಅಂತ ಸಾಕಷ್ಟು ಜನ ಹಿರಿಯ ನಾಯಕರಿಗೆ ಆಸೆ ಇತ್ತು. ಎಲ್ಲರಿಗೂ ಎಲ್ಲಾ ಸಮಯದಲ್ಲು ಸಮಾಧಾನ ಮಾಡಲು ಆಗಲ್ಲ. ಇಂದು ತೆಗೆದುಕೊಂಡ ನಿರ್ಧಾರ ತಪ್ಪಾ ಸರಿಯಾ ಅನ್ನೋದು ಚರ್ಚೆ ಮಾಡಬಾರದು. ಒಮ್ಮೆ ನಮ್ಮ ಹಿರಿಯ ನಾಯಕರು ತೀರ್ಮಾನ ತೆಗೆದುಕೊಂಡ ಮೇಲೆ ಒಟ್ಟಾಗಿ ಕೆಲಸ ಮಾಡಬೇಕು. ವಿಜಯೇಂದ್ರ ಅವರಿಗೆ ಸಂಪೂರ್ಣ ಸಹಕಾರ ನೀಡಿ ಒಗ್ಗಟ್ಟಾಗಿ ಹೋಗುವ ಕೆಲಸ ನಾವೆಲ್ಲ ಮಾಡುತ್ತೇವೆ ಎಂದರು.
ನಮ್ಮ ನಾಯಕರ ಆದೇಶದ ಮೇರೆಗೆ ಯುವ ನಾಯಕ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಘೋಷಣೆಯಾಗಿದೆ. ರಾಜ್ಯದ ಜನ ಹಾಗೂ ಬಿಜೆಪಿ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಮಾಜಿ ಸಚಿವ ಆರ್.ಶ್ರೀರಾಮುಲು ಪ್ರತಿಕ್ರಿಯೆ ನೀಡಿದರು.
ವಿಜಯೇಂದ್ರ ಅವರನ್ನ ಆಯ್ಕೆ ಮಾಡುವ ಮೂಲಕ ಹೈಕಮಾಂಡ್ ರಾಜ್ಯದ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಅವರಂತೆ ವಿಜಯೇಂದ್ರ ಅವರು ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಕಳೆದ ಚುನಾವಣೆಯಲ್ಲಿ ನಮ್ಮಂತೆ ಸಾಕಷ್ಟು ಜನ ಸೋತಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಅವರು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.