ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸಿಬಿಐ ನಿರ್ದೇಶಕರಾಗಿ ನೇಮಕ

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಅವರು ಮುಂದಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಲಿದ್ದಾರೆ.

ಸಿಬಿಐ ಹಾಲಿ ನಿರ್ದೇಶಕರಾಗಿರುವ ಸುಭೋಧ್ ಕುಮಾರ್ ಅವರ ಅಧಿಕಾರಾವಧಿ ಇದೇ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದ್ದು, ಈ ಹಿನ್ನೆಲೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ. 1986 ರ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿರುವ ಪ್ರವೀಣ್ ಸೂದ್, ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಸೇವಾ ಅವಧಿ ಇನ್ನೂ ಒಂದು ವರ್ಷವಿದೆ.

ಪ್ರಸ್ತುತ ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸುಭೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಇದೇ ಮೇ. 25 ರಂದು ಮುಕ್ತಾಯಗೊಳ್ಳಲಿದೆ. 1985 ರ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಸುಭೋಧ್ ಕುಮಾರ್ ಅವರು, 2021, ಮೇ 26 ರಂದು ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಆಯ್ಕೆ ಹೇಗೆ..?

ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ನಿಗದಿತ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.

ಕೇಂದ್ರೀಯ ತನಿಖಾ ದಳ (CBI )ಎಂಬುದು ಭಾರತದ ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಅಪರಾಧದ ತನಿಖಾ ಘಟಕವಾಗಿ, ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿ ಮತ್ತು ಗುಪ್ತಚರ ಸಂಸ್ಥೆಯಾಗಿ ಅದು ಸೇವೆ ಸಲ್ಲಿಸುತ್ತದೆ. 1963 ರ ಏಪ್ರಿಲ್‌ 1 ರಂದು ಇದು ಸ್ಥಾಪಿಸಲ್ಪಟ್ಟಿತು. “ದುಡಿಮೆ, ನಿಷ್ಪಕ್ಷಪಾತತೆ, ಸಮಗ್ರತೆ” ಎಂಬುದು ಇದರ ಧ್ಯೇಯವಾಕ್ಯವಾಗಿದೆ.

Leave a Reply

Your email address will not be published. Required fields are marked *