ರಾಜಕೀಯವಾಗಿ ದಿವಾಳಿಯಾದ ಬಿಜೆಪಿಯಿಂದ ‘ಬಾತ್ ರೂಮ್’ ರಾಜಕಾರಣ- ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಿಡಿ

ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿದ್ದು, ಜನರು ಇವುಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಹಾದಿ-ಬೀದಿಗಳಲ್ಲಿ ಇವುಗಳ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಯೋಜನೆಯ ಪ್ರಯೋಜನ ಪಡೆಯಲು ಪರಸ್ಪರ ನೆರವಾಗುತ್ತಿದ್ದಾರೆ. ಬಿಜೆಪಿಯ ಕೋಮು ರಾಜಕಾರಣದ ನೋವಿಗೆ, ಬೆಲೆ ಏರಿಕೆಯ ಬರೆಯಿಂದಾದ ಗಾಯಕ್ಕೆ ಕಾಂಗ್ರೆಸ್, ಗ್ಯಾರಂಟಿಗಳ ಮುಲಾಮು ಹಚ್ಚಿದೆ. ಸದಾ ನೋವು ನಿರಾಸೆ, ಹತಾಶೆಯಲ್ಲಿದ್ದ ಸಾರ್ವಜನಿಕರು ಗೃಹ ಜ್ಯೋತಿ, ಶಕ್ತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಯೋಜನೆಗಳ ಲಾಭ ಪಡೆಯುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಗ್ಯಾರಂಟಿ ಕಾರ್ಯಕ್ರಮಗಳ ವಿರುದ್ಧ ಬಿಜೆಪಿ ಸೃಷ್ಟಿಸುತ್ತಿರುವ ಅಪ ಪ್ರಚಾರಗಳಿಗೆ ಅವರು ಕಿವಿಗೊಡದೆ, ತಮ್ಮ ಬದುಕಿನ ನಿರ್ವಹಣೆಯ ಕಡೆಗೆ ಗಮನಹರಿಸುತ್ತಿದ್ದಾರೆ. ಇದರಿಂದ ಬಿಜೆಪಿ ಸಂಪೂರ್ಣವಾಗಿ ವಿಚಲಿತಗೊಂಡು ಇಂಗು ತಿಂದ ಮಂಗನಂತೆ ಆಡುತ್ತಿದೆ ಎಂದು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಿಡಿಕಾರಿದೆ.

ತಲೆಯ ತುಂಬಾ ಕೋಮು ವಿಷವನ್ನೇ ತುಂಬಿಕೊಂಡಿರುವ ಅವರಿಗೆ ಚರ್ಚೆ ಮಾಡುವುದಕ್ಕೆ, ಹೋರಾಟ ಮಾಡುವುದಕ್ಕೆ ವಿಚಾರಗಳೇ ಸಿಗುತ್ತಿಲ್ಲ. ಈ ಕಾರಣದಿಂದಾಗಿಯೇ ಉಡುಪಿಯ ಕಾಲೇಜಿನ ಮಕ್ಕಳ ಹುಡುಗಾಟದ ವಿಚಾರವನ್ನು ‘ಬಾತ್ ರೂಮ್ ರಾಜಕಾರಣ’ವನ್ನಾಗಿ ಪರಿವರ್ತಿಸಿ, ರಾಜ್ಯದ ಜನರ ಮನಸಿನಲ್ಲೂ ಕೋಮು ವಿಷಬೀಜ ಬಿತ್ತಲು ಯತ್ನಿಸುತ್ತಿದೆ. ಇದನ್ನ ಬಿಜೆಪಿಗರ ಮುಖಕ್ಕೆ ರಾಚುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಬಿಜೆಪಿ ನಾಯಕಿ ಖುಷ್ಬು ಅವರೇ ಹೇಳಿದ್ದಾರೆ. “ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ, ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ” ಎಂದು. ಈ ಹೇಳಿಕೆಯ ಮೂಲಕ ಖುಷ್ಬು ಅವರು ಬಿಜೆಪಿಯ ಬಾತ್ ರೂಮ್ ರಾಜಕೀಯವನ್ನು ಬಯಲು ಮಾಡಿದ್ದಾರೆ.

ಬಿಜೆಪಿಗೆ ತಮ್ಮ ಪಕ್ಷಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಆಗುತ್ತಿಲ್ಲ, ವಿರೋಧ ಪಕ್ಷದ ನಾಯಕರ ನೇಮಕದ ವಿಚಾರ ಬಂದಾಗಲೆಲ್ಲ ಜೆಡಿಎಸ್ ಕಡೆಗೆ ತಿರುಗಿ ನೋಡುತ್ತಾರೆ, ಹೋರಾಟ-ಚರ್ಚೆ ಎಂದಾಗಲೆಲ್ಲ ಶಾಲಾ ಮಕ್ಕಳ ಹುಡುಗಾಟದಲ್ಲಿ ಬಾತ್ ರೂಮ್ ರಾಜಕಾರಣ ಮಾಡುತ್ತಾರೆ. ಇದೆಲ್ಲವೂ ‘ಬಿಜೆಪಿ ರಾಜಕೀಯವಾಗಿ ಸಂಪೂರ್ಣವಾಗಿ ದಿವಾಳಿಯಾಗಿದೆ’ ಎಂಬುದನ್ನು ಸಾಬೀತು ಮಾಡುತ್ತಿವೆ ಎಂದು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *