ಕಳೆದ ಬಾರಿ ರಾಗಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ್ದ ರೈತರಿಗೆ ಕಳಪೆ ಚೀಲಗಳನ್ನು ನೀಡಿದ್ದಾರೆ. ಸರಕಾರ ಒಂದು ಚೀಲಕ್ಕೆ ೪೪ ರೂಪಾಯಿಗಳಿಗೆ ಟೆಂಡರ್ ಮಾಡಿದೆ. ಆದರೆ ಹರಿದ ಚೀಲಗಳನ್ನು ರೈತರಿಗೆ ನೀಡಲಾಗುತ್ತಿದೆ. ಬದಲಾಗಿ ಚೀಲಗಳನ್ನು ಕೊಡುವುದನ್ನು ಬಿಟ್ಟು ರೈತರ ಖಾತೆಗೆ ಚೀಲಗಳ ಹಣವನ್ನು ಸಂದಾಯ ಮಾಡಿ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತರಾಯಪ್ಪ ಆಗ್ರಹಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಇಬ್ಬರಿಗೆ ಚೀಲ ವಿತರಣೆಯ ಗುತ್ತಿಗೆ ಪಡೆದಿದ್ದರು. ಆದರೆ ಈ ಪೈಕಿ ಎಲ್ಲಾ ರೈತರಿಗೂ ಚೀಲ ವಿತರಣೆ ಮಾಡಿಲ್ಲ. ಪರಿಣಾಮ ಸರ್ಕಾರದ ಸಂಬಂಧಿತ ಇಲಾಖೆಯಿಂದ ನೊಟೀಸ್ ಜಾರಿ ಮಾಡಿದ್ದಾರೆ. ಕಳಪೆ ಚೀಲ ನೀಡಿರುವ ಕುರಿತು ಸರ್ಕಾರ ತನಿಖೆಗೆ ಆದೇಶ ಮಾಡಬೇಕು. ಹಾಗೂ ಚೀಲದ ಬದಲು ಚೀಲದ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ನಾಗದೇನಹಳ್ಳಿ ಎ.ಆನಂದಮೂರ್ತಿ, ಬೆಸ್ಕಾಂ ವಿದ್ಯುತ್ ಗುತ್ತಿಗೆದಾರ ಶಿವಶಂಕರ್, ರಾಜ್ಯ ಉಪಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಹೇಮಂತ್, ದೊಡ್ಡಬಳ್ಳಾಪುರ ತಾ.ಅಧ್ಯಕ್ಷ ಎಸ್.ಬಿ.ರಮೇಶ್, ಬೆಂಗಳೂರು ಗ್ರಾಮಾಂತರ ಉಪಾಧ್ಯಕ್ಷ ತ್ಯಾಗರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ಆರ್.ಕೆ.ಎಂ ಗೌಡ, ದೇವನಹಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ರೈತರಾದ ಚನ್ನರಾಯಪ್ಪ, ಬೈರೇಗೌಡ ಇದ್ದರು.