ದಾಬಸ್ಪೇಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಪರ್ಕ ತ್ಯಾಜ್ಯ ವಿಲೇವಾರಿಯಾಗದ ಕಾರಣ ದಾಬಸ್ಪೇಟೆ ಮುಖ್ಯ ರಸ್ತೆಯ ನೀಡವನದ ಹೈವೆ ಪಕ್ಕ ಇರುವ ಸರ್ವಿಸ್ ರಸ್ತೆ ಇಕ್ಕೆಲಗಳಲ್ಲಿ ರಾಶಿಗಟ್ಟಲೇ ಕಸ ಸುರಿಯುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ.
ಕೋಳಿ ತ್ಯಾಜ್ಯ, ಹೋಟೆಲ್ ತ್ಯಾಜ್ಯ, ಕೊಳೆತ ತರಕಾರಿ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯವನ್ನು ರಸ್ತೆಯಲ್ಲಿ ಹಾಕಲಾಗುತ್ತಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ. ಸದ್ಯ ಈ ತ್ಯಾಜ್ಯ ಗಬ್ಬೆದ್ದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಇದೆ. ತ್ಯಾಜ್ಯ ತಿನ್ನಲು ನೂರಾರು ನಾಯಿಗಳು ಇಲ್ಲಿ ಜಮಾಯಿಸುತ್ತವೆ. ನಾಯಿಗಳು ಒಂದೊಕ್ಕೊಂದು ಕಚ್ಚಾಡುತ್ತ ರಸ್ತೆಗೆ ಬರುತ್ತವೆ. ಆಗ ವಾಹನ ಸವಾರರು ಅಪಘಾತಗಳಿಂದಾಗಿ ಸಾವು-ನೋವು ಅನುಭವಿಸುತ್ತಿದ್ದಾರೆ. ಇರುವ ಕಸ ವಿಲೇವಾರಿ ಮಾಡಲು, ಇನ್ನೂ ಮುಂದೆ ರಸ್ತೆ ಇಕ್ಕೆಲಗಳಲ್ಲಿ ಕಸ ಹಾಕದಂತೆ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಆಟೋ ಡ್ರೈವರ್ ಪ್ರೇಮ್ ಕುಮಾರ್ ದೂರಿದ್ದಾರೆ.