ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೆರೆ, ಕುಂಟೆ, ಅಣೆಕಟ್ಟುಗಳಲ್ಲಿ ನೀರಿಲ್ಲದೇ ಬತ್ತಿಹೋಗಿವೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಬಿ.ಎನ್.ಮಂಜುನಾಥ್ ಹೇಳಿದರು.
ನಗರದ ಡಿ.ಕ್ರಾಸ್ ವೃತ್ತದ ಬಳಿ ಕರಾರವೇ ವತಿಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ವಿರೋಧಿಸಿ ನಡೆದ ರಸ್ತೆ ತಡೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಅನ್ಯಾಯ ಮಾಡುತ್ತಿದೆ. ಕರ್ನಾಟಕದ ಜನತೆಗೆ ಕುಡಿಯಲು ನೀರು ಇಲ್ಲದಿದ್ದರೂ ನಮಗೆ ನೀರು ಕೊಡಿ ಎಂದು ತಮಿಳುನಾಡು ಸರ್ಕಾರವು ಉದ್ಧಟತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ರಾಜಕಾರಣಿಗಳು ಸಹ ವೋಟ್ ಬ್ಯಾಂಕ್ ಗಾಗಿ ತಮಿಳುನಾಡಿಗೆ ಕಾವೇರಿ ನೀರನ್ನ ಬಿಡಲಾಗುತ್ತಿದೆ. ಇದರಿಂದ ಮಂಡ್ಯ, ಮೈಸೂರು ಭಾಗದ ರೈತರ ವ್ಯವಸಾಯಕ್ಕೆ ಹಾಗೂ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಿ.ಜಿ.ಬಾಬು, ಪ್ರಧಾನ ಕಾರ್ಯದರ್ಶಿ ಆರ್.ಮೋಹನ್, ರಾಜ್ಯ ಉಪಾಧ್ಯಕ್ಷ ಸಿ.ಜಿ.ಮಂಜುನಾಥ್, ಸಂಘಟನೆ ಮುಖಂಡರಾದ ಮುನಿರಾಜು, ವರದರಾಜು, ಕೃಷ್ಣಗೌಡ, ರಾಮಾಂಜಿನಪ್ಪ, ರಾಘವೇಂದ್ರ, ಸುನಿಲ್ ಗೌಡ, ಮಂಜುನಾಥ್,ಹೆಚ್ ಪದ್ಮ, ಚಂದನ್, ಅನಿಲ್ ಗೌಡ, ಗಂಗಾಧರ್, ಭಾನು ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.