ಯುವ ರಾಜಕಾರಣಿಗಳು ಯಶಸ್ಸು ಗಳಿಸಲು ಜೀವನದಲ್ಲಿ ಸಮಯಪ್ರಜ್ಞೆ ಹಾಗೂ ಶಿಸ್ತು ಇರಬೇಕು- ಸಚಿವ ಕೆ.ಎಚ್.ಮುನಿಯಪ್ಪ ಸಲಹೆ

ಯುವ ರಾಜಕಾರಣಿಗಳು ಯಶಸ್ಸು ಗಳಿಸಲು ಜೀವನದಲ್ಲಿ ಸಮಯಪ್ರಜ್ಞೆ ಹಾಗೂ ಶಿಸ್ತು ಇರಬೇಕು. ನನ್ನಲ್ಲಿನ ಶಿಸ್ತಿನಿಂದ ರಾಜಕೀಯದಲ್ಲಿ 50 ವರ್ಷ ಯಶಸ್ವಿಯಾಗಿ ಉಳಿಯಲು ಸಾಧ್ಯವಾಯಿತು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.

ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ಸ್ಮೃತಿ ಗ್ರಾಮದ ಡಿಮೆನ್ಶಯಾ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಧೀರಜ್ ಮುನಿರಾಜ್ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರು. ಶಾಸಕ ಧೀರಜ್ ಮುನಿರಾಜ್ ಅವರು ತಡವಾಗಿ ಬಂದಿದ್ದರಿಂದ ಸಚಿವ ಕೆ.ಎಚ್.ಮುನಿಯಪ್ಪನವರು ನಗುನಗುತ್ತಾ… ನಯವಾಗಿ ಸಮಯಪ್ರಜ್ಞೆ ಹಾಗೂ ಶಿಸ್ತಿನ ಪಾಠವನ್ನು ಮಾಡಿದರು.

ಗಾಂಧೀಜಿಯ ಪುಸ್ತಕಗಳನ್ನು ಪ್ರತಿಯೊಬ್ಬರು ಓದಬೇಕು. ಅವರ ತತ್ವ ಆದರ್ಶ, ಶಿಸ್ತಿನ ಜೀವನದ ಬಗ್ಗೆ ಕಲಿಯಬೇಕು. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲರೂ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು. ನಾವು ಪ್ರಮಾಣ ವಚನ ಸ್ವೀಕರಿಸಿದಂತೆ ಯಾವುದೇ ಸ್ವಾರ್ಥಯಿಲ್ಲದೆ ಕೆಲಸ ಮಾಡಬೇಕು. ಸಮಾಜದಲ್ಲಿ ಸಂವಿಧಾನ ಬದ್ದವಾಗಿ ಕೆಲಸ ಮಾಡಬೇಕು ಎಂದು ಯುವ ಶಾಸಕರಿಗೆ ಸಚಿವರು ಸಲಹೆ ನೀಡಿದರು.

ಹಿರಿಯರ ಆರೈಕೆ ಜೀವನದಲ್ಲಿ ಪುಣ್ಯದ ಕೆಲಸ, ಪ್ರತಿಯೊಬ್ಬರು ತಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಧನ್ಯವಾಗಿಸಕೊಳ್ಳಬೇಕು. ಹಿರಿಯರ ಆರೈಕೆಯೂ ನಮ್ಮ ಜೀವದ ಪುಣ್ಯ ಕೆಲಸದಲ್ಲಿ ಒಂದು ಎಂದರು.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ತಂದೆ ತಾಯಿಯವರನ್ನು ಕಡೆಗಣಿಸಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಈ ಪ್ರವೃತ್ತಿಯನ್ನು ಕಡಿಮೆ ಮಾಡಿಸಬೇಕು. ನಾವು ನಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ಜೀವನ ಹಸನಾಗುತ್ತದೆ. ನೈಟಿಂಗೇಲ್ಸ್ ಟ್ರಸ್ಟ್ ವತಿಯಿಂದ ಹಿರಿಯರ ಆರೈಕೆಗಾಗಿ ಹಿರಿಯರ ಮರೆವಿನ ಕಾಯಿಲೆಯನ್ನು ಕಡಿಮೆಗೊಳಿಸುವ ಸಲುವಾಗಿ ಸ್ಮೃತಿ ಗ್ರಾಮವನ್ನು ಆಯೋಜಿಸಿ ಅವರ ಆರೈಕೆ ಮಾಡುವ ಕಾರ್ಯ ಮಾಡಲು ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದರು.

ಹಿರಿಯರ ಆರೈಕೆಯಲ್ಲಿ ನೈಟಿಂಗೇಲ್ಸ್ ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಸರ್ಕಾರದ ವತಿಯಿಂದ ಯಾವುದೇ ರೀತಿಯ ಸಹಕಾರ ಸಹಾಯ ಬೇಕಿದಲ್ಲಿ ಸಹಕರಿಸುತ್ತೇವೆ ಎಂದರು.

ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಹಿರಿಯರು ವಿವಿಧ ರೀತಿಯ ಕಾಯಿಲೆಯಿಂದ ಬಳಲುತ್ತಿರುತ್ತಾರೆ. 100 ಹಾಸಿಗೆ ಸ್ಮೃತಿ ಗ್ರಾಮವು ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಇದರ ಯಶಸ್ಸಿನಿಂದ ಹೆಚ್ಚಿನ ಜನರಿಗೆ ಸಹಾಯವಾಗಲಿದೆ. ಇದಕ್ಕಾಗಿ ಸ್ಥಳೀಯ ಗ್ರಾಪಂ ಸದಸ್ಯರು, ಅಧ್ಯಕ್ಷರು ನೆರವು ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ನ ರಾಧಾ ಎಸ್.ಮೂರ್ತಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ರಾಜಣ್ಣ, ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಪ್ಪ, ಸದಸ್ಯರಾದ ಆರ್.ವಿ.ಮಹೇಶ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗರತ್ನಮ್ಮ ,ಮುಖಂಡರಾದ ರವಿಸಿದ್ದಪ್ಪ, ನಾಗರಾಜು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *