ಮೇಲಾಧಿಕಾರಿಗಳು ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಇದ್ದಾಗ ಸಂಸ್ಥೆಗೆ ಒಳ್ಳೆಯ ಹೆಸರು- ವಿ.ಬಸವರಾಜ್

ಕೋಲಾರ: ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡು ಅವರಿಂದ ಉತ್ತಮ ಕೆಲಸವನ್ನು ತೆಗೆದುಕೊಂಡಾಗ ಮಾತ್ರವೇ ಸಾರಿಗೆ ಸಂಸ್ಥೆಗೆ ಉತ್ತಮ ಗೌರವ ಮತ್ತು ಒಳ್ಳೆಯ ಹೆಸರು ಬರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್ ತಿಳಿಸಿದರು.

ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ ಹಾಗೂ ಸಂಚಾರಿ ನಿಯಂತ್ರಣಾಧಿಕಾರಿ ವೈ.ವಿ ರಮೇಶ್ ಕುಮಾರ್ ಅವರಿಗೆ ಅಭಿನಂದಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯಲ್ಲಿ ಚಾಲಕರು ಮತ್ತು ನಿರ್ವಾಹಕರ ಸೇವೆ ಶ್ಲಾಘನೀಯ. ಅವರಿಂದಲೇ ಸಂಸ್ಥೆಯ ಉಳಿವು. ಯಾವುದೇ ಕೆಲಸವಾಗಲಿ ಸಂಸ್ಥೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಇವತ್ತು ನೀವು ಸಂಸ್ಥೆಗೆ ಸೇವೆ ನೀಡಿ ನಿವೃತ್ತಿಯಾಗುತ್ತಿದ್ದು, ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಂಡಾಗ ನಿವೃತ್ತಿ ಸಂದರ್ಭದಲ್ಲಿ ಕೂಡ ನಿಮಗೆ ನೆಮ್ಮದಿ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೈ.ವಿ ರಮೇಶ್ ಕುಮಾರ್, ಯಾವುದೇ ಕೆಲಸವಾಗಲಿ ಅಲ್ಲಿನ ಸಂಸ್ಥೆಯನ್ನು ದೇವರ ರೀತಿಯಲ್ಲಿ ನೋಡಿಕೊಳ್ಳಬೇಕು. ನಾವು ಸಂಸ್ಥೆಗೆ ಸೇವಕರು ಅಷ್ಟೇ ನಮ್ಮ ಸೇವೆಯ ಸರಿ ತಪ್ಪುಗಳನ್ನು ಜನ ನಿರ್ಧರಿಸುತ್ತಾರೆ. ಇವತ್ತು ಸನ್ಮಾನಿಸುತ್ತಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಾರ್ಯವು ಕೂಡ ಶ್ಲಾಘನೀಯವಾಗಿದ್ದು, ಈ ಸನ್ಮಾನ ಇತರೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮಾದರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ವಿಭಾಗೀಯ ಡಿ.ಟಿ.ಒ ಜಯಶಾಂತಕುಮಾರ್, ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್, ಅಧಿಕಾರಿಗಳಾದ ಶ್ರೀನಿವಾಸಮೂರ್ತಿ, ಹೆಚ್.ಎನ್ ಶ್ರೀನಿವಾಸಗೌಡ, ಮಾನಪ್ಪ, ಜಯಚಂದ್ರ, ಅಬ್ಬಣಿ ಸೊಣ್ಣಪ್ಪ, ವಕ್ಕಲೇರಿ ಮಂಜುನಾಥ್, ಶ್ಯಾಮೇಗೌಡ, ರಾಮಮೂರ್ತಿ, ಸುಬ್ರಮಣಿ, ಶ್ರೀನಿವಾಸ್, ವೇಣು, ನಾಗರಾಜ್, ಗೋವಿಂದಪ್ಪ, ವೆಂಕಟಾಚಲಪತಿಗೌಡ ಸೇರಿದಂತೆ ಕೆ.ಎಸ್.ಆರ್.ಟಿ.ಸಿ ಚಾಲಕರು, ನಿರ್ವಾಹಕರು ಇದ್ದರು.

Leave a Reply

Your email address will not be published. Required fields are marked *