ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸಮೀಪವಿರುವ ಪಾಲ್ ಪಾಲ್ ದಿನ್ನೆ ಗ್ರಾಮದ ಹೊರವಲಯದಲ್ಲಿರುವ ಕಾಡಿನಂಚಿನಲ್ಲಿ ನಿನ್ನೆ ಮಧ್ಯಾಹ್ನ ಮೇಕೆಯೊಂದರ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಇಂದು ಮೃತ ಮೇಕೆ ಪತ್ತೆಯಾಗಿದೆ.
ರೈತ ಲಕ್ಷ್ಮಣ್ ಎಂದಿನಂತೆ ಬುಧವಾರವು(ಆ.9) ತನ್ನ ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರವಲಯದಲ್ಲಿರುವ ಕಾಡಿಗೆ ಹೋಗಿದ್ದಾರೆ. ಯಾರು ಇಲ್ಲದ ಸಮಯದಲ್ಲಿ ಹೊಂಚು ಹಾಕಿ ಮೇಕೆ ಮೇಲೆ ಎರಗಿ ಬಲಿ ಪಡೆದಿರುವ ಚಿರತೆ. ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಒಂದು ಮೇಕೆ ನಾಪತ್ತೆಯಾಗಿರುವುದು ರೈತ ಲಕ್ಷ್ಮಣ್ ಗಮನಕ್ಕೆ ಬಂದಿದೆ. ಇಂದು ಕಾಡೆಲ್ಲಾ ಹುಡುಕಾಡಿದ ಸಂದರ್ಭದಲ್ಲಿ ಕಾಡಿನ ಪಕ್ಕದಲ್ಲೇ ಇರುವ ಕೆರೆ ಬಳಿ ಮೃತ ಮೇಕೆ ಪತ್ತೆಯಾಗಿದೆ.
ಈ ಕುರಿತು ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಾವಳಿಗೆ ಬೆಚ್ಚಿಬಿದ್ದಿರುವ ಗ್ರಾಮಸ್ಥರು, ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.