ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 20 (ಕರ್ನಾಟಕ ವಾರ್ತೆ)- ಕೇಂದ್ರ ಸರ್ಕಾರವು 2023 ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿಯನ್ನು ನೀಡಿದ್ದು, ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ” ಎಂದು ಅನುಷ್ಠಾನಗೊಳಿಸಲಾಗುತ್ತಿದೆ.
2023ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ), ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಮತ್ತು ನೀರಾವರಿ), ಹುರುಳಿ (ಮಳೆಯಾಶ್ರಿತ), ನೆಲಗಡಲೆ (ಮಳೆಯಾಶ್ರಿತ) ಮತ್ತು ಟೊಮ್ಯಾಟೊ ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ. ಬೆಳೆ ಸಾಲ ಪಡೆಯದ ಹಾಗೂ ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಆಯ್ಕೆಯ ಅವಕಾಶವಿದೆ.
ಯೋಜನೆಯ ಉದ್ದೇಶ
ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ/ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು.
ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ/ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತದೆ.
ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ, ನಷ್ಟದ ನಿರ್ಧಾರಣೆಯನ್ನು ವ್ಯಕ್ತಿಗತ ತಾಕು/ಹೊಲದ ಆಧಾರದ ಮೇಲೆ ನಿರ್ಧರಿಸಿ ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.
ನೆಲಗಡಲೆ (ಮಳೆಆಶ್ರಿತ) ಬೆಳೆಗೆ 31.07.2023, ರಾಗಿ (ಮಳೆ ಆಶ್ರಿತ), ರಾಗಿ (ನೀರಾವರಿ), ಭತ್ತ (ನೀರಾವರಿ), ಮು.ಜೋಳ(ನೀರಾವರಿ), ಮು.ಜೋಳ(ಮಳೆಆಶ್ರಿತ), ಹುರುಳಿ (ಮಳೆಆಶ್ರಿತ) ಬೆಳೆಗಳಿಗೆ ನೋಂದಣಿಗೆ ಕೊನೆಯ ದಿನಾಂಕ 16.08.2023 ಆಗಿರುತ್ತದೆ.
ಗಮನಿಸಬೇಕಾದ ಅಂಶಗಳು
ಬೆಳೆ ವಿಮೆ ನೋಂದಣಿಗೆ ಫ್ರೂಟ್ಸ್ (FRUITS ID) ಗುರುತಿನ ಸಂಖ್ಯೆ ಕಡ್ಡಾಯವಾಗಿದ್ದು, ರೈತರು ವಿಮಾ ಕಂತಿನ ಹಣವನ್ನು ಪ್ರಸ್ತಾವನೆಗಳೊಂದಿಗೆ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (Common Service Center), ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ/ಖಾತೆ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳುವುದು.
ರಿಲಯನ್ಸ್ ಜನರಲ್ ಇನ್ಶೂರನ್ಸ್ ಕಂಪನಿ ಲಿ. ಆಯ್ಕೆಯಾಗಿದ್ದು, ಟೋಲ್ ಪ್ರೀ ಸಂಖ್ಯೆ 1800 102 4088 ಗೆ ಸಂಪರ್ಕಿಸಬಹುದಾಗಿದೆ, ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗಳ ದೂರವಾಣಿ ಸಂಖ್ಯೆ ಜಿಲ್ಲಾ ಪ್ರತಿನಿಧಿ ಅಶೋಕ್ ಕುಮಾರ್ ರೆಡ್ಡಿ, +918655821851, ತಾಲ್ಲೂಕು ಪ್ರತಿನಿಧಿಗಳು: ದೇವನಹಳ್ಳಿ: ಕಾಂತಕುಮಾರ್ : 9341627547, ದೊಡ್ಡಬಳ್ಳಾಪುರ: ರವಿಶಂಕರ್ : 9620838348, ಹೊಸಕೋಟೆ: ಶ್ರೀನಿವಾಸ ಮೂರ್ತಿ: 9900450778, ನೆಲಮಂಗಲ: ಕುಮಾರಸ್ವಾಮಿ : 8618812813 ಇವರನ್ನು ಸಂಪರ್ಕಿಸುವುದು.
ಹೆಚ್ಚಿನ ವಿವರಗಳಿಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.