ಮಾ.6ರಂದು ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ: ಸರ್ಕಾರ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ 38 ಸಾವಿರ ಕೋಟಿ ಬಿಲ್‌ಗಾಗಿ ಆಗ್ರಹ

ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ 38 ಸಾವಿರ ಕೋಟಿ ಬಿಲ್‌ಗಾಗಿ ಆಗ್ರಹಿಸಿ ಮಾ.6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆರ್‌.ಮಂಜುನಾಥ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.6ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 30 ಸಾವಿರ ಗುತ್ತಿಗೆದಾರರು ಭಾಗಿಯಾಗಲಿದ್ದು, ಅಂದು ಒಂದು ದಿನದ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು. ಆಗಲು ಸಹ ಸಿಎಂ ಹಾಗೂ ಸರ್ಕಾರ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸದಿದ್ದರೆ ನಂತರ ಏಪ್ರಿಲ್‌ನಿಂದ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಠಾವಧಿಯ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ನೋಂದಾಯಿತ ಗುತ್ತಿಗೆದಾರರಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಗುತ್ತಿಗೆದಾರರು ಮಾಡಿರುವ ಸರ್ಕಾರಿ ಕಾಮಗಾರಿಗಳ ಬಿಲ್ ಬಾಕಿಯಿದೆ. 2021ರಿಂದ ಇದುವರೆಗೆ ಲೋಕೋಪಯೋಗಿ, ಕೆಬಿಜೆಎನ್‌ಎಲ್, ಜಲಸಂಪನ್ಮೂಲ, ಸಣ್ಣ ನೀರಾವರಿ, ಜೆಜೆಎಂ ಯೋಜನೆ, ಆರ್‌ಡಿಪಿಆರ್‌ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ₹38 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದು, ವಿಜಯಪುರ ಜಿಲ್ಲೆಯೊಂದರಲ್ಲೇ ವಿವಿಧ ಇಲಾಖೆಗಳಲ್ಲಿ ಸೇರಿ ಒಟ್ಟು ₹2364 ಕೋಟಿ ಬಾಕಿಯಿದೆ. ಈ ಬಗ್ಗೆ ಸಂಬಂಧಿತ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರು ಕಳೆದೊಂದು ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಹಲವುಬಾರಿ ಸಭೆ ಕರೆದು ಕೊನೆ ಕ್ಷಣದಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ. ತಕ್ಷಣವೇ ಸಿಎಂ ಗುತ್ತಿಗೆದಾರರ ಸಭೆ ಕರೆದು, ಕಾಂಟ್ರಾಕ್ಟರ್ಸ್ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಇನ್ನು ಕೆಲವರು ಇಲಾಖೆ ಸಚಿವರು ನೇರವಾಗಿ ಆಡಳಿತ ನಡೆಸದೆ, ಮಧ್ಯವರ್ತಿಗಳಿಂದ ಆಡಳಿತ ನಡೆಸುತ್ತಿದ್ದಾರೆ. ಇಲಾಖೆಯ ಮುಖ್ಯ ಎಂಜಿನಿಯರ್‌ಗಳನ್ನು ಕೆಲ ಸಚಿವರು ಅವರ ಖಾಸಗಿ ಆಫೀಸ್‌ಗಳಿಗೆ ಕರೆಸಿಕೊಂಡು ವ್ಯವಹರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿ ಸದಸ್ಯರು, ಸಂಘದ ಕೋಶಾಧ್ಯಕ್ಷ ಎ ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ವಿ ಲಕ್ಷ್ಮಿ ಕಾಂತ್, ನಂದ ಕುಮಾರ್ ಜಿ ಎಂ, ಜಿಲ್ಲಾಧ್ಯಕ್ಷ ಜಿ ಮತ್ತೆ ಲಕ್ಷ್ಮೀಪತಿ, ಜಿಲ್ಲಾ ಕಾರ್ಯಧ್ಯಕ್ಷ ಸುಬ್ರಮಣಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!