ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ……..

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ……..

ಅಭಿವೃದ್ಧಿಯ, ಆಧುನಿಕತೆಯ, ತಾಂತ್ರಿಕ ಪ್ರಗತಿಯ ಲಾಭಗಳನ್ನು ನಾವು ಪಡೆಯಬೇಕಾದರೆ ಮಾನವೀಯ ಮೌಲ್ಯಗಳ ಉಳಿವು ಮತ್ತು ಬೆಳವಣಿಗೆ ಬಹುಮುಖ್ಯ ಅಂಶ. ಇಲ್ಲದಿದ್ದರೆ ಎಲ್ಲಾ ಪ್ರಗತಿಯು ನಮ್ಮನ್ನು ನಿಧಾನವಾಗಿ ವಿನಾಶದ ಅಂಚಿಗೆ ಕೊಂಡೊಯ್ಯಬಹುದು. ಬಹುಶಃ ಈಗ ಆ ಹಂತದಲ್ಲಿ ನಾವಿದ್ದೇವೆ……….

” ನೀವೂ ಎಚ್ಚರಗೊಳ್ಳಿ – ಇತರರನ್ನೂ ಎಚ್ಚರಗೊಳಿಸಿ……..”
ಸ್ವಾಮಿ ವಿವೇಕಾನಂದ…..

ಇಲ್ಲದಿದ್ದರೆ…..
ಒಂದೇ ಕುಟುಂಬಗಳು,
ಒಂದೇ ಮನೆತನಗಳು,
ಒಂದೇ ರಕ್ತ ಸಂಬಂಧಗಳು,
ಒಂದೇ ಹಣ ದಾಹಿಗಳು,
ಒಂದೇ ಜಾತಿಯವರುಗಳು,
ಒಂದೇ ಭ್ರಷ್ಟಾಚಾರಿಗಳು,
ಒಂದೇ ಸುಳ್ಳುಗಾರರು,
ಒಂದೇ ಮತಾಂಧರು,
ಒಂದೇ ಮೌಢ್ಯದವರು,

ಹೀಗೆ ಅವರುಗಳೇ ನಮ್ಮ ಬದುಕನ್ನು ನಿಯಂತ್ರಿಸುತ್ತಾರೆ. ನಾವು ಅವರ ಅಡಿಯಾಳುಗಳಾಗಿ ಇಡೀ ನಮ್ಮ ಜೀವನವನ್ನು ಅವರ ನೆರಳಿನಲ್ಲಿ ಕಳೆಯಬೇಕಾಗುತ್ತದೆ. ನಮ್ಮ ಸ್ವಾತಂತ್ರ್ಯ, ನಮ್ಮ ಚಿಂತನೆ, ನಮ್ಮ ಕ್ರಿಯಾತ್ಮಕತೆಗೆ ಬೆಲೆಯೇ ಇರುವುದಿಲ್ಲ.

ನಮ್ಮ ವಿಧಾನಸಭೆಯ ಮೇಲ್ಮನೆ ಮತ್ತು ಕೆಳಮನೆಗಳಿಗೆ, ನಮ್ಮ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗುವ ಜನ ಪ್ರತಿನಿಧಿಗಳ ಗುಣಮಟ್ಟ ನೋಡಿದರೆ ಮತದಾರರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಉಂಟಾಗುತ್ತದೆ.

ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರ ಮಾತಿನಂತೆ ನಾವು ಮಾತ್ರವಲ್ಲ ಇತರರನ್ನು ಎಚ್ಚರಗೊಳಿಸುವ ಜವಾಬ್ದಾರಿ ನಮ್ಮದಾಗಬೇಕು.

ಅದು ಯಾವ ನಿಟ್ಟಿನಲ್ಲಿ ಇರಬೇಕೆಂದರೆ

ಆಹಾರದ ಕಲಬೆರಕೆ ಹಣಕ್ಕಾಗಿ,
ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಹಣಕ್ಕಾಗಿ,
ಮೌಲ್ವಿ, ಫಾದರ್, ಸ್ವಾಮಿಗಳ ವೇಷ ಹಣಕ್ಕಾಗಿ,
ಡಾಕ್ಟರುಗಳು, ಮೇಷ್ಟ್ರುಗಳ ಆದ್ಯತೆ ಹಣಕ್ಕಾಗಿ,
ರಾಜಕಾರಣಿಗಳು, ಸಮಾಜ ಸೇವಕರ ಮುಖವಾಡ ಹಣಕ್ಕಾಗಿ,
ಅಧಿಕಾರಿಗಳ ಓದು ಬರಹ ಹಣಕ್ಕಾಗಿ,
ಸಾಹಿತಿಗಳ ಹೋರಾಟಗಾರ ಮಾತು, ಅಕ್ಷರಗಳು ಹಣಕ್ಕಾಗಿ,……

ಕೊನೆಗೆ ಹೆಣ್ಣು ಗಂಡಿನ ಮದುವೆ ಸಂಬಂಧಗಳು ಸಹ ಹಣಕ್ಕಾಗಿ ಎಂಬಲ್ಲಿಗೆ ಈ ಸಮಾಜ ಬಂದು ನಿಂತಿದೆ,……….

ಮುಂದೆ………

ಅಭಿವೃದ್ಧಿಯೊಂದಿಗೆ, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಮಾನವೀಯ ಮೌಲ್ಯಗಳ – ನೈತಿಕ ಮೌಲ್ಯಗಳ ಬೆಳವಣಿಗೆಗೂ ಶ್ರಮಿಸಬೇಕಾಗುತ್ತದೆ. ಇಲ್ಲದಿದ್ದರೆ ಜೀವವಿಲ್ಲದ ಯಂತ್ರಮಾನವರಾಗುವ ಅಥವಾ ಅನೈತಿಕತೆಯೇ ಸಮಾಜದ ಮುಖ್ಯ ಗುಣಲಕ್ಷಣಗಳಾಗುವ ಸಾಧ್ಯತೆ ಇದೆ……….

ಗಾಳಿ, ನೀರು, ಆಹಾರ, ‌ಆಡಳಿತ ವ್ಯವಸ್ಥೆಯ ಜೊತೆಗೆ ಮನಸ್ಸು ಮಲಿನವಾದರೆ ಇಡೀ ಬದುಕಿನ ಗುಣಮಟ್ಟವೇ ಕುಸಿಯುತ್ತದೆ. ಈಗಾಗಲೇ ಅತೃಪ್ತಿ, ಅಸಮಾಧಾನ, ಅಸಹನೆಗಳೇ ಹೆಚ್ಚಾಗಿ ಕಾಡುತ್ತಿರುವ ಯುವ ಸಮೂಹ ಮುಂದೆ ಇನ್ನಷ್ಟು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಬಹುದು………

ಆದ್ದರಿಂದ ವ್ಯಕ್ತಿಯ ನೈತಿಕತೆಯ ಪಾಠ ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಶಾಲೆಗಳಲ್ಲಿ – ಉದ್ಯೋಗಗಳಲ್ಲಿ – ವ್ಯವಹಾರಗಳಲ್ಲಿ – ಸಮಾಜದಲ್ಲಿ ನಿಧಾನವಾಗಿ ಪುನರ್ ಸ್ಥಾಪಿಸಬೇಕಾದ ಅವಶ್ಯಕತೆ ಇದೆ………

ಅದು ಹೇಗಿರಬೇಕೆಂದರೇ……

ಒಬ್ಬ ಅಧಿಕಾರಿಗೆ ಲಂಚದ ಹಣ ಇನ್ನೊಬ್ಬರ ಎಂಜಲು, ಬೆವರು ಎನಿಸಬೇಕು…….

ಶ್ರೀಮಂತರ ಚಿನ್ನ, ಒಡವೆ, ಕಾರುಗಳ ಪ್ರದರ್ಶಕ ಮನೋಭಾವ,
ಜನ ಸಾಮಾನ್ಯರಿಗೆ ಅಸಹ್ಯ ತರಿಸಬೇಕು…….

ಕೋಟ್ಯಂತರ ರೂಪಾಯಿ ಖರ್ಚಿನ ಮದುವೆಗಳು, ಪ್ರಜೆಗಳಿಗೆ ಬಹಳಷ್ಟು ಕೋಪ ಬರಿಸಬೇಕು…….

ಈ ಮದುವೆಗಳು ಟಿವಿ ಚಾನಲ್ ನೇರ ಪ್ರಸಾರ ವಾಕರಿಕೆ ಉಂಟುಮಾಡಬೇಕು………

ಪುಢಾರಿಗಳಿಗೆ ಜ್ಯೆಕಾರ ಹಾಕುವ ಜನರಿಗೆ ಅವಮಾನವಾಗಬೇಕು…….

ಕಳ್ಳ ಸ್ವಾಮೀಜಿಗಳ ಕಾಲು ಮುಗಿಯುವ ಭಕ್ತರಿಗೆ ನಾಚಿಕೆಯಾಗಬೇಕು……

ಜ್ಯೋತಿಷ್ಯವನ್ನು ಕೇಳುವವರಿಗೆ ತಮ್ಮ ಬಗ್ಗೆ ಕೀಳರಿಮೆ ಬರಬೇಕು…….

ತಮ್ಮ ಜಾತಿಯ ಸಮಾವೇಶಗಳಲ್ಲಿ ಭಾಗವಹಿಸಲು ಜನರ ಮನಸ್ಸಿಗೆ ಕಹಿಯಾಗಬೇಕು……..

ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಸಾಹಿತಿಗಳ ಮನಸ್ಸಿಗೆ ನೋವಾಗಬೇಕು……..

ಸನ್ಮಾನಿಸಿಕೊಳ್ಳುವ ಸಮಾಜ ಸೇವಕರಿಗೆ ಆತ್ಮಸಾಕ್ಷಿ ಚುಚ್ಚಬೇಕು……..

ಬಡವರ ನರಳಾಟ ರಾಜಕಾರಣಿಗಳಿಗೆ ಕಣ್ಣೀರು ಬರಿಸಬೇಕು…….

ಇಲ್ಲದವರ ಮುಂದೆ ಸೂಟು ಬೂಟುಗಳು ಅಸಹ್ಯ ಹುಟ್ಟಿಸಬೇಕು…….

ಗುಡಿಸಲುಗಳ ಮುಂದೆ ಭವ್ಯಭಂಗಲೆಗಳಲ್ಲಿರುವವರಿಗೆ ಪಶ್ಚಾತ್ತಾಪವಾಗಬೇಕು…….

ಆಗ ಸಹಜವಾಗಿಯೇ ಮಾನವೀಯ ಮೌಲ್ಯಗಳು ಮತ್ತೊಮ್ಮೆ ಈ ಸಮಾಜದಲ್ಲಿ ನೆಲೆಸಿ ನಮ್ಮ ಬದುಕಿನ ನೆಮ್ಮದಿಯ ಗುಣಮಟ್ಟ ಹೆಚ್ಚಾಗುತ್ತದೆ. ನಮ್ಮ ಜೀವಿತಾವಧಿಯಲ್ಲಿಯೇ ಆ ಬದಲಾವಣೆಗಳನ್ನು ನಿರೀಕ್ಷಿಸುವ ಕನಸಿನೊಂದಿಗೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *