ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಭೂಮಿ ವಶಕ್ಕೆ ರೈತ ಸಂಘದಿಂದ ಪ್ರತಿಭಟನೆ

ಕೋಲಾರ: ಹೈಕೋರ್ಟ್ ನ್ಯಾಯಾಲಯದ ಆದೇಶದಂತೆ ಮಾಜಿ‌ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರ ಭೂ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರು ಅರಣ್ಯಾಧಿಕಾರಿಗಳ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ರೈತಸಂಘದಿಂದ ರಾಜ್ಯ ಹೆದ್ದಾರಿ ಗಾಜಲದಿನ್ನೆ ಅರಣ್ಯ ಗೇಟ್ ಮುಂಭಾಗ ಟ್ರಾಕ್ಟರ್, ಜಾನುವಾರುಗಳ ಸಮೇತ ಬಂದ್ ಮಾಡಿ ಡಿ.೫ ರೊಳಗೆ ಒತ್ತುವರಿ ತೆರೆವು ಮಾಡಬೇಕೆಂದು ಗಡುವು ನೀಡಿ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಮತ್ತು ಉಪ ವಿಭಾಗಧಿಕಾರಿಗಳಿಗೆ ಡಾ.ಮೈತ್ರಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಸಾವಿರಾರು ಕೋಟಿ ಬೆಲೆ ಬಾಳುವ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಲು ಮುಂದಾದ ದಿನದಿಂದ ಅರಣ್ಯ ಅಧಿಕಾರಿಗಳಿಗೆ ರೈತಸಂಘ ಬೆಂಬಲವಾಗಿ ನಿಂತಿದೆ. ಈಗಲೂ ಸಹ ಅರಣ್ಯ ಒತ್ತುವರಿ ತೆರವುಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಮೊದಲು ಒತ್ತುವರಿ ಸಮಯದಲ್ಲಿ ಇದ್ದಂತಹ ಕಾಳಜಿ ಅರಣ್ಯ ಅಧಿಕಾರಿಗಳಿಗೆ ಬಲಾಢ್ಯ, ಶ್ರೀಮಂತರು, ರಾಜಕೀಯ ದುರೀಣರ ನೂರಾರು ಎಕರೆ ಒತ್ತುವರಿ ತೆರವುಗೊಳಿಸಲು ಜಂಟಿ ಸರ್ವೇ ತಾಂತ್ರಿಕ ದೋಷ ನೆಪದಲ್ಲಿ ಮೌನವಾಗಿರುವುದು ಏಕೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

೪೦ ವರ್ಷ ರಾಜಕೀಯ ಭವಿಷ್ಯವನ್ನು ನೀಡಿರುವ ಅದಕ್ಕಾಗಿ ಬಡ ರೈತ ಕೂಲಿಕಾರ್ಮಿಕರು ನಿಮ್ಮ ಗೆಲುವಿಗಾಗಿ ರಾಜಕೀಯ ಭವಿಷ್ಯಕ್ಕಾಗಿ ಹಗಲು ರಾತ್ರಿ ದುಡಿದ ರೈತರ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವಾಗಿ ಮೌನವಾಗಿದ್ದು, ಕಣ್ಣು ಕಾಣಿಸದಂತಿದ್ದ ರಮೇಶ್ ಕುಮಾರ್ ಸಾಹೇಬರೆ ನಿಮ್ಮ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಸರ್ಕಾರದ ಬಾಗಿಲು ತಟ್ಟುತ್ತಿರುವುದು ನಿಮಗೆ ನ್ಯಾಯವೇ ಎಂದು ಪ್ರಶ್ನೆ ಮಾಡುವ ಜೊತೆಗೆ ನಿಮಗೆ ಆತ್ಮಗೌರವ ಸ್ವಾಭಿಮಾನವಿದ್ದರೆ ಸ್ವಯಂಪ್ರೇರಿತವಾಗಿ ೬೧ ಎಕರೆ ಒತ್ತುವರಿ ಬಿಟ್ಟು ಸಮಾಜಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.

ಬಡವರ ಒಂದೆರೆಡು ಎಕರೆ ಒತ್ತುವರಿ ತೆರವುಗೊಳಿಸುವಾಗ ತಾಂತ್ರಿಕ ದೋಷ ಕಾಣಲಿಲ್ಲವೇ. ಬೆಳೆದ ಬೆಳೆಗಳಾದ ಕ್ಯಾಪ್ಸಿಕಂ, ಮಾವು, ಟೊಮೇಟೊ, ಕೋಳಿ ಶೆಡ್‌ಗಳನ್ನು ಮಾನವೀಯತೆಯಿಲ್ಲದೆ ನಾಶ ಮಾಡುವಾಗ, ಕೈಕಾಲು ಹಿಡಿದು ಬೇಡಿಕೊಂಡರೂ ಯಾವುದೇ ಒತ್ತಡಕ್ಕೆ ಮಣಿಯದ ತಾವುಗಳು ಈಗ ಬಲಾಢ್ಯರ ಅಗರ ಹಾಗೂ ರಮೇಶ್‌ಕುಮಾರ್ ಅವರ ಸಾವಿರಾರು ಎಕರೆ ತೆರವುಗೊಳಿಸಲು ಹಿಂದೇ ಏಕೆ ಎಂದು ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಮೊದಲು ಅರಣ್ಯ ಅಧಿಕಾರಿಗಳು ಸಾವಿರಾರು ಎಕರೆ ಒತ್ತುವರಿ ತೆರವುಗೊಳಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುವಾಗ ಆರೋಗ್ಯ ಸಚಿವರಾಗಿದ್ದ ತಾವುಗಳು ವಿಧಾನಸಭೆಯಲ್ಲಿ ಅಂಗೀಕಾರ ಮುದ್ರೆ ಒತ್ತುವಾಗ ರಾಜಕೀಯ ಭವಿಷ್ಯ ನೀಡಿದ್ದ ಕ್ಷೇತ್ರದ ಜನರ ನೋವಿಗೆ ಸ್ಪಂದಿಸದಿದ್ದರೆ ಸಾವಿರಾರು ರೈತರು ಬೀದಿಗೆ ಬೀಳುತ್ತಿರಲಿಲ್ಲ. ಅಂದಿನ ಅಧಿಕಾರಿಗಳು ನಿಮ್ಮ ನೂರಾರು ಎಕರೆ ಒತ್ತುವರಿ ನ್ಯಾಯಾಲಯದಲ್ಲಿ ಇರುವುದರಿಂದ ನಿಮಗೆ ತೊಂದರೆ ಇಲ್ಲವೆಂಬ ಒಂದೇ ಒಂದು ಮಾತಿಗೆ ಬಡವರ ಬದುಕನ್ನು ಬಲಿ ನೀಡಲಿಲ್ಲವೇ. ಬನ್ನಿ ಸಾರ್ವಜನಿಕವಾಗಿ ಈ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಒಂದು ವಾರದೊಳಗೆ ಕೆ.ಆರ್.ರಮೇಶ್ ಕುಮಾರ್ ಹಾಗೂ ಮುಳಬಾಗಲಿನ ಅಗರ, ಕೋಲಾರ-ಬೈಯಪನಹಳ್ಳಿ ಅರಣ್ಯ ವ್ಯಾಪ್ತಿಯ ಸಾವಿರಾರು ಎಕರೆ ಒತ್ತುವರಿ ತೆರವುಗೊಳಿಸದೇ ಇದ್ದರೆ ರೈತ ಸಂಘದಿಂದ ಜೆಸಿಬಿಗಳಿಗೆ ಪರ್ಯಾಯವಾಗಿ ಟ್ರಾಕ್ಟರ್ ಗಳ ಘರ್ಜನೆಯನ್ನು ಮೊದಲ ಒತ್ತುವರಿ ಜಾಗದಿಂದ ಚಳುವಳಿ ಆರಂಭ ಮಾಡುವ ಮುಖಾಂತರ ರೈತರು ಎದ್ದು ನಿಂತರೆ ಕಾನೂನು ಧೂಳಪಟವಾಗುತ್ತದೆ ಎಂಬ ಸಂದೇಶವನ್ನು ನೀಡುವ ಮುಖಾಂತರ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ, ಉಪ ವಿಭಾಗಧಿಕಾರಿ ಡಾ.ಮೈತ್ರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಸರ್ವೇ ತಾಂತ್ರಿಕ ದೋಷದಿಂದ ಒತ್ತುವರಿ ವಿಳಂಭವಾಗುತ್ತಿದೆ. ಯಾವುದೇ ಒತ್ತಡಕ್ಕೆ ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಕಾನೂನಿನಲ್ಲಿ ರಮೇಶ್ ಕುಮಾರ್ ಅವರಿಗೆ ಹಾಗೂ ಬಡವರಿಗೆ ಒಂದೇ ಕಾನೂನು ಜಿಲ್ಲಾದ್ಯಂತ ಒಂದು ಇಂಚು ಸಹ ಅರಣ್ಯ ಭೂಮಿ ಒತ್ತುವರಿ ಬಿಡುವುದಿಲ್ಲ ನಮ್ಮ ವಶಕ್ಕೆ ಪಡೆಯುತ್ತೇವೆಂದು ಭರವಸೆ ನೀಡಿದರು.

ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮರಗಲ್ ಶ್ರೀನಿವಾಸ್, ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಆಂಜಿನಪ್ಪ, ಚಂದ್ರಪ್ಪ, ರಾಜೇಶ್, ಫಾರೂಖ್ ಪಾಷ, ಹೆಬ್ಬಣಿ ಆನಂದರೆಡ್ಡಿ, ರಾಮಕೃಷ್ಣಪ್ಪ, ಗಣೇಶ್, ಮುನಿವೆಂಕಟಪ್ಪ, ಶೈಲಜ, ರತ್ನಮ್ಮ, ಭಾಗ್ಯಮ್ಮ, ಸುಪ್ರೀಂಚಲ, ಗಂಗಾಧರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *