ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಅತ್ಯಗತ್ಯ- ರಾಘವೇಂದ್ರ

ದೊಡ್ಡಬಳ್ಳಾಪುರ: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಧಾನ್ ಫೌಂಡೇಷನ್ ಸಂಸ್ಥೆಯು ದೇಶದ 14 ರಾಜ್ಯಗಳ 15 ಲಕ್ಷ ಮಹಿಳೆಯರ ಜೊತೆ ಕೆಲಸ ಮಾಡುತ್ತಿದೆ ಎಂದು ಧಾನ್ ಫೌಂಡೇಷನ್ ಸಂಸ್ಥೆ ರಾಮನಗರ ವಲಯ ಸಂಯೋಜಕ ರಾಘವೇಂದ್ರ ಹೇಳಿದರು.

ಅವರು ನಗರದ ಡಾ.ರಾಜ್ಕುಮಾರ್ ಕಲಾ ಮಂದಿರದಲ್ಲಿ ಸೋಮವಾರ ನಡೆದ ಧಾನ್ ಫೌಂಡೇಷನ್ ರಾಮಗರ ವಲಯದ ಕಳಂಜಿಯಂ ಮಹಿಳಾ ಒಕ್ಕೂಟಗಳ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಆರ್ಥಿಕ ಸಾಕ್ಷರತೆ ಇಲ್ಲದೆ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿದರು ಸಹ ಪ್ರಗತಿಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಲೆಕ್ಕಪತ್ರಗಳ ನಿರ್ವಹಣೆ ಸೇರಿದಂತೆ ಹಣ ವಿನೊಯೋಗದ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಿಂದ ಮಹಿಳೆಯರು ನಷ್ಟಕ್ಕೆ ಒಳಗಾಗುವುದು ತಪ್ಪಲಿದೆ. ಹಾಗೆಯೇ ಸಂಸ್ಥೆಯು ಮಹಿಳಾ ಒಕ್ಕೂಟದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ರೈತರ ಅನುಕೂಲಕ್ಕಾಗಿ ಕೆರೆ ಅಭಿವೃದ್ಧಿ ಸೇರಿದಂತೆ ಜನಪರವಾದ ಕೆಲಸಗಳನ್ನು ಮಾಡುತ್ತಿದೆ ಎಂದರು.

ನಗರದ ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ಸಂಜೀವ್ ಕುಮಾರ್ ಮಾತನಾಡಿ, ಬ್ಯಾಂಕ್ ವತಿಯಿಂದ ಮಹಿಳಾ ಒಕ್ಕೂಟಗಳ ಮೂಲಕ ಅವರ ಬೇಡಿಕೆಗೆ ತಕ್ಕಷ್ಟು ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಇದನ್ನು ಸದುಪಯೋಗ ಪಡಿಸಿಕೊಳ್ಳುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಬ್ಯಾಂಕ್ಗಳು ಸಾಲ ನೀಡುವುದು ಬ್ಯಾಂಕಿನ ಅಭಿವೃದ್ಧಿಗಾಗಿ ಮಾತ್ರವೇ ಅಲ್ಲ, ದೇಶದ ಹಾಗೂ ಪ್ರಜೆಗಳು ಆರ್ಥಿಕವಾಗಿ ಪ್ರಗತಿಹೊಂದುವ ಉದ್ದೇಶ ಹೊಂದಲಾಗಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡುವ ಮೂಲಕ ಇತರರು ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು.

ಸಭೆಯಲ್ಲಿ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು ಸರ್ಕಾರದ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಹನುಮಕ್ಕ, ಸರಳಮ್ಮ ಹಾಗೂ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

error: Content is protected !!