ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಒಡವೆ ಮತ್ತು ಹಣವನ್ನು ಕಳುವು ಮಾಡುತ್ತಿದ್ದ ಮೂವರು ಕಳ್ಳಿಯರ ಬಂಧನ

ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಹಿಳೆಯ ಒಡವೆ ಮತ್ತು ಹಣವನ್ನು ಕಳುವು ಮಾಡುತ್ತಿದ್ದ ಮೂವರು ಕಳ್ಳಿಯರನ್ನು ಪತ್ತೆ ಮಾಡಿ ಬಂಧಿಸಿ ಒಡವೆಗಳನ್ನು ಮತ್ತು ಹಣವನ್ನು ಗೌರಿಬಿದನೂರು ನಗರ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನ.16ರಂದು ಶಾಂತಕುಮಾರಿ ಬೆಂಗಳೂರಿಗೆ ಹೋಗಲು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ್ ಅನ್ನು ಬುರ್ಕಾ ಧರಿಸಿದ್ದ ಮಹಿಳೆಯರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ದಾಖಲಿಸಿದ್ದರು.

ಇನ್ನು ಡಿ.6 ರಂದು ರತ್ನಮ್ಮ ಬೆಂಗಳೂರಿಗೆ ಹೋಗಲು ಬಸ್ ಹತ್ತುವ ವೇಳೆ ಬ್ಯಾಗ್ ನಲ್ಲಿದ್ದ ಒಂದು ಲಕ್ಷ ರೂ. ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿದ್ದ ನಗರಠಾಣೆಯ ಪೊಲೀಸರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದ ಸಿ.ಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಳ್ಳಿಯರ ಗುರುತು ಪತ್ತೆ ಮಾಡಿ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ರೇಖಾ ಬಾಯಿ, ರೋಜಾ, ಕರೀನಾ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ತುಮಕೂರು, ಹೊಳೆನರಸೀಪುರ, ಹಲಸೂರು, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಿಪಿಐ ಸತ್ಯನಾರಾಯಣ್, ಪಿ.ಎಸ್.ಐ ಚಂದ್ರಕಲಾ, ಸಿಬ್ಬಂದಿ ಶ್ರೀರಾಮಯ್ಯ, ಪುಷ್ಪ, ಶಿವಶೇಖರ, ಮಹಂತೇಶ್, ಗ್ರಾಮಾಂತರ ಠಾಣೆಯ ಸಿಬ್ಬಂದಿ ರಿಜ್ವಾನ್, ಶ್ರೀನಿವಾಸರೆಡ್ಡಿ ಮತ್ತು ಅಶ್ವತ್ಥಪ್ಪ ಕಾರ್ಯಕ್ಷಮತೆಗೆ ಜಿಲ್ಲಾವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *