ಊಟದ ಸಮಯದಲ್ಲಿ ಶಾಲಾ ಮಕ್ಕಳು ಹೊರಗೆ ಬಂದಿದ್ದು, ಈ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ಮಕ್ಕಳನ್ನು ಅಪಹರಿಸಲು ಯತ್ನಿಸಿರುವ ಘಟನೆ ತಾಲೂಕಿನ ಚಿಕ್ಕತುಮಕೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
4ನೇ ತರಗತಿಯ ಗೌತಮ್ ಹಾಗೂ 1ನೇ ತರಗತಿಯ ಗುರುದತ್ ಎಂಬ ವಿದ್ಯಾರ್ಥಿಗಳನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಖದೀಮರು. ಗೌತಮ್ ಹಾಗೂ ಗುರುದತ್ ಇಬ್ಬರೂ ಸಹೋದರರು. ಅಪರಿಸುವ ವೇಳೆ ಮಕ್ಕಳು ವಿರೋಧಿಸಿದಾಗ ಅವರನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ದುಷ್ಕರ್ಮಿಗಳು. ಶಾಲಾ ಮಕ್ಕಳನ್ನ ಅಪಹರಿಸಿದ ಪ್ರಕರಣ ಇಡೀ ಗ್ರಾಮವೇ ಬೆಚ್ಚು ಬೀಳುವಂತೆ ಮಾಡಿದೆ.
ಘಟನೆ ವಿವರ
ಇಂದು ಚಿಕ್ಕತುಮಕೂರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹೊಸ ಸಮವಸ್ತ್ರವನ್ನ ವಿತರಣೆ ಮಾಡಲಾಗಿತ್ತು, ಶಾಲೆಯ ವಿದ್ಯಾರ್ಥಿಗಳಾಗಿದ್ದ ಗೌತಮ್ ಮತ್ತು ಗುರುದತ್ ತಮ್ಮ ಸಮವಸ್ತ್ರವನ್ನ ಮನೆಯಲ್ಲಿ ಇಟ್ಟು ಬರಲು ಮನೆಯತ್ತ ನಡೆದಿದ್ದಾರೆ, ಇದನ್ನೇ ಬಂಡವಾಳ ಮಾಡಿಕೊಂಡು ಅಪಹರಣಕ್ಕೆ ಹೊಂಚು ಹಾಕಿ ಕುಳಿತಿದ್ದ ಕಿಡಿಗೇಡಿಗಳು ಸಹೋದರರನ್ನ ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಲು ಯತ್ನಸಿದ್ದಾರೆ, ಆದರೆ ಗುರುದತ್ ಬಲವಾಗಿ ವಿರೋಧಿಸಿದ್ದಲ್ಲದೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ, ಅದಲ್ಲದೇ ಗುರುದತ್ ಸಹಪಾಠಿಗಳು ಸಹ ಜೋರಾಗಿ ಕೂಗಿಕೊಂಡಾಗ ಇದರಿಂದ ಬೆದರಿದ ಅಪಹರಣಕಾರರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ ಎನ್ನಲಾಗಿದೆ.
ಅಪಹರಣಕ್ಕೆ ಕಾರಣ
ಅಂದಹಾಗೇ, ಗುರುದತ್ ಮತ್ತು ಗೌತಮ್ ಸಹೋದರರು ಸಿದ್ದರಾಜು ಹಾಗೂ ಶಾಂತಮ್ಮ ದಂಪತಿ ಮಕ್ಕಳು, ಈ ಸಿದ್ದರಾಜು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದಾರೆ.
ಈ ಕುರಿತು ಅಪಹರಣಕ್ಕೆ ಒಳಗಾಗಿದ್ದ ಮಕ್ಕಳ ತಂದೆ ಸಿದ್ದರಾಜು ಮಾತನಾಡಿ, ಶಾಂತಮ್ಮ ಸಹೋದರಿ ಅನುಸೂಯ ಅವರ ಮಗನನ್ನು ನಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸುತ್ತಿದ್ದೇವೆ, ಅನುಸೂಯ ಅವರು ಗಂಡನನ್ನು ಬಿಟ್ಟಿದ್ದು, ಮುನಿರಾಜು ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಆರೋಪಿಸಿದ್ದಾರೆ.
ಈ ಮುನಿರಾಜುಗೆ ಅನುಸೂಯಳ ಮಗ ನಮ್ಮ ಮನೆಯಲ್ಲಿರುವುದು ಇಷ್ಟ ಇರಲಿಲ್ಲ, ಇದೇ ಕಾರಣಕ್ಕೆ ಇಂದು ಮುನಿರಾಜು ಅನುಸೂಯ ಅವರ ಮಗನನ್ನು ಅಪಹರಣ ಮಾಡಲು ಬಂದಿದ್ದ. ಆದರೆ ಆ ಬಾಲಕ ಸಿಗದ ಹಿನ್ನೆಲೆ ನಮ್ಮ ಮಕ್ಕಳನ್ನಾದರೂ ಅಪಹರಿಸಿ ಬೆದರಿಕೆವೊಡ್ಡಿ ಅನಸೂಯ ಮಗನನ್ನ ಕರೆದುಕೊಂಡು ಹೋಗುವ ಪ್ಲ್ಯಾನ್ ನನ್ನು ಮುನಿರಾಜು ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಸದ್ಯ ಮಕ್ಕಳು ಘಟನೆಯಿಂದ ತೀವ್ರ ಭಯಭೀತರಾಗಿದ್ದಾರೆ. ತನ್ನ ಮಕ್ಕಳನ್ನು ತಬ್ಬಿ ಕಣ್ಣೀರಿಟ್ಟ ತಾಯಿ ಶಾಂತಮ್ಮ.
ಘಟನೆಗೆ ಸಂಬಂಧಿಸಿದಂತೆ ಸಿದ್ದರಾಜು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.