ಅನ್ವೇಷಣಾ ಹೆಸರಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಳೆದ ಹದಿನೈದು ದಿನಗಳಿಂದ ಶ್ರಮವಹಿಸಲಾಗಿದೆ. ವಿವಿಧ ಪ್ರಾಣಿಗಳ ಪಕ್ಷಿಗಳ ಪರಿಚಯ, ಮೆಡಿಕಲ್ ಪ್ಲಾಂಟ್ಸ್ ಗಳ ಉಪಯೋಗ, ಫನ್ ಸೈನ್ಸ್, ಮೆಥಮೆಟಿಕಲ್ ಲ್ಯಾಬ್, ಸೋಲಾರ್ ಪ್ಯಾನಲ್, ರೋಬೋಟಿಕ್, ಸ್ಮಾರ್ಟ್ ಸಿಟಿ, ಮನುಷ್ಯ ಅಂಗಾಂಗ ಪರಿಚಯ, ಭೂತದ ಮನೆ ಸೇರಿದಂತೆ ವಿವಿಧ ಪ್ರಯೋಗಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಮಕ್ಕಳ ಪೊಷಕರು, ಸಾರ್ವಜನಿಕರು ಭಾಗಿಯಾಗಿ ಮಕ್ಕಳಿಂದ ತಯಾರಿಸಲ್ಪಟ್ಟ ವಿಜ್ಞಾನ ಮತ್ತು ಗಣಿತ ಕಲಾಕೃತಿಗಳನ್ನು ಕಣ್ತುಂಬಿಕೊಂಡರು ಎಂದು ಗುರುಕುಲ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಹೇಳಿದರು.
ನಗರದ ಗುರುಕುಲ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯಲ್ಲಿ ಶನಿವಾರ ನಡೆದ ವಿಜ್ಞಾನ, ಗಣಿತ ಮೇಳ (ಅನ್ವೇಷಣಾ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು, ವಿಜ್ಞಾನ ಮತ್ತು ಗಣಿತದ ಬಗ್ಗೆ ಇನ್ನಷ್ಟು ಅರಿವು ಮೂಡಿಸಲು, ಪ್ರಾಯೋಗಿಕ ಜ್ಞಾನ ವೃದ್ಧಿಸಲು ಅನ್ವೇಷಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತಮ್ಮ ಸುತ್ತಾಮುತ್ತಾ ಸಿಗುವ ವಸ್ತುಗಳನ್ನು ಬಳಸಿಕೊಂಡು ಸ್ವತಃ ಮಕ್ಕಳೆ ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಸಾವಯವ ಕೃಷಿ ಪ್ರಾಯೋಗಿಕತೆ, ರಾಕೆಟ್ ಉಡಾವಣೆ, ಮಳೆ ನೀರು ಕೊಯ್ಲು, ಹೃದಯ, ರಕ್ತ ಪರಿಚಲನೆ, ಬಿಪಿ, ರಕ್ತ ಪರೀಕ್ಷೆ ಸೇರಿದಂತೆ ಎಲ್ಲವನ್ನು ಮಕ್ಕಳೇ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ಹಾಗೂ ಅನುಭವದ ಜೊತೆಗೆ ವಿಜ್ಞಾನ ಕಲಿಯುವ ನಿಟ್ಟಿನಲ್ಲಿ ವಿಜ್ಞಾನ ಮೇಳವು ಯಶಸ್ವಿಯಾಗಿದೆ ಎಂದು ಶಾಲೆಯ ಆಡಳಿತ ಕಾರ್ಯದರ್ಶಿ ಲೋಕೇಶ್ ಕುಮಾರ್ ಹೇಳಿದರು.
ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪ್ರಯೋಗಗಳಿಗೆ ಅನ್ವೇಷಣಾ ಕಾರ್ಯಕ್ರಮ ವೇದಿಕೆಯಾಯಿತು ಎಂದರು.
ಈ ವೇಳೆ ಶಾಲೆಯ ಪ್ರಾಂಶುಪಾಲ, ಉಪಪ್ರಾಂಶುಪಾಲ, ವಿಜ್ಞಾನ ಶಿಕ್ಷಕಿ, ಸಹಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.