ಮಂಜುನಾಥ ಅದ್ದೆ ಅವರಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ’

ದೊಡ್ಡಬಳ್ಳಾಪುರ: ಕರ್ನಾಟಕ ಸಂಭ್ರಮ-50ರ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ನೀಡುತ್ತಿರುವ ‘ಸುವರ್ಣ ಮಹೋತ್ಸವ ಪ್ರಶಸ್ತಿ-2024’ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ತಾಲ್ಲೂಕಿಗೆ ಸಮೀಪದ ಯಲಹಂಕ ತಾಲ್ಲೂಕಿನ ಅದ್ದೆ ಗ್ರಾಮದ ಡಾ.ಮಂಜುನಾಥ ಅದ್ದೆ ಅವರಿಗೆ ದೊರೆತಿದೆ.

ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಂಜುನಾಥ ಅದ್ದೆ ಅವರು ಪತ್ರಕರ್ತರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಇವರು ಬರೆದಿರುವ ‘ಒಡಲ ತುಡಿತಕ್ಕೆ ಕೇಡು’ ಕೃತಿಗೆ 2008ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಗಾಳಿ ಗಮಲು’ ಕೃತಿಗೆ 2010ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, 2014ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿವೆ. ಒಡಲ ತುಡಿತಕ್ಕೆ ಕೇಡು ಕೃತಿಯಲ್ಲಿನ ಹೆಣ್ಣು ಭ್ರೂಣ ಹತ್ಯೆ ಕುರಿತ ಸಂಶೋಧನಾ ಲೇಖನವು ದ್ವಿತೀಯ ಪಿಯುಸಿ ಸಮಾಜಶಾಸ್ತ್ರ ಪಠ್ಯ ಪುಸ್ತಕದಲ್ಲಿ ಅಳವಡಿಕೆಯಾಗಿದೆ. ಕನ್ನಡಿ ಕಣ್ಣು (ಕವನ ಸಂಕಲ), ಸಾಮೂದಾಯಿಕ ಭೂಮಿ ಮತ್ತು ಜನಜೀವನ ಸಂಶೋಧನ ಪ್ರಬಂಧ, ಈತರ್ಕೆ-ಈತರ ವ್ಯಕ್ತಿಗಳ ಚಿತ್ರಣ ಕೃತಿಗಳನ್ನು ಬರೆದಿದ್ದಾರೆ.

‘ಕರ್ನಾಟಕದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಡಾ.ರಾಜ್ ಕುಮಾರ್ ಅವರ ಪಾತ್ರ’ ಕುರಿತ ಮಹಾಪ್ರಬಂಧಕ್ಕೆ ಮೈಸೂರಿನ ಸಂಗಿತ ಮತ್ತು ಅಭಿನಯ ಕಲೆಗಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.ರೈತ,ದಲಿತ,ಪ್ರಗತಿಪರ ಚಳುವಳಿ ಗಳು ಸೇರಿದಂತೆ ಹಲವಾರು ಜನಪರ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!