ಕೈ ತುಂಬಾ ಸಂಬಳ ಬರುವ ಸರ್ಕಾರಿ ಕೆಲಸವನ್ನು ತೊರೆದು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಜನಸಾಮಾನ್ಯರ ಪರವಾಗಿ ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಿದ್ದವರು ಕವಿ ಗದ್ದರ್ ಎಂದು ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಜಾಗೃತ ಪರಿಷತ್ ಮತ್ತು ಪ್ರಗತಿ ಪರ ಸಂಘಟನೆಗಳಿಂದ ಕನ್ನಡ ಜಾಗೃತ ಪರಿಷತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಲಿತ ಹೋರಾಟಗಾರ ಗದ್ದರ್ ನುಡಿನಮನ ಸಭೆಯಲ್ಲಿ ಅವರು ಮಾತನಾಡಿದರು. ಅನ್ಯಾಯ, ಮೋಸ, ವಂಚನೆ, ದೌರ್ಜನ್ಯ, ದಬ್ಬಾಳಿಕೆಯನ್ನು ಕೆಚ್ಚೆದೆಯದಿಂದ ವಿರೋಧಿಸುವ, ಹಿಮ್ಮೆಟ್ಟಿಸುವ ಶಕ್ತಿ ಗದ್ದರ್ ಅವರಲ್ಲಿತ್ತು. ಸದಾಕಾಲ ಶೋಷಣೆಗೆ ಒಳಗಾದ, ದಮನಕ್ಕೆ ಒಳಗಾದ, ದೀನ ದಲಿತ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಹಾನ್ ಕ್ರಾಂತಿಕಾರಿ ಗಾಯಕ ಗದ್ದರ್. ಅಂತಹ ಶಕ್ತಿ, ಮನಸ್ಥಿತಿ ಇರುವ ವ್ಯಕ್ತಿಗಳನ್ನು ಕಾಣುವುದು ಈಗಿನ ಕಾಲಘಟ್ಟದಲ್ಲಿ ಅಪರೂಪವಾಗಿದೆ ಎಂದರು.
ಅನ್ಯಾಯ, ಮೋಸ, ಗೊಡ್ಡು ಸಂಪ್ರದಾಯಗಳಿಂದ ಕೂಡಿರುವ ಸಮಾಜ, ಜನರಿಗೆ ಉಪಯೋಗಕ್ಕೆ ಬಾರದ ವ್ಯವಸ್ಥೆಯನ್ನು ಬದಲಾಯಿಸಲು ಹೋರಾಟ, ಚಳವಳಿ ಅತ್ಯಗತ್ಯ, ಆದರೆ ಪ್ರಸ್ತುತ ದಿನಗಳಲ್ಲಿ ಜನರು ಚಳವಳಿ, ಹೋರಾಟಗಳಿಂದ ಹಿಂದೆ ಸರಿದಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.
ಸಿಪಿಐಎಂ ಮುಖಂಡ ಚಂದ್ರತೇಜಸ್ವಿ ಮಾತನಾಡಿ ಜೀವನುದುದ್ದಕ್ಕೂ ಪ್ರತಿಕ್ಷಣವೂ ಹೋರಾಟದ ಮನೋಭಾವ ರೂಪಿಸಿಕೊಂಡಿದ್ದರು. ನಕ್ಸಲ್ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಹಲವು ಗುಂಡೇಟು ತಿಂದಿದ್ದಾರೆ. ಒಂದು ಗುಂಡು ಸ್ಪೈನಲ್ ಕಾರ್ಡ್ ನಲ್ಲಿ ಸೇರಿಕೊಂಡಿದ್ದರಿಂದ ಜೀವನ ಪೂರ್ತಿ ಗುಂಡಿನ ಜೊತೆ ಸಾಗಿದ್ದರು. ಅವಿಭಜಿತ ಆಂಧ್ರಪ್ರದೇಶದ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದರು ಎಂದು ತಿಳಿಸಿದರು.
ಕನ್ನಡ ಪಕ್ಷದ ಮುಖಂಡ ಸಂಜೀವ್ ನಾಯಕ್ ಮಾತನಾಡಿ ಹಲವು ವರ್ಷಗಳ ಹಿಂದೆ ತಾಲ್ಲೂಕಿನ ಹಲವು ಪ್ರಗತಿ ಪರ ಸಂಘಟನೆಗಳು ಹೈದರಾಬಾದ್ ನಲ್ಲಿ ಗದ್ದರ್ ಅವರನ್ನು ಭೇಟಿಯಾಗಿದ್ದೇವು. ಅಂದಿನ ಜೀತ ಪದ್ದತಿ, ತುಳಿತಕ್ಕೊಳದ ಜನತೆ, ಸಣ್ಣ ಹಿಡುವಳಿದಾರರ ಪರವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸಿದ್ದರು. ಗದ್ದರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಪ್ರಶ್ನಿಸುವ ಮನೋಭಾವ ತನ್ನಿಂತಾನೆ ನಮ್ಮಲ್ಲಿ ಬೆಳೆಯುತ್ತದೆ ಎಂದರು.
ಕನ್ನಡ ಜಾಗೃತ ಪರಿಷತ್ ಮುಖಂಡರು, ಪ್ರಗತಿ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.