ತಾಲೂಕಿನ ಕಸಬಾ ಹೋಬಳಿಯ ಪಾಲನಜೋಗಿಹಳ್ಳಿ ಗ್ರಾಮದ ಸರ್ವೆ ನಂ.21ರಲ್ಲಿ 18ಎಕರೆ 22ಗುಂಟೆ ಭೂಮಿ ಗೋಮಾಳ ಎಂದು ಸರ್ಕಾರಿ ದಾಖಲಾತಿಗಳಲ್ಲಿ ಇದೆ. 18ಎಕರೆ 22ಗುಂಟೆ ಜಮೀನಿನಲ್ಲಿ ರಂಗಮ್ಮ ಕೋಂ ವೆಂಕಟೇಶಯ್ಯ ಎಂಬುವವರಿಗೆ ತಹಶೀಲ್ದಾರ್ ಆದೇಶದಂತೆ 2ಎಕರೆಯನ್ನ ದರಖಾಸ್ತು ಮೂಲಕ ಮಂಜೂರು ಮಾಡಲಾಗಿದೆ. ಉಳಿಕೆ 16ಎಕರೆ 22ಗುಂಟೆ ಸರ್ಕಾರಿ ಗೋಮಾಳವು ಭೂಗಳ್ಳರ ಪಾಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಮುನಿರಾಜು ಆರೋಪಿಸಿದರು.
ಈ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡುವ ಮೂಲಕ ಭೂಗಳ್ಳರಿಂದ ಸರ್ಕಾರಿ ಗೋಮಾಳವನ್ನ ರಕ್ಷಣೆ ಮಾಡುವಂತೆ ಆಗ್ರಹಿಸಿ ಮಾತನಾಡಿದ ಅವರು, ಕೂಡಲೇ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಸುಳ್ಳು ದಾಖಲೆ ಸೃಷ್ಠಿಸಿ ಗೋಮಾಳ ಕಬಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಮೂರು ಬಾರಿ ಈ ಕುರಿತು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಈ ಹಿಂದೆ ಇದ್ದ ತಹಶೀಲ್ದರ್ ಅವರ ಗಮನಕ್ಕೆ ತರಲಾಗಿತ್ತು, ನಮ್ಮ ಮನವಿ ಮೇರೆಗೆ ತಹಶೀಲ್ದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ದಾಖಲಾತಿಗಳನ್ನ ಕೂಲಕಂಷವಾಗಿ ಪರೀಕ್ಷೀಸಿ ಇದು ಸರ್ಕಾರಿ ಗೋಮಾಳ ಎಂದು ಮಾಹಿತಿ ನೀಡಿದ್ದರು. ಎಂ.ಆರ್ ವಜಾಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ಇದೂವರೆಗೂ ಭೂಗಳ್ಳರಿಂದ ಗೋಮಾಳವನ್ನ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ ಎಂದು ದೂರಿದರು.
ಆದ್ದರಿಂದ ನೂತನ ತಹಶೀಲ್ದಾರ್ ಅವರು ಮತ್ತೊಮ್ಮೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ದಾಖಲಾತಿಗಳನ್ನ ಪರೀಕ್ಷಿಸಿ ಕಾನೂನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ಭೂ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿ ಸ್ಥಳ ಪರಿಶೀಲನೆ ನಡೆಸಿದ ನಂತರ ವರದಿಯನ್ನ ಸಿದ್ಧಪಡಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಅವರು ತಿಳಿಸಿದರು
ಈ ವೇಳೆ ರಾಜ್ಯಾಧ್ಯಕ್ಷ ಎಂ.ವಿ.ಗುರುಪ್ರಕಾಶ್ ಸೇರಿದಂತೆ ಸಂಘಟನೆಯ ಸದಸ್ಯರು, ಮುಖಂಡರು ಸೇರದಂತೆ ಇತರರು ಉಪಸ್ಥಿತರಿದ್ದರು.