ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಂಚೆಪಾಳ್ಯ ಗ್ರಾಮದಲ್ಲಿ ನಡೆದಿದೆ.

24 ವರ್ಷದ ಸ್ಪಂದನಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮಹಿಳೆಯ ಶವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

2004ರಲ್ಲಿ ಸ್ಪಂದನಾ ಕಾಲೇಜಿಗೆ ಹೋಗ್ತಿರೋ ಸಮಯದಲ್ಲೇ ಅಭಿಷೇಕ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಗಂಡ ಅಭಿಷೇಕ್ ಕನಕಪುರದ ಕರಿಕಲ್ಲ ದೊಡ್ಡಿಯ ನಿವಾಸಿ ಆಗಿದ್ದು, ಕೆಲ ತಿಂಗಳಿಂದ ಅಂಚೆಪಾಳ್ಯ ಗ್ರಾಮದಲ್ಲಿಯೇ ವಾಸವಾಗಿದ್ದರು.

ಭೀಮನ ಅಮಾವಾಸ್ಯೆ ಪ್ರಯುಕ್ತ ಗಂಡನಿಗೆ ಪಾದಪೂಜೆ ಮಾಡಿದ ಸ್ಪಂದನಾ, ಅದಾದ ಕೆಲ ಹೊತ್ತಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಮದುವೆಯ ನಂತರ ವರದಕ್ಷಿಣೆಗಾಗಿ ಗಂಡ ಅಭಿಷೇಕ್ ಹಾಗೂ ಅವನ ತಾಯಿ ಲಕ್ಷ್ಮಮ್ಮ ಇವರಿಂದ ಸ್ಪಂದನಾ ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾಳೆ ಎಂದು ಸ್ಪಂದನಾ ಪಾಲಕರು ಆರೋಪ ಮಾಡಿದ್ದಾರೆ.

ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ವರದಕ್ಷಿಣೆ ತರುವಂತೆ ಗಂಡ ಮತ್ತು ಅತ್ತೆ ಟಾರ್ಚರ್ ಮಾಡಿದ್ದರು ಎಂದು ಸ್ಪಂದನಾ ತನ್ನ ತಂದೆಗೆ ಹೇಳಿದ್ದಳು. ಬಳಿಕ 5 ಲಕ್ಷ ಹಣವನ್ನ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದೇವೆ. ಇದೀಗ ನಿನ್ನೆ ನನಗೆ ಕರೆ ಮಾಡಿ ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಅಂತಾ ಮಗಳು ಕಣ್ಣೀರಿಟ್ಟಿದ್ದಳು ಎಂದು ಸ್ಪಂದನಾ ತಂದೆ ಚಂದ್ರ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!