ರಾಜ್ಯದಲ್ಲಿ ಮದುವೆಗೆ ಹೆಣ್ಣು ಸಿಗದೆ ಯುವಕರು ಪಾದಯಾತ್ರೆ, ಹರಕೆಗಳ ಮೊರೆ ಹೋಗುತ್ತಿರುವುದು ಹೊಸತೇನಲ್ಲ. ಆದರೆ, ಇದೇ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ವೊಂದು ಯುವಕನಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮದುವೆ ಮಾಡಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.
ತುಮ್ಮಿನಕಟ್ಟಿ ಗ್ರಾಮದ ರವೀಂದ್ರ ಜವಳಿ ಎಂಬ ಯುವಕ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇದನ್ನು ತಿಳಿದ ಬ್ರೋಕರ್, ರೇಖಾ ಎಂಬಾಕೆಯನ್ನು ಪರಿಚಯಿಸಿದ್ದಾರೆ. ರೇಖಾ ನೋಡಲು ಲಕ್ಷಣವಾಗಿದ್ದಾಳೆಂದು ನಂಬಿದ ರವೀಂದ್ರ ಮತ್ತು ಅವರ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ನೀಡಿದ್ದಾರೆ.
ಈ ಐನಾತಿ ಲೇಡಿ ಮತ್ತು ಆಕೆಯ ಗ್ಯಾಂಗ್ ಮದುವೆಗೆ ಮುನ್ನವೇ ವಧುದಕ್ಷಣೆಯ ಹೆಸರಿನಲ್ಲಿ ರವೀಂದ್ರ ಅವರಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಅಷ್ಟೇ ಅಲ್ಲದೆ, ವಯಸ್ಸಿನ ವ್ಯತ್ಯಾಸ ತಿಳಿಯಬಾರದೆಂದು ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕವನ್ನೇ ಎಡಿಟ್ ಮಾಡಿ ವಂಚಿಸಿದ್ದರು. ಇಬ್ಬರು ಮಕ್ಕಳ ತಾಯಿಯಾಗಿದ್ದ ರೇಖಾ, ತಾನು ಕನ್ಯೆ ಎಂದು ನಂಬಿಸಿ ರವೀಂದ್ರ ಅವರೊಂದಿಗೆ ವೈವಾಹವಾಗಿದ್ದಾರೆ.
ಮದುವೆಯಾಗಿ ಕೇವಲ ಐದು ದಿನಗಳು ಕಳೆದಿರಲಿಲ್ಲ, ಅಷ್ಟರಲ್ಲೇ ಈ ಯುವತಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಮನೆಗೆ ಬಂದಿದ್ದ ರೇಖಾಳಿಗೆ ಆಕೆಯ ಮಕ್ಕಳು ಫೋನ್ ಮಾಡಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಿದ್ದಾಗ ಬಂದ ಅನುಮಾನದಿಂದ ರವೀಂದ್ರ ರೇಖಾಳನ್ನು ವಿಚಾರಿಸಿದ್ದಾರೆ. ಬಳಿಕ ತನಗೆ ಈಗಾಗಲೇ ಎರಡು-ಮೂರು ಮದುವೆಯಾಗಿರುವುದು ಮತ್ತು ಇಬ್ಬರು ಮಕ್ಕಳಿರುವ ಸತ್ಯವನ್ನು ಆಕೆ ಒಪ್ಪಿಕೊಂಡಿದ್ದಾಳೆ.
ತನ್ನ ಕಳ್ಳಾಟ ಬಯಲಾಗುತ್ತಿದ್ದಂತೆ ರೇಖಾ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಗ್ರಾಮದಿಂದ ಸುಮಾರು 2 ಕಿಲೋಮೀಟರ್ ದೂರದವರೆಗೂ ಓಡಿ ಹೋಗಿದ್ದಾಳೆ. ಆದರೆ ಬಿಡದ ರವೀಂದ್ರ ಮತ್ತು ಗ್ರಾಮಸ್ಥರು ಆಕೆಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸದ್ಯ ಹತಾಶನಾಗಿರುವ ರವೀಂದ್ರ, ಅತ್ತ ಮದುವೆಯೂ ಇಲ್ಲದೆ, ಇತ್ತ ಹಣವೂ ಇಲ್ಲದೆ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಹಲಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…
ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ…
ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…
ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…
ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…
ದೊಡ್ಡಬಳ್ಳಾಪುರ: ಜೂ.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು…