ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕಳೆದ ರಾತ್ರಿ ಬೋನಿಗೆ ಬಿದ್ದಿದೆ, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಚಿರತೆ, ಈ ಹಿನ್ನೆಲೆ ಅರಣ್ಯ ಇಲಾಖೆ ಕಾಡಿನಲ್ಲಿ ಬೋನು ಇರಿಸಲಾಗಿತ್ತು, ಒಂದು ಚಿರತೆ ಬೋನಿಗೆ ಬಂದು ಬಿದ್ದಿದೆ.
ತೂಬಗೆರೆ ಹೋಬಳಿ ವ್ಯಾಪ್ತಿಯ ಹಿರೇಮುದ್ದೇನಹಳ್ಳಿ, ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಎರಡು ಹಸುಗಳನ್ನು ಬಲಿ ಪಡೆದಿದ್ದ ಚಿರತೆ, ಈ ಹಿನ್ನೆಲೆ ಭಾರೀ ಅನಾಹುತ ನಡೆಯುವುದಕ್ಕಿಂತ ಮೊದಲು ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.
ಹಿರೇಮುದ್ದೇನಹಳ್ಳಿ ಗ್ರಾಮದ ಸುತ್ತಮುತ್ತ ಹಗಲು ವೇಳೆಯಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಎರಡು ಮೂರು ದಿನಗಳ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡಿ ಹಸುವೊಂದನ್ನು ಬಲಿಪಡೆದಾಗಿನಿಂದ ಅರಣ್ಯದಂಚಿನ ಗ್ರಾಮಸ್ಥರು ಭಯಭೀತರಾಗಿದ್ದರು.
ಈಗ ಚಿರತೆ ಸೆರೆಯಿಂದ ಕೊಂಚ ನಿರಾಳವಾಗಿದೆ. ಆದರೂ ನಿತ್ಯ ವನ್ಯಜೀವಿ ಸಂಘರ್ಷದಿಂದ ಬೇಸರವಾಗಿದೆ. ಚಿರತೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು ಹಾಗೂ ಚಿರತೆ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡು ರೈತರಿಗೆ ಸೂಕ್ತ ಪರಿಹಾರ ತ್ವರಿತ ಗತಿಯಲ್ಲಿ ಒದಗಿಸಿಕೊಡಬೇಕು ಎಂದು ತೂಬಗೆರೆ ಗ್ರಾಮಸ್ಥ ಉದಯ ಆರಾಧ್ಯ ಆಗ್ರಹಿಸಿದ್ದಾರೆ.