ಬೈಕ್ ಹಿಂಬಾಲಿಸಿಕೊಂಡು ಬಂದು 2 ಲಕ್ಷ 19 ಸಾವಿರ ಹಣ ಎಸ್ಕೇಪ್ ಮಾಡಿರೋ ಖದೀಮರು: ಚಿನ್ನದ ಒಡವೆ ಒತ್ತೆಯಿಟ್ಟು ಹಣ ತೆಗೆದುಕೊಂಡು ಹೋಗುವಾಗ ಘಟನೆ

ಚಿನ್ನದ ಒಡವೆಗಳನ್ನು ಅಡವಿಟ್ಟು ಹಣವನ್ನು ತೆಗೆದುಕೊಂಡು ಮನೆಗೆ ಹೋಗುವಾಗ ಹಿಂಬಾಲಿಸಿಕೊಂಡು ಬಂದು ಕ್ಷಣಾರ್ಧದಲ್ಲಿ 2 ಲಕ್ಷ 19 ಸಾವಿರ ರೂ. ಹಣವನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ನಗರದ ವಿದ್ಯಾನಿಧಿ ಕಾಲೇಜು ರಸ್ತೆಯಲ್ಲಿ ನಡೆದಿದೆ.

ಘಟನೆಯ ವಿವರ:

ತಾಲ್ಲೂಕಿನ ಕಾಮನಅಗ್ರಹಾರ ಗ್ರಾಮದ ಮುದ್ದೇಗೌಡ ಎಂಬುವರು ಸಾಲದ ಹಣವನ್ನು ವಾಪಸ್ ಮಾಡಲು ಮನೆಯಲ್ಲಿದ್ದ ಚಿನ್ನದ ಸರ ಸೇರಿದಂತೆ ವಿವಿಧ ಆಭರಣಗಳನ್ನು ನಗರದ ಡಿಕ್ರಾಸ್ ರಸ್ತೆಯಲ್ಲಿರುವ ಫೆಡರಲ್ ಬ್ಯಾಂಕಿನಲ್ಲಿ ಅಡವಿಟ್ಟು ಸುಮಾರು 2 ಲಕ್ಷ 19 ಸಾವಿರ ರೂ. ಪಡೆದಿದ್ದಾರೆ. ಈ ಹಣವನ್ನು ಮೊಪೆಡ್ ಬೈಕ್ ನ ಡಿಕ್ಕಿಯಲ್ಲಿಟ್ಟುಕೊಂಡಿದ್ದಾರೆ. ಊರಿಗೆ ತೆರಳುವ ಮಾರ್ಗದ ಮಧ್ಯೆ ಸಂಬಂಧಿಕರೊಂದಿಗೆ ಮಾತನಾಡಲು
ವಿದ್ಯಾನಿಧಿ ಕಾಲೇಜಿಗೆ ತೆರಳಿದ್ದಾರೆ. ನಂತರ ಕಾಲೇಜ್‌ನಿಂದ ಹೊರಬಂದು ದ್ವಿಚಕ್ರ ವಾಹನದ ಡಿಕ್ಕಿ ತೆರೆದಿರುವುದನ್ನ ಕಂಡ ಬಳಿಕ ಡಿಕ್ಕಿ ತೆರೆದಾಗ ಹಣ ಇಲ್ಲದಿರುವುದು ತಿಳಿದಿದೆ.

ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಲೇಜಿನ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ವಶಕ್ಕೆ ಪಡೆದಿದ್ದಾರೆ. ಬ್ಯಾಂಕಿನಲ್ಲಿ ಹಣ ಪಡೆದಿದನ್ನು ನೋಡಿರುವ ಕಳ್ಳರು ಬೈಕ್ ನ್ನು ಹಿಂಬಾಲಿಸಿಕೊಂಡು ಬಂದು ಹಣವನ್ನು ದೋಚಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧಿಸಿದೆ.

Leave a Reply

Your email address will not be published. Required fields are marked *