ಹಾಡಹಗಲೇ ಬೈಕ್ ಗಳನ್ನು ಕದ್ದು ಪರಾರಿಯಾಗುತ್ತಿದ್ದ ಅಂತರ ಜಿಲ್ಲೆಯ ಬೈಕ್ ಕಳ್ಳನನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಹೌಸಿಂಗ್ ಕಾಲೋನಿಯ ನಿವಾಸಿ ಪಿ.ಕೆ.ಭಾಸ್ಕರ್(48) ಬಂಧಿತ ಆರೋಪಿ.
ಆರೋಪಿ ಪಿ.ಕೆ.ಭಾಸ್ಕರ್ ಚಾಲಕನಾಗಿದ್ದು, ಮೇ ತಿಂಗಳ 21ರಂದು ನಗರದ ಕೃಷ್ಣಮೂರ್ತಿ ಎಂಬುವರು ತಮ್ಮ ಬೈಕ್ ನ್ನು ನಗರಸಭೆ ಆವರಣದಲ್ಲಿ ನಿಲ್ಲಿಸಿ ಕಚೇರಿ ಒಳಗೆ ಹೋಗಿದ್ದರು. ಬರುವಷ್ಟರಲ್ಲಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಳಿಕ ಬೈಕ್ ಕಳ್ಳನ ಪತ್ತೆಗೆ ಎಸ್ಪಿ ಕುಶಲ್ ಚೌಕೈ ಎಎಸ್ಪಿ ಬಿ.ಜಗನ್ನಾಥ್ ರೈ, ಡಿವೈಎಸ್ಪಿ ಎಸ್.ಶಿವಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ.ಎಂ, ಪಿಎಸ್ಐ ಅಮರ್ ಎಸ್.ಎಂ., ಪಿಎಸ್ಐ ರತ್ನಾಬಾಯಿ, ಸಿಬ್ಬಂದಿ ಲೋಕೇಶ್, ಫಕೀರಪ್ಪ ಗೊಂದಿ, ಮಧುಸೂದನ್, ಲಕ್ಷ್ಮಣ, ಆಯುಬ್ ಮುಲಾ, ನರೇಂದ್ರ ಕುಮಾರ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿ ರವೀಂದ್ರ, ಮುನಿಕೃಷ್ಣ ತಂಡವು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಆರೋಪಿ ವಿರುದ್ದ ತುಮಕೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತನಿಂದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು 7,40,000 ರೂ.ನ ವಿವಿಧ ಕಂಪನಿಯ 18 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.