ನಗರದ ಪ್ರಮುಖ ವೃತ್ತವಾದ ಡಾ.ಬಿ.ಆರ್.ಅಂಬೇಡ್ಕರ್ (ಟಿ.ಬಿ.) ಸರ್ಕಲ್ ನಲ್ಲಿ ಪ್ರತಿದಿನ ಸಂಜೆ ವೇಳೆ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿಯೊಬ್ಬ ವಾಹನ ಸವಾರ ಜೀವಭಯದಲ್ಲಿ ವೃತ್ತ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಉರಿಯುವುದನ್ನ ಸ್ಥಗಿತಗೊಳಿಸಿ ಹಲವು ತಿಂಗಳುಗಳೇ ಕಳೆದಿವೆ. ಯಾವ ಉದ್ದೇಶಕ್ಕಾಗಿ ಸ್ಥಗಿತಗೊಳಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತೆ ಏತಕ್ಕಾಗಿ ಆ ಸ್ಥಳದಲ್ಲಿ ಇನ್ನೂ ಟ್ರಾಫಿಕ್ ಸಿಗ್ನಲ್ ಕಂಬಗಳನ್ನ ಇರಿಸಲಾಗಿದೆ?, ಟ್ರಾಫಿಕ್ ಕಂಟ್ರೋಲ್ ಮಾಡಲು ಯಾವೊಬ್ಬ ಸಿಬ್ಬಂದಿ ನಿಯೋಜನೆಗೊಂಡಿರುವುದಿಲ್ಲ. ಏನಾದರೂ, ಯಾರಿಗಾದರೂ ಆ ಸ್ಥಳದಲ್ಲಿ ಅನಾಹುತ ಸಂಭವಿಸಿದರೆ ಮಾತ್ರ ಎಚ್ಚೆತ್ತುಕೊಳ್ಳುವುದು. ಅದನ್ನ ಬಿಟ್ಟರೆ ಅಲ್ಲಿಯತನಕ ಬೇಜವಾಬ್ದಾರಿ ಮೆರೆಯುತ್ತಿರುವುದೇ ಇಲಾಖೆಯ ಕೆಲಸ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೃತ್ತದಲ್ಲಿ ಬೆಂಗಳೂರು-ಹಿಂದೂಪುರ, ತುಮಕೂರು-ಚಿಕ್ಕಬಳ್ಳಾಪುರ, ದೇವನಹಳ್ಳಿ ಸೇರಿದಂತೆ ಇತರೆ ಭಾಗಗಳಿಗೆ ಸಂಚರಿಸುವ ಭಾರೀ ವಾಹನಗಳು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಕಾರ್ಮಿಕರು ಪ್ರಯಾಣಿಸುವ ಬಸ್ಸುಗಳು ಹಾಗೂ ಎಲ್ಲಾ ರೀತಿಯ ವಾಹನಗಳು ಸಂಚರಿಸುತ್ತವೆ. ಈ ಹಿನ್ನೆಲೆ ಅಪಘಾತ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಸಿಗ್ನಲ್ ಗಳನ್ನ ಅಳವಡಿಸಲಾಗಿತ್ತು. ಆದರೆ ಈಗ ಅವು ಬೆಳಗುತ್ತಿಲ್ಲ.
ಟೋಲ್ ರಸ್ತೆಯ ಪ್ರಮುಖ ಜಂಕ್ಷನ್ ಗಳಲ್ಲಿ ಸಿಗ್ನಲ್ ದೀಪ ಅಳವಡಿಸುವಂತೆ ರಾಮಲಿಂಗಂ ಟೋಲ್ ಹಾಗೂ ಕೆಆರ್ ಡಿಸಿಎಲ್ ಅವರಿಗೆ ಪತ್ರ ಬರೆಯಲಾಗಿದೆ. ಒಟ್ಟು 48 ಕೋಟಿ ವೆಚ್ಚದಲ್ಲಿ 7 ಜಂಕ್ಷನ್ ಗಳ ಅಭಿವೃದ್ಧಿ, ಫ್ಯಾಕ್ಟರಿ ಗೇಟಿನಿಂದ ಪಾಲನಜೋಗಹಳ್ಳಿವರೆಗೆ ಬೀದಿ ದೀಪ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಾಹನ ದಟ್ಟಣೆ ಹಾಗೂ ಸಂಚಾರಿ ನಿಯಮ ಪಾಲನೆಗೆ ಅನುಕೂಲವಾಗುವಂತೆ ನಗರದಲ್ಲಿ ಒಂದು ಸಂಚಾರಿ ಪೊಲೀಸ್ ಠಾಣೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದ್ದಾರೆ.