ಬೆಲೆಬಾಳುವ ಮೂರು ಹಸು ಸೇರಿದಂತೆ ಒಂದು ಎಮ್ಮೆ ಕರು ದಿಢೀರ್ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಮುನಿಯಪ್ಪ ಎಂಬುವವರ ತೋಟದ ಮನೆಯಲ್ಲಿ ಸುಮಾರು 10 ಹಸುಗಳನ್ನು ಸಾಕಲಾಗಿದ್ದು, ಇಂದು ಎಂದಿನಂತೆ ಹಸುಗಳ ಮೈ ತೊಳೆದು, ಬೂಸ ನೀರು ಇಟ್ಟು ಶೆಡ್ಡಿನೊಳಗೆ ಕರೆದೊಯ್ಯುವಾಗ ದಿಢೀರನೆ ಮೂರು ಹಸು ಸೇರಿದಂತೆ ಒಂದು ಎಮ್ಮೆ ಕರು ಕುಸಿದು ಬಿದ್ದು ಸಾವನ್ನಪ್ಪಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದ್ಯ ಹಸುಗಳ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಇನ್ನು ಮೂರ್ನಾಲ್ಕು ಹಸುಗಳು ನಿತ್ರಾಣವಾಗಿದ್ದು, ಸ್ಥಳಕ್ಕೆ ಪಶು ವೈದ್ಯರು ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ನೀರಿಗೆ ವಿಷ ಬೇರಿಸಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
ಪ್ರಯೋಗಾಲಯದ ವರದಿ ಬಂದ ನಂತರ ಹಸುಗಳ ಸಾವಿನ ನಿಖರ ಕಾರಣ ತಿಳಿಯಲಿದೆ. ಸಾವನ್ನಪ್ಪಿದ ಹಸುಗಳಿಗೆ ಇನ್ಸೂರೆನ್ಸ್ ಇಲ್ಲದಿದ್ದಲ್ಲಿ ಕಾಮಧೇನು ವಿಪತ್ತು ಯೋಜನೆಯಡಿ ಪ್ರತಿ ಹಸುವಿಗೆ 15 ಸಾವಿರ ಪರಿಹಾರದ ಹಣವನ್ನು ಸರ್ಕಾರದಿಂದ ನೀಡಲಾಗುವುದು, ಹಸುವಿನ ಮಾಲೀಕನಿಗೆ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಪಶು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….