ಬೆಂ. ಗ್ರಾ ಜಿಲ್ಲೆಯಲ್ಲಿ 4238 ಪೋಡಿ ಪ್ರಕರಣ ದುರಸ್ತಿ- ಮುಂದಿನ ಎರಡು ವರ್ಷಗಳಲ್ಲಿ ಐದು ಲಕ್ಷ ಸ್ವತ್ತುಗಳ ಪೋಡಿ ಮಾಡುವ ಗುರಿ- ಕಂದಾಯ ಸಚಿವ ಕೃಷ್ಣ ಬೈರೇಗೌಡ

ಪ್ರಸ್ತುತ ರಾಜ್ಯದಲ್ಲಿ 2 ಲಕ್ಷ 6 ಸಾವಿರ ಪೋಡಿ ಪ್ರಕರಣಗಳ ದುರಸ್ತಿ ಮಾಡಲಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ 5 ಲಕ್ಷ ಪೋಡಿ ದುರಸ್ತಿ ಮಾಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.

ಹೊಸಕೋಟೆ ಟೌನ್ ನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಅವರು ಮಾತನಾಡಿ ನಮ್ಮ ಸರ್ಕಾರ ಬಂದು ಒಂದು ಸಾವಿರ ದಿನಗಳು ಪೂರೈಸಿದೆ. ಸರ್ಕಾರದ ಸಾವಿರ ದಿನಗಳ ಕೆಲಸ ಸಮರ್ಪಣೆ ಮಾಡುವುದು ನಮ್ಮ ಉದ್ದೇಶ. ನಾವು ಏನು ಕೆಲಸ ಮಾಡಿದ್ದೇವೆ ಅದನ್ನು ನಿಮಗೆ ತೋರಿಸಬೇಕು ಎನ್ನುವ ಉದ್ದೇಶದಿಂದ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯ 3500 ದರಖಾಸ್ತು ಪೋಡಿ, 75 ಕಂದಾಯ ಗ್ರಾಮಗಳ ಹಕ್ಕುಪತ್ರ, 10,100 ಪೌತಿ ಖಾತೆ, 2000 ಸಾಮಾಜಿಕ ಭದ್ರತೆಯ ಅಭಿಯಾನ ಸೇರಿ ಒಟ್ಟು 15,675 ಕಂದಾಯ ಸೇವೆಗಳ ದಾಖಲೆಗಳನ್ನ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ*

ಇಂದಿರಾಗಾಂಧಿ, ದೇವರಾಜ ಅರಸು ಕಾಲದಲ್ಲಿ ರೈತರಿಗೆ ಮಂಜೂರು ಆಗಿದ್ದ ಜಮೀನುಗಳಗೆ ಪೋಡಿ, ಸ್ಕೆಚ್, ಕ್ರಯ, ಆಕಾರ್ಬಂದ್ ಆಗಿರಲಿಲ್ಲ. ದರಖಾಸ್ತು ಜಮೀನುಗಳು ಹಾಗೆ ಉಳಿದಿದ್ದವು. ದಾಖಲೆ ಇಲ್ಲ ಅಂದ್ರೆ ನೀವು ಆ ಜಮೀನು ಮೇಲೆ ಏನು ಮಾಡುವುದಕ್ಕೆ ಆಗುವುದಿಲ್ಲ, ಮಾಲಿಕತ್ವಕ್ಕೆ ಗ್ಯಾರಂಟಿ ಇರಲಿಲ್ಲ. ಪೋಡಿ ಮಾಡಲು ಹಿಂದಿನ ಸರ್ಕಾರಗಳು ಆಸಕ್ತಿ ತೋರಿಸಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ವೆ, ಪೋಡಿ ದುರಸ್ತಿ, ಸ್ಕೆಚ್, ಪಹಣಿಯೊಂದಿಗೆ ಭೂ ಗ್ಯಾರಂಟಿ ತರಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷ 1238 ಪೋಡಿ ದುರಸ್ತಿ ಆಗಿತ್ತು, ಪ್ರಸ್ತುತ 4238 ಪೋಡಿ ಪ್ರಕರಣ ದುರಸ್ತಿ ಮಾಡಲಾಗಿದೆ. ಅರ್ಜಿ ಕೊಡಿ, ಕಚೇರಿಗೆ ಬನ್ನಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡದೇ ಸ್ವಯಂ ಪ್ರೇರಿತರಾಗಿ ರೈತರ ಮನೆ ಬಾಗಿಲಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿದೆ. ಇದು ನಮ್ಮ ಗ್ಯಾರಂಟಿ ಎಂದರು.

ಹಿಂದೆ ಒಂದು ಪೋಡಿ ಮಾಡಿಸಲು ಅರ್ಜಿ ನೀಡಿದರೆ. ರೈತರು ಕಚೇರಿಗೆ ಸುತ್ತಿ ಸುತ್ತಿ ಆಗೊದಿಲ್ಲ ಅಂತ ಸುಮ್ಮನೆ ಆಗುತ್ತಿದ್ದರು. ಒಂದು ಎಕರೆ ಪೋಡಿ ಗೆ 5 ಲಕ್ಷ, 10 ಲಕ್ಷ, ರಸ್ತೆ ಪಕ್ಕದ ಜಮೀನುಗಳಿಗೆ 15 ಲಕ್ಷ ಮಧ್ಯವರ್ತಿಗಳು ಲಂಚ ಕೇಳುತ್ತಾರೆಎಂದು ಹಲವು ರೈತರು ಹೇಳುತ್ತಿದ್ದರು. ಮಧ್ಯವರ್ತಿಗಳ ಹಾವಳಿ ಇತ್ತು. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಉಚಿತವಾಗಿ ಎಲ್ಲಾ ಸೇವೆಗಳನ್ನು ಮಾಡಿಕೊಡಲಾಗುತ್ತಿದೆ. 1955 ರಲ್ಲಿ ಜಮೀನು ಮಂಜೂರು ಆಗಿರೋದು ಈಗ ಪೋಡಿ ಆಗಿದೆ ಎಂದು ಹೊಸಕೋಟೆ ತಹಶೀಲ್ದಾರ್ ತಿಳಿಸಿದ್ದಾರೆ. ಮಂಜೂರಾಗಿ 70 ವರ್ಷ ಆಗದಿರುವುದು ಈಗ ಆಗಿರುವುದು ನಮ್ಮ ಸರ್ಕಾರದ ಗ್ಯಾರಂಟಿ ಎಂದರು.

ಹೊಸಕೋಟೆಯಲ್ಲಿ 136 ಮನೆ ಸೇರಿ
ಜಿಲ್ಲೆಯಲ್ಲಿ 240 ಮನೆಗಳಿಗೆ ಊರಿನ ದಾಖಲೆ ಇಲ್ಲ, ಕಂದಾಯ ಗ್ರಾಮಗಳೆಂದು ಘೋಷಣೆ ಆಗಿಲ್ಲ. ರಾಜ್ಯದಾದ್ಯಂತ ದಾಖಲೆ ಇಲ್ಲದ 9181 ಮನೆಗಳು ಇವೆ ಅವರೆಲ್ಲರಿಗೂ ಹಕ್ಕುಪತ್ರ ನೀಡಲಾಗುವುದು ಎಂದರು.

2,20,000 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 10000 ಮನೆಗಳಿಗೆ ಹಕ್ಕು ಪತ್ರ ನೀಡಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡಲಿದ್ದೇವೆ. ಕ್ರಯಪತ್ರ ಇದ್ದರೆ ಪಂಚಾಯಿತಿ ಬಿ ಖಾತಾ ಹಕ್ಕು ಪತ್ರ ಪಡೆಯಬಹುದು ಎಂದರು.

*49 ಲಕ್ಷ ಖಾತೆಗಳು ಮೃತರ ಹೆಸರಿನಲ್ಲಿ ಇದೆ*

ರಾಜ್ಯದಲ್ಲಿ ಮೃತರ ಹೆಸರಿನಲ್ಲಿ 49 ಲಕ್ಷ ಖಾತೆಗಳಿದ್ದವು. ಪ್ರಸ್ತುತ 13 ಲಕ್ಷ ಫವತಿ ಖಾತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 14,000 ಫವತಿ ಖಾತೆ ಮಾಡಲಾಗಿದೆ. ರೈತರ ಮನೆ ಬಾಗಿಲಿಗೆ ಹೋಗಿ ವಾರಸುದಾರರಿಗೆ ಫವತಿ ಖಾತೆ‌ಮಾಡಲಾಗಿದೆ. ಈ ವರ್ಷ ರಾಜ್ಯದಲ್ಲಿ 15 ಲಕ್ಷ ಫವತಿ ಖಾತೆ ಮಾಡುವ ಗುರಿ ಹೊಂದಲಾಗಿದೆ.

ನಮ್ಮ ಸರ್ಕಾರ ಬಂದಾಗ ಆರಂಭದಲ್ಲಿ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್ಗಳಲ್ಲಿ ಸುಮಾರು 10,774 ಕೋರ್ಟ್ ಕೇಸ್ ಗಳಿ ಬಾಕಿ ಉಳಿದಿದ್ದವು. ಈಗ ಕೇವಲ 488 ಬಾಕಿ ಇದೆ. 99% ಬಾಕಿ ಕೇಸ್ ಗಳ ವಿಲೇವಾರಿ ಮಾಡಲಾಗಿದೆ ಎಂದರು.

*ಭೂ ಸುರಕ್ಷಾ ಯೋಜನೆ:73 ಕೋಟಿ ಪುಟಗಳ ಸ್ಕ್ಯಾನ್*

ಆನ್ಲೈನ್ ನಲ್ಲಿ ಈ ಆಫಿಸ್ ವ್ಯವಸ್ಥೆ ಜಾರಿಗೆ ತಂದು ಪಾರದರ್ಶಕ ಆಡಳಿತ ಸೇವೆ ನೀಡುತ್ತಿದ್ದೇವೆ. ಹಿಂದೆ ದಾಖಲೆ ಪಡೆಯಲು ಅಲೆದಾಟ, ಬೇರೆ ಮಾರ್ಗದಲ್ಲಿ ಹೋದರೆ ಬೇಗ ಸಿಗುತ್ತಿತ್ತು, ಫೈಲ್ ಗಳ ಮಿಸ್ಸಿಂಗ್, ದೇವನಹಳ್ಳಿಯಲ್ಲಿ ರೆಕಾರ್ಡ್ ರೂಂಗೆ ಬೆಂಕಿ ಹಾಕಿದ್ದರು, ತಿದ್ದುಪಡಿ, ಬೋಗಸ್, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಆರೋಪ ಇವೆಲ್ಲ ಸಮಸ್ಯೆಗಳ ಪರಿಹಾರಕ್ಕೆ ಭೂ ಸುರಕ್ಷಾ ಯೋಜನೆ ಜಾರಿಗೆ ತಂದೆವು. ತಾಲ್ಲೂಕು,ಎಸಿ, ಡಿಸಿ ಆಫೀಸ್ ನಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲಿ ಸರ್ಟಿಫೈಡ್ ಕಾಪಿಯನ್ನು ಬೆರಳ ತುದಿಯಲ್ಲಿ ಪಡೆದುಕೊಳ್ಳಬಹುದು. ಪ್ರಸ್ತುತ 73 ಕೋಟಿ ಪುಟಗಳ ಸ್ಕ್ಯಾನ್ ಮಾಡಲಾಗಿದೆ. ಈ ಯೋಜನೆಯಿಂದ ಮಧ್ಯವರ್ತಿಗಳ ಹಾವಳಿ ಇಲ್ಲ, ನಕಲಿ ದಾಖಲೆ, ಪೋರ್ಜರಿ, ತಿದ್ದುಪಡಿ, ಫೈಲ್ ಮಿಸ್ಸಿಂಗ್ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ.

ಕಂದಾಯ ಕೆಲಸಗಳು ಕ್ಷಿಪ್ರವಾಗಿ ನಡೆಯಲು 1219 ಲೈಸೆನ್ಸ್ ಸರ್ವೇಯರ್ ಇದ್ದಾರೆ. ಅವರಿಗೆ ರೋಬೋ ಮಿಷನರಿ ಕೊಟ್ಟು ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಎಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ರೈತರ ಮನೆಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೆ 1000 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.‌ 750 ಸರ್ವೆಯರ್ ನೇಮಕಾತಿ ಮಾಡಲಾಗುತ್ತಿದೆ. ರಾಜ್ಯಾದ್ಯಂತ 7850 ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. ಇವೆಲ್ಲವೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸಗಳು ಎಂದು ಸಚಿವರು ವಿವರಿಸಿದರು.

*ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು* ಮಾತನಾಡಿ 75 ವರ್ಷಗಳಿಂದ ಸಾಕಷ್ಟು ರೈತರ ಭೂಮಿ ಪೋಡಿ, ಆಕಾರ್ ಬಂದ್, ಹಕ್ಕು ಪತ್ರ ಸಿಕ್ಕಿಲ್ಲ ಎಂಬ ಸಮಸ್ಯೆ ಇತ್ತು. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೃಷ್ಣ ಬೈರೇಗೌಡ ಅವರಿಗೆ ಕಂದಾಯ ಇಲಾಖೆ ನೀಡಿದೆ. ರೈತರು ಕಚೇರಿಗೆ ಅಲೆಯುವುದು, ರೈತರ ಸಮಯ ವ್ಯರ್ಥ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವರು ನಿರಂತರವಾಗಿ ಕೆಲಸ ಮಾಡಿ ಮನೆ ಮನೆಗೆ ಹಕ್ಕು ಪತ್ರ ನೀಡುವ ಕೆಲಸ ಮಾಡುತ್ತಿದ್ದಾರೆ. ಇದರ ಕೀರ್ತಿ ಕೃಷ್ಣ ಬೈರೇಗೌಡ ಅವರಿಗೆ ಸಲ್ಲಬೇಕು. ರಿಯಲ್ ಎಸ್ಟೇಟ್ ಡೆವೆಲಪರ್ಸ್, ರಿಯಲ್ ಎಸ್ಟೇಟ್ ಮಾಫಿಯಾಗಳು ಅನಗತ್ಯವಾಗಿ ರೈತರಿಗೆ ಕಿರುಕುಳ, ದಾಖಲೆ ತಿರುಚುವುದು, ತಿದ್ದುಪಡಿ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ದಾಖಲೆಗಳ ಕಳವು ಇಂತಹ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.

ಪ್ರತಿ ತಾಲ್ಲೂಕಿನಲ್ಲಿ 2000 ದಿಂದ 5000 ಮನೆ, ಸೈಟ್ ಗಳ ಅವಶ್ಯಕತೆ ಇದೆ. ಪಂಚಾಯಿತ್ ರಾಜ್ ಸಚಿವರು, ಕಂದಾಯ ಸಚಿವರು ಒಟ್ಟಾಗಿ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಸಭೆ ನಡೆಸಿ. ಎಲ್ಲೆಲ್ಲಿ ಸೈಟ್, ಮನೆ ನೀಡಲು ಅವಕಾಶ ಇದೆ ಅಲ್ಲಿ ಅತ್ಯಂತ ಜರೂರಾಗಿ ವಿಶೇಷ ಸಭೆ ಕರೆದು ಹಂತಹಂತವಾಗಿ ಮನೆ, ನಿವೇಶನ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ನೀಡಿದರು.

*ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ* ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದ ಕಾರ್ಯಕ್ರಮ, ಯೋಜನೆಗಳು ಸಮಾಜದ ಕೆಳವರ್ಗದ ಏಳಿಗೆಗಾಗಿ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರು ಉಳುವವನಿಗೆ ಭೂಮಿ‌ ಎಂದು ರೈತರ ಪರವಾಗಿ ಕ್ರಾಂತಿ ಮಾಡಿದರು. ಈಗ ಸಚಿವ ಕೃಷ್ಣಭೈರೇಗೌಡರು ಕಂದಾಯ ಇಲಾಖೆಯ ವತಿಯಿಂದ ಪೋಡಿ, ಪೌತಿಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ವಿವಿಧ ಯೋಜನೆಗಳ ಮೂಲಕ‌ ಸಮಾಜದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ, ಎಂಎಲ್ಸಿ ರವಿ, ಪುಟ್ಟಣ್ಣ, ನೆಲಮಂಗಲ ಶಾಸಕರಾದ ಶ್ರೀನಿವಾಸ್, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಸ್ವಾಮಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಎಡಿಸಿ ಸೈಯಿದಾ ಆಯಿಷಾ, ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೇಶವ್ ಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Ramesh Babu

Journalist

Recent Posts

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

7 hours ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

13 hours ago

80ರ ಹೊಸ್ತಿಲಲ್ಲಿ ಭಾರತ…..

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ…

19 hours ago

ಆಹಾರ ಭದ್ರತೆಯಲ್ಲಿ ಯಾವುದೇ ಲೋಪವಾಗದಿರಲಿ- ಆಹಾರ ಆಯೋಗ ಅಧ್ಯಕ್ಷ ಡಾ.ಹೆಚ್ ಕೃಷ್ಣ

ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಮಕ್ಕಳಿಗೆ, ಮಹಿಳೆಯರಿಗೆ ದುರ್ಬಲರಿಗೆ, ಹಿರಿಯರಿಗೆ ಆಹಾರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷ ಕಂಡು…

20 hours ago

ನಾಳೆ(ಆ.14) ತೂಬಗೆರೆ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ (ಎಂ.ಪಿ.ಆರ್.ಎ.ಸಿ.ಎಸ್.) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ…

2 days ago

“ನನಗೆ ನೀರು ಬೇಕು, ಮಾತಾಡಲ್ಲ” — ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು…

2 days ago