ಬೆಂ.ಗ್ರಾಜಿಲ್ಲೆಯಲ್ಲಿ 49559.57 ಹೆಕ್ಟೇರ್ ಬೆಳೆಹಾನಿ

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ, ಎಂ.ಎನ್.ಸಿ.ಎಫ್.ಸಿ ಯ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ನೇತೃತ್ವದ ತಂಡವು ಇಂದು ಪರಿಶೀಲಿಸಿತು.

ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ವಿಶ್ವನಾಥಪುರ ಬಳಿಯ ರೈತರ ಜಮೀನಿನಲ್ಲಿ ರಾಗಿ ಬೆಳೆಹಾನಿಯನ್ನು ವೀಕ್ಷಣೆ ಪ್ರಾರಂಭ ಮಾಡಲಾಯಿತು. ಮಳೆ ಇಲ್ಲದೆ ತೆನೆ ಬರದ ರಾಗಿ ಬೆಳೆ ಕುರಿತು ರೈತರು ಅಳಲು ತೋಡಿಕೊಂಡರು. ಅಂತರ್ಜಲ ಬತ್ತಿರುವ ಕಾರಣ ಕಲ್ಲು ಬಾವಿಯಲ್ಲಿ ನೀರಿಲ್ಲ, ಸಾವಿರ ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರಿಲ್ಲ ಎಂದು ರೈತರು ಸಮಸ್ಯೆ ವಿವರಿಸಿದರು.

ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಸ್ವತಃ ರೈತರೊಂದಿಗೆ ಚರ್ಚಿಸಿ, ಬೆಳೆಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.

ನಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಹಾಗೂ ಹೊನ್ನಘಟ್ಟ ಗ್ರಾಮಗಳಲ್ಲಿ ರಾಗಿ, ನವಣೆ, ಮುಸುಕಿನ ಜೋಳ ಬೆಳೆ ಹಾನಿ ವೀಕ್ಷಿಸಿದರು.

ಕೋಳೂರು ರೈತರು ಮಾತನಾಡಿ ರಾಗಿ ಬೆಳೆಗೆ ಬೀಜ, ಬಿತ್ತನೆ, ರಸಗೊಬ್ಬರ ಸೇರಿದಂತೆ ಎಕರೆಗೆ 30,000 ಸಾವಿರ ಅಧಿಕ ಖರ್ಚು ಮಾಡಲಾಗಿದೆ, ಮಳೆ ಇಲ್ಲದೆ ಎರಡು ಬಾರಿ ಬಿತ್ತನೆ ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು. ಮುಸುಕಿನ ಜೋಳ ಬೆಳೆಗೆ 25000 ಖರ್ಚು ಮಾಡಲಾಗಿದೆ. ಬೆಳೆ ಹಾನಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ಸಮಸ್ಯೆ ವಿವರಿಸಿದರು. ನೆಲಮಂಗಲದ ಸೀರಗಾನಹಳ್ಳಿಯಲ್ಲಿ ರಾಗಿ ಬೆಳೆ ವೀಕ್ಷಿಸಿದರು.

ಮಳೆಕೊರತೆಯಿಂದ ಬೆಳೆಯು ಸಂಪೂರ್ಣ ಹಾನಿಯಾಗಿದೆ. ಸ್ಚಲ್ಪ ಮಳೆಯಾಗಿರುವುದರಿಂದ ಹಸಿರು ಕಾಣಿಸುತ್ತಿದೆ. ಆದರೆ ಇಳುವರಿ ಇಲ್ಲ ಎಂದು ರೈತರು ಹೇಳಿದರು.

ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರು, ಬೆಳೆವಿಮೆ ಪಾವತಿ, ಬೀಜ-ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು.

ಜಿಲ್ಲೆಯಲ್ಲಿ 49559.57 ಹೆಕ್ಟೇರ್ ಬೆಳೆಹಾನಿ: 

ಜಿಲ್ಲೆಯಲ್ಲಿ ಮಳೆಕೊರತೆಯಿಂದ  49559.57 ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಅಪಾರ ಬೆಳೆಹಾನಿಯಾಗಿದೆ. ಆದರೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 85 ಕೋಟಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿತ್ರ ಸಲ್ಲಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರು ತಿಳಿಸಿದರು.

ರಾಗಿ 460003.44 ಹೆಕ್ಟೇರ್, ಮುಸುಕಿನ ಜೋಳ 3477.68 ಹೆಕ್ಟೇರ್, ತೊಗರಿ 68.95 ಹೆಕ್ಟೇರ್, ನೆಲಗಡಲೆ 9.50 ಹೆಕ್ಟೇರ್ ಸೇರಿದಂತೆ ಒಟ್ಟು 49559.57 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ ಎಂದು ತಿಳಿಸಿದರು.

ಬರ ಪರಿಸ್ಥಿತಿ-ಕೇಂದ್ರ ತಂಡಕ್ಕೆ ಮನವರಿಕೆ

ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ  ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಅಂಕಿ-ಅಂಶಗಳು ಮತ್ತು ಛಾಯಾಚಿತ್ರ ಸಮೇತ ಮಾಹಿತಿಯನ್ನು ಬರಪರಿಸ್ಥಿತಿಯನ್ನು ಮನವರಿಕೆ ಮಾಡಿದರು.

ಜಿಲ್ಲೆಯ ಎಲ್ಲಾ ನಾಲ್ಕು ತಾಲ್ಲೂಕುಗಳಲ್ಲಿ ಬಿತ್ತನೆ ಸಂದರ್ಭದಲ್ಲಿ ಮೂರು ವಾರಕ್ಕಿಂತ ಹೆಚ್ಚು ಅವಧಿಯವರೆಗೆ ಮಳೆಯಾಗಿರಲಿಲ್ಲ. ಆದ್ದರಿಂದ ಬರ‌ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಜೂನ್ ಮಾಹೆಯಲ್ಲಿ ಮಳೆ ಬಾರದಿರುವುದರಿಂದ ಯಾವುದೇ ರೀತಿಯ ಬಿತ್ತನೆಕಾರ್ಯ ಆರಂಭಗೊಳ್ಳಲಿಲ್ಲ. ಜುಲೈ ಮೊದಲ ಮೂರು ವಾರ ಮಳೆ ಬಂದಿರಲಿಲ್ಲ, ಕೊನೆಯ ವಾರದಲ್ಲಿ ಮಾತ್ರ ಮಳೆಯಾಗಿದ್ದರಿಂದ ಆಗ ಬಿತ್ತನೆಕಾರ್ಯ ಆರಂಭಗೊಂಡಿತು ಎಂದರು.

 

ಆಗಸ್ಟ್ ಮಾಹೆಯಲ್ಲೂ ಮಳೆಕೊರತೆಯಾಗಿದ್ದರಿಂದ ರಾಜ್ಯ ಸರಕಾರವು ಬರ ಪರಿಸ್ಥಿತಿಯನ್ನು ಘೋಷಿಸಿತು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಎಲ್ಲಾ ತಾಲ್ಲೂಕುಗಳಲ್ಲಿ ಮಳೆಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಬೆಳೆಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಬೆಳೆಹಾನಿ, ಕುಡಿಯುವ ನೀರಿನ ಕೊರತೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.

 ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಕೊರತೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು ಎಂದು ತಿಳಿಸಿದರು.

ಕೇಂದ್ರ ತಂಡವು ಜಿಲ್ಲೆಗೆ ಭೇಟಿ ನೀಡಿದ್ದು, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸಂಚರಿಸಿ ಬೆಳೆಹಾನಿಯನ್ನು ವೀಕ್ಷಿಸುವ ಮುಂಚೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು..

ಇದಾದ ಬಳಿಕ ಜಿಲ್ಲೆಯ ಬರ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಿಸಿತು.

Leave a Reply

Your email address will not be published. Required fields are marked *

error: Content is protected !!