ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಮನುಷ್ಯರು ಮಾತ್ರವಲ್ಲ, ಪ್ರಾಣಿ-ಪಕ್ಷಿ ಸೇರಿದಂತೆ ಜೀವ ಸಂಕುಲಗಳು ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಲ್ಲಿ ಜಲಮೂಲಗಳು, ಕೆರೆ ಕಟ್ಟೆಗಳು ಬರಿದಾಗುತ್ತಿದ್ದು, ಪ್ರಾಣಿ, ಪಕ್ಷಿಗಳು ಬಿಸಿಲಿನ ಬೇಗೆ ತಾಳಲಾರದೆ, ಸರಿಯಾಗಿ ನೀರು ಸಿಗದೆ ನಿತ್ರಾಣಗೊಳ್ಳುತ್ತಿವೆ.
ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ತಾಲೂಕಿನ ತೂಬಗೆರೆ ಹೋಬಳಿ ದೇವರಬೆಟ್ಟ ಅರಣ್ಯ ಪ್ರದೇಶದಲ್ಲಿ ಪರಿಸರ ಸಂರಕ್ಷಣಾ ಸಮಿತಿ ಹಾಗು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಡು ಪ್ರಾಣಿಗಳಿಗೆ ನೀರುಣಿಸುವ ಉದ್ದೇಶದಿಂದ ತೊಟ್ಟಿಗಳಿಗೆ ಟ್ಯಾಂಕರ್ ಮುಖಾಂತರ ತೊಟ್ಟಿಗಳಿಗೆ ನೀರು ತುಂಬಿಸಲಾಯಿತು.
ದೇವರ ಬೆಟ್ಟ ಅರಣ್ಯದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಅರಣ್ಯದಲ್ಲಿ ನೀರಿನ ಅಂಶ ಕಡಿಮೆಯಾಗಿ ಹಳ್ಳ ಕೊಳ್ಳಗಳು ನೀರಿಲ್ಲದೆ ಬತ್ತಿ ಹೋಗಿವೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗಿ ಕಿಲೋ ಮೀಟರ್ ಗಟ್ಟಲೆ ನಡೆದು ಹೋಗಿ ನೀರು ಕುಡಿಯಲು ಕಾಡುಪ್ರಾಣಿಗಳಿಗೆ ಅಸಾಧ್ಯ. ಇದನ್ನ ತಪ್ಪಿಸಲು ಕಾಡಿನ ಒಳಗೆ ಸಿಮೆಂಟ್ ತೊಟ್ಟಿಗಳಿಗೆ ನೀರು ತುಂಬಿಸಲಾಯಿತು.