ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

ಕೋಲಾರ: ರಾಜ್ಯಾದ್ಯಂತ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬಿತ್ತನೆ ಬೀಜ, ರಸಗೊಬ್ಬರ ಬೆಲೆಯನ್ನು ಇಳಿಸಿ ನಕಲಿ ಕಳಪೆ ವಸ್ತುಗಳ ಮಾರಾಟ ಜಾಲವನ್ನು ತಡೆಗಟ್ಟುವಂತೆ ಒತ್ತಾಯಿಸಿ ಕೆ.ಪಿ.ಆರ್.ಎಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ, ಈ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲವನ್ನು ಈ ವರ್ಷ ರಾಜ್ಯ ಅನುಭವಿಸಿದೆ. ಯಾವುದೇ ಅರ್ಥ ಪೂರ್ಣವಾದ ಬರಪರಿಹಾರದ ಕ್ರಮಗಳಿಲ್ಲದೇ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ರೈತಾಪಿ ಸಮುದಾಯವನ್ನು ಬಿತ್ತನೆ ಬೀಜ, ರಸಗೊಬ್ಬರ ಬೆಲೆಗಳ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಬೆಲೆಗಳನ್ನು ಇಳಿಸಬೇಕು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವ ರೈತರನ್ನು ಬೀಜ ಗೊಬ್ಬರಗಳ ವ್ಯಾಪಾರಿಗಳು ಶೋಷಣೆ ಮಾಡದಂತೆ ಕ್ರಮ ವಹಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿನ ಮಾರಾಟವನ್ನು ತಡೆಗಟ್ಟಬೇಕು, ಬಲವಂತದ ಸಾಲ ವಸೂಲಾತಿ ವಿರುದ್ಧ ರೈತರಿಗೆ ರಕ್ಷಣೆ ಒದಗಿಸಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ವ್ಯಾಪಕ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ವಹಿಸಬೇಕು ಸಾಲಕ್ಕೆ ಬರ ಪರಿಹಾರದ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಕೃಷಿಗೆ ಸಂಬಂಧಿಸಿದ ಅಗತ್ಯ ಬೆಂಬಲವನ್ನು ಒದಗಿಸಬೇಕು ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ರೈತರಿಗೆ ತುಂಬಾ ಅನುಕೂಲವಾಗಿರುವ ಬ್ಯಾಟರಿ ಸ್ಪೈಯರ್ ಗಳನ್ನು ಸಬ್ಸಿಡಿ ದರದಲ್ಲಿ ನೀಡುವುದು ಮುಂದುವರಿಸಬೇಕು. ಹನಿ ನೀರಾವರಿ ಸಾಮಗ್ರಿಗಳನ್ನು ಸಹಾಯ ಧನ ಅಡಿಯಲ್ಲಿ ಏಳು ವರ್ಷಕ್ಕೊಮ್ಮೆ ಎಸ್ ಸಿ ಎಸ್ ಟಿ ಜನಾಂಗಕ್ಕೆ ನೀಡುತ್ತಿದ್ದು, ಅದನ್ನು ಸಾಮಾನ್ಯ ರೈತರಿಗೂ ವಿಸ್ತರಿಸಬೇಕು. ಕೃಷಿಭಾಗ್ಯ ಯೋಜನೆಯಲ್ಲಿ ಕೃಷಿಹೊಂಡ ನಿರ್ಮಾಣಗಳನ್ನು ಮಾಡಿದ್ದು ,ಅದರ ಟಾರ್ಪಲ್ಲುಗಳು ಶೀಥಲಗೊಂಡಿದ್ದು ಕನಿಷ್ಠ 3 ವರ್ಷಕ್ಕೊಮ್ಮೆ ಹೊಸದಾಗಿ ಸಬ್ಸಿಡಿ ದರದಲ್ಲಿ ಟಾರ್ಪಲ್ ಗಳನ್ನು ನೀಡಬೇಕು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಸೋಲರ್ ತಂತಿಯನ್ನು ಅಳವಡಿಸಲು ಸರ್ಕಾರ ಸಹಾಯ ಧನ ನೀಡಬೇಕು. ಬರ ಪರಿಹಾರದ ಹಣ ಕೆಲವೇ ರೈತರಿಗೆ ಮಾತ್ರ ಸಿಕ್ಕಿದ್ದು ಅದು ಎಲ್ಲ ರೈತರಿಗೂ ಸಿಗುವ ರೀತಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಉಪಾಧ್ಯಕ್ಷರಾದ ಅಲಹಳ್ಳಿ ವೆಂಕಟೇಶಪ್ಪ, ಎನ್.ಎನ್ ಶ್ರೀರಾಮ್, ಗಂಗಮ್ಮ, ಕೆ.ವೆಂಕಟಪ್ಪ, ಮುಖಂಡರಾದ ಎಂ.ಎಸ್ ನಾಗರಾಜ್, ವೆಂಕಟಲಕ್ಷ್ಮಮ್ಮ, ನಾರಾಯಣಸ್ವಾಮಿ, ನಾರಾಯಣಪ್ಪ, ಚಿನ್ನಮ್ಮ, ಹರೀಶ್, ರಾಮಪ್ಪ,ಬಿ.ಸಿ. ರಾಮರೆಡ್ಡಿ, ಮಂಜುಳಾ, ಮುನಿರತ್ನಮ್ಮ ಮುಂತಾದವರಿದ್ದರು

Leave a Reply

Your email address will not be published. Required fields are marked *