ಕೋಮುವಾದಿ, ಜಾತಿವಾದಿ ಬಿಜೆಪಿ ಪಕ್ಷವನ್ನು ಸೋಲಿಸುವ ಸಮರ್ಥ ಅಭ್ಯರ್ಥಿಗೆ ಮತಹಾಕಿ. ಪ್ರಜಾಪ್ರಭುತ್ವದಲ್ಲಿ ಮತದಾನದಿಂದ ಮಾತ್ರ ಯಾವುದೇ ಒಂದು ಜನವಿರೋಧಿ ಆಡಳಿತವನ್ನು ಮಣಿಸಲು ಸಾಧ್ಯ ಎಂದು ರಾಷ್ಟ್ರಕವಿ ಕುವೆಂಪು ಹೋರಾಟ ವೇದಿಕೆಯ ಮುಖಂಡರಾದ ಬೆಳವಂಗಲ ಪ್ರಭಾ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಎಂದೂ ಸಹ ಧರ್ಮ, ಜಾತಿ ಆಧಾರದ ಮೇಲೆ ಮತದಾನ ನಡೆದಿಲ್ಲ. ಇಲ್ಲಿನ ಮತದಾರರ ಮನಸ್ಥಿತಿಯೇ ಜಾತ್ಯಾತೀತವಾಗಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಲಿಂಗಯ್ಯ, ಎಚ್.ಮುಗುವಾಳಪ್ಪ, ವಿಶ್ವಮಟ್ಟದ ಚಿಂತಕ ಡಿ.ಆರ್.ನಾಗರಾಜ್ ಅವರಂತಹ ಮಹಾನ್ ನಾಯಕರು ಹಲವಾರು ಜನಪರವಾದ ಚಳುವಳಿಗಳನ್ನು ಕಟ್ಟಿಬೆಳೆಸಿರುವ ಕ್ಷೇತ್ರ ಇದಾಗಿದೆ. ಗ್ರಾಮಗಳಲ್ಲಿ ನೆಮ್ಮದಿ ನೆಲಸಬೇಕಿದ್ದರೆ, ಪರಸ್ಪರ ಜಗಳ ತಂದಿಡುವ ಪಕ್ಷದ ಅಭ್ಯರ್ಥಿಗೆ ಮತ ನೀಡದೆ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕಿದೆ. ಸುಳ್ಳನ್ನೇ ಸತ್ಯದಂತೆ ಹೇಳಿ ಜನರನ್ನು ಮೆಚ್ಚಿಸುವ ಪ್ರವೃತ್ತಿಯ ಜನರಿಗೆ ಕಡಿವಾಣ ಹಾಕಬೇಕಿದೆ ಎಂದರು.
ಪ್ರಗತಿಪರ ಚಿಂತಕ, ಲೇಖಕ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ನಮ್ಮೆಲ್ಲರ ಬದುಕಿನ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನೇ ಬುಡಮೇಲು ಮಾಡುವಂತಹವರಿಗೆ ಮತದಾನ ಮಾಡಬಾರದು. ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನೇ ತಿರುಚಿ ಬರೆದಂತಹವರನ್ನು ಪಠ್ಯ ಪುಸ್ತಕ ರಚನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವಂತಹ ಬಿಜೆಪಿ ಆಡಳಿತ ಮತ್ತೆ ರಾಜ್ಯದಲ್ಲಿ ಬರಬಾರದು.
ನಮ್ಮೆಲ್ಲರ ಹೆಮ್ಮೆಯ ನಂದಿನಿ ಸೇರಿದಂತೆ ಬ್ಯಾಂಕ್ಗಳನ್ನು ವಿಲೀನ ಮಾಡುವ ಮೂಲಕ ಪ್ರಾದೇಶಿಕತೆಯ ಕುರುಹನ್ನೇ ನಾಶ ಮಾಡಲು ಮುಂದಾಗಿರುವ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಇರುವ ಅವಕಾಶವೇ ಮತದಾನ. ಸ್ವಚ್ಛ ಭಾರತ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ವ್ಯರ್ಥವಾಗಿದೆ. ಆದರೆ ವಾಸ್ತದಲ್ಲಿ ಮಾತ್ರ ಏನೂ ಆಗಿಲ್ಲ. ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತ ಆಡಳಿತಕ್ಕೆ ಬರುವವರನ್ನು ತಡೆಯಬೇಕಿದೆ ಎಂದರು.
ರಾಷ್ಟ್ರಕವಿ ಕುವೆಂಪು ಹೋರಾಟ ವೇದಿಕೆಯ ಸಂಚಾಲಕ ಜಗದೀಶ್ ಮಾತನಾಡಿ, ಭ್ರಷ್ಟಾಚಾರಿಗಳಿಗಿಂತಲು ಕೋಮುವಾದಿಗಳು ಹೆಚ್ಚು ಅಪಾಯಕಾರಿ. ಅಂಬೇಡ್ಕರ್ ವಾದ,ಗಾಂಧಿ ವಾದ,ಲೋಹಿಯವಾದ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಸಾಧ್ಯ ಎಂದರು.
ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿರುವ ಶಾಸಕರನ್ನೇ ಖರೀದಿಸುವ ವಾಮ ಮಾರ್ಗವನ್ನು ರಾಜ್ಯಕ್ಕೆ ಪರಿಚಿಯಿಸಿದವರು ಬಿಜೆಪಿ ಮುಖಂಡರು. ನೋಟುಗಳ ಅಮಾನೀಕರಣಕ್ಕೆ ನೀಡಿದ್ದ ಎಲ್ಲಾ ಕಾರಣಗಳು ಸಹ ಸುಳ್ಳಾಗಿವೆ. ಯುವಜನರಿಗೆ ಉದ್ಯೋಗ,ಕಪ್ಪು ಹಣ ತರುವುದು ಈ ಎಲ್ಲಾ ಭರವಸೆಗಳು ಹತ್ತು ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ಹುಸಿಯಾಗಿವೆ ಎಂದರು.