ಕುಡಿದ ಅಮಲಿನಲ್ಲಿ ಸ್ನೇಹಿತನನ್ನ ಕೊಲೆ ಮಾಡಿರುವಂತಹ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ಹಾರೊಬಂಡೆ ಬಳಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಾಲೂಕಿನ ಹಾರೋಬಂಡೆ ಗ್ರಾಮದ ವಿನೋದ್ ಗೌಡ (22) ಹಾಗೂ ಶಿಡ್ಲಘಟ್ಟ ತಾಲೂಕಿನ ಕೆಜಿ ಹಳ್ಳಿ ಗ್ರಾಮದ ಅಭಿಷೇಕ್ (19) ಎಂದು ತಿಳಿದು ಬಂದಿದೆ.
ಹಾರೋಬಂಡೆ ಗ್ರಾಮದ ಮೃತ ಯುವಕ ಮಾರುತೇಶ್ ಪಂಬ್ಲರ್ ಕೆಲಸ ಮಾಡುತ್ತಿದ್ದನು. ಸ್ನೇಹಿತರಾದ ವಿನೋದ್ ಗೌಡ ಹಾಗೂ ಅಭಿಷೇಕ್ ಜೊತೆಗೆ ಕುಡಿಯಲು ಬಾರ್ ಗೆ ಹೋಗಿದ್ದರು. ಇದೇ ವೇಳೆ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಮೃತ ಯುವಕ ಮಾರುತೇಶ್ ವಿನೋದ್ ಗೌಡ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಪ್ರತಿ ಬಾರಿಯೂ ನಾನೇ ಬಿಲ್ ಕಟ್ಟುತ್ತೇನೆ ನೀನು ಕುಡಿದು ಹೋಗುತ್ತೀಯಾ ಕುಂಟಾ ಎಂದು ಕರೆದ ವಿಚಾರಕ್ಕೆ ಕೋಪಗೊಂಡ ವಿನೋದ್ ಗೌಡ ಹಾಗೂ ಅಭಿಷೇಕ್ ಬಾಟಲ್ ನಿಂದ ತಲೆಗೆ ಹೊಡೆದು ಅದೇ ಬಾಟಲಿಯಲ್ಲಿ ಕತ್ತನ್ನು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಜ.29 ರಂದು ಮನೆಯಿಂದ ಹೊರಹೋದ ಮಗ ಎಷ್ಟೊತ್ತಾದರು ಮನೆಗೆ ವಾಪಸ್ ಬಾರದ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಜ. 31 ರಂದು ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಮಾರುತೇಶ್ ಕೊಲೆ ಆಗಿರುವುದು ಪತ್ತೆಯಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕೇವಲ ದೂರು ದಾಖಲಾದ ಸಮಯದಿಂದ 6 ಗಂಟೆಯ ಒಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.