ಬಾಕಿ ರೈತರ ರಾಗಿ ನೋಂದಣಿಗೆ ಅವಕಾಶ ನೀಡುವಂತೆ ಒತ್ತಾಯ: ರಾಗಿ ಖರೀದಿ ಕೇಂದ್ರದ ಮುಂದೆ ರೈತ ಸಂಘದಿಂದ ಪ್ರತಿಭಟನೆ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡುತ್ತಿರುವ ಸರ್ಕಾರ, ರೈತರಿಂದ ನೋಂದಣಿ ಪ್ರಕ್ರಿಯೆ ಮಾಡಿಸಿಕೊಂಡಿದೆ. ಆದರೆ, ತಾಲ್ಲೂಕಿನಲ್ಲಿ ಇನ್ನೂ ಒಂದೂವರೆ ಸಾವಿರ ರೈತರು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಅಂತಹ ರೈತರಿಂದ ನೋಂದಣಿ ಮಾಡಿಸಿಕೊಳ್ಳದೆ ನೋಂದಣಿ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿರುವುದನ್ನ ಖಂಡಿಸಿ ರೈತ ಸಂಘದಿಂದ‌ ನಗರದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಲಾಯಿತು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತೇಗೌಡ ಮಾತನಾಡಿ, ಈ ಬಾರಿ ಮಳೆ ತಡವಾಗಿದ್ದರಿಂದ ರೈತರು ರಾಗಿ ಬೆಳೆಯಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದರು. ಆದರೆ, ಅಕ್ಟೋಬರ್ ಅಂತ್ಯಕ್ಕೆ ಸುರಿದ ಉತ್ತಮ ಮಳೆಯಿಂದ ರಾಗಿ ಇಳುವರಿ ಚೆನ್ನಾಗಿ ಬಂದಿದೆ. ಆದರೆ, ತಡವಾಗಿ ಬೆಳೆ ಬಂದಿದೆ. ಇತ್ತ ಸರ್ಕಾರ ರೈತರಿಂದ ಖರೀದಿ ಮಾಡಲು ನೋಂದಣಿಗೆ ದಿನಾಂಕ ಘೋಷಣೆ ಮಾಡಿತ್ತು. ಈ ಅವಧಿಯಲ್ಲಿ ಬೆಳೆ ಸಂಪೂರ್ಣವಾಗದೆ ಹಲವು ರೈತರು ನೋಂದಣಿ ಮಾಡಿಸಿಕೊಂಡಿರಲಿಲ್ಲ. ಮಳೆಯ ಕೃಪೆಯಿಂದ ಉತ್ತಮವಾಗಿ ಬೆಳೆ ಬಂದಿದೆ. ಈಗ ರೈತರು ನೋಂದಣಿ ಮಾಡಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ ನೋಂದಣಿಯಾಗದ ರೈತರಿಗೆ ಮತ್ತೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಮಲ್ಲಪ್ಪ ರೈತರ ಅಹವಾಲನ್ನು ಸ್ವೀಕರಿಸಿ ಸರ್ಕಾರದ ಈ ವರ್ಷದ ಖರೀದಿ ಪ್ರಮಾಣದ ಗುರಿಯನ್ನ ಈಗಾಗಲೇ ತಲುಪಲಾಗಿದೆ. ನೋಂದಣಿ ಪ್ರಕ್ರಿಯೆ ಮತ್ತೆ ಆರಂಭವಾಗಬೇಕಾದರೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಸದ್ಯಕ್ಕೆ ಯಾವ ರೈತರಿಂದ ಎಷ್ಟು ಪ್ರಮಾಣದಲ್ಲಿ ರಾಗಿ ಇದೆ ಎಂಬುದರ ಮಾಹಿತಿಯನ್ನು ನನಗೆ ನೀಡಿ ಬಳಿಕ ನಾನು ಜಿಲ್ಲಾಧಿಕಾರಿಗಳು ಮತ್ತು ಆಹಾರ ಸಚಿವರ ಗಮನಕ್ಕೆ ತಂದು ಸರ್ಕಾರಕ್ಕೆ ಇಲ್ಲಿನ ರೈತರ ಸಮಸ್ಯೆಯನ್ನು ವರದಿ ನೀಡುವ ಕೆಲಸ ಮಾಡುತ್ತೇನೆ ಎಂದರು.

ತಹಶೀಲ್ದಾರ್ ರವರ ಭರವಸೆಗೆ ಮನ್ನಣೆ ನೀಡಿದ ರೈತರು ಪ್ರತಿಭಟನೆಯನ್ನ ವಾಪಸ್ ಪಡೆದರು.

ಈ ವೇಳೆ ತಹಶೀಲ್ದಾರ್ ಮಲ್ಲಪ್ಪ, ಆಹಾರ ಇಲಾಖೆಯ ಉಪನಿರ್ದೇಶಕ ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಸತೀಶ್ ಮತ್ತಿತ್ತರರು ಇದ್ದರು.

Leave a Reply

Your email address will not be published. Required fields are marked *

error: Content is protected !!